ಬೆಳ್ತಂಗಡಿ : ಕೌಶಲ್ಯ ತರಬೇತಿ ಮಾಹಿತಿ ಮೇಳ
ಬೆಳ್ತಂಗಡಿ,ಸೆ.6: ವಿದ್ಯಾವಂತ ಯುವಕ-ಯುವತಿಯರು ಉದ್ಯೋಗವಿಲ್ಲದೇ ಮನೆಯಲ್ಲಿರಬಾರದು ಎಂಬ ಚಿಂತನೆಯಿಂದ ಸರಕಾರ 18 ರಿಂದ 35ನೇ ವಯೋಮಿತಿಯೊಳಗಿನವರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ತರಬೇತಿಯನ್ನು ಪೂರ್ಣಗೊಳಿಸಿ ಸ್ವ-ಉದ್ಯೋಗದಲ್ಲಿ ತೊಡಗಿಸಿಕೊಂಡು ಸ್ವತಂತ್ರ ಬದುಕನ್ನು ಕಂಡುಕೊಳ್ಳಿ, ಇದಕ್ಕೆ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಶಾಸಕ, ರಾಜ್ಯ ಸಣ್ಣ ಕೈಗಾರಿಕ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಬುಧವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂಜೀವಿನಿ-ಕೆಎಸ್ಆರ್., ಎಲ್ಪಿಎಸ್., ರಾಜೀವ್ಗಾಂಧಿ ಚೈತನ್ಯ ಯೋಜನೆ, ಡಿಡಿಯು-ಜಿಕೆವೈ ಮತ್ತು ತಾಲುಕು ಪಂಚಾಯಿತಿ ಬೆಳ್ತಂಗಡಿ ಆಶ್ರಯದಲ್ಲಿ ಗ್ರಾಮೀಣ ನಿರುದ್ಯೋಗಿ ಯುವಕ ಯುವತಿಯರಿಗೆ ಆರ್. ಜಿ. ಸಿ. ವೈ ಮತ್ತು ಡಿ. ಡಿ. ಯು-ಜಿ.ಕೆ.ವೈ ಯೋಜನೆಯಡಿ ಅಭ್ಯರ್ಥಿಗಳ ಒಗ್ಗೂಡಿಸುವಿಕೆ, ಆಯ್ಕೆ ಮತ್ತು ಉದ್ಯೋಗ ಕಲ್ಪಿಸುವ ತಾಲೂಕು ಮಟ್ಟದ ಕೌಶಲ್ಯ ತರಬೇತಿ ಮಾಹಿತಿ ಮೇಳವನ್ನು ಉದ್ಘಾಟಿಸಿ ಮಾತಾಡಿದರು.
ತಾ. ಪಂ. ಮುಖ್ಯಕಾರ್ಯನಿರ್ವಾಹಣಾಧಿಕಾರಿ ಬಸವರಾಜ ಅಯ್ಯಣ್ಣನವರ್ ಪ್ರಸ್ತಾವಿಕವಾಗಿ ಮಾತಾನಾಡಿದರು. ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಸದಸ್ಯ ಗೋಪಿನಾಥ್ ನಾಯಕ್, ಮಮತಾ ಶೆಟ್ಟಿ ಉಪಸ್ಥಿತರಿದ್ದರು. ಉಜಿರೆ ರುಡ್ಸೆಟ್ ಸಂಸ್ಥೆ ಸೇರಿದಂತೆ ಅನೇಕ ತರಬೇತಿ ಸಂಸ್ಥೆಗಳಿಂದ ತರಬೇತಿ ಕಾರ್ಯಗಾರ ನಡೆಯಲಿದೆ. ತಾ. ಪಂ ಸಂಯೋಜಕ ಜಯಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಸಿಪಿದರು