ಹೇಮಾವತಿ ನಾಲೆಗೆ ಜಿಲ್ಲಾಧಿಕಾರಿ ಮೋಹನ್ ರಾಜ್ ಭೇಟಿ, ಪರಿಶೀಲನೆ

ತುಮಕೂರು, ಸೆ.6: ಹೇಮಾವತಿಯಿಂದ ಜಿಲ್ಲೆಗೆ ನೀರು ಹರಿಯುವ ತುಮಕೂರು ನಾಲೆಯ ಉದ್ದಕ್ಕೂ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್ ಅವರು ಅಧಿಕಾರಿಗಳೊಂದಿಗೆ ಸಂಚರಿಸಿ ಪರಿಶೀಲನೆ ನಡೆಸಿದ್ದಾರೆ.
ಹೇಮಾವತಿಯಿಂದ ತುಮಕೂರು ಜಿಲ್ಲೆಗೆ ಹರಿಯುತ್ತಿರುವ ನೀರಿನ ಪ್ರಮಾಣ ಮತ್ತಿತರ ಮಾಹಿತಿಯನ್ನು ತಿಪಟೂರು ತಾಲೂಕಿನ ಶಿವಪುರ ಎಸ್ಕೇಪ್ನಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಪಡೆದ ಜಿಲ್ಲಾಧಿಕಾರಿಗಳು, ತಿಪಟೂರು, ತುರುವೇಕೆರೆ, ಗುಬ್ಬಿ ತಾಲೂಕಿನಲ್ಲಿ ಹಾದು ಹೋಗಿರುವ ನಾಲೆಯ ಉದ್ದಕ್ಕೂ ಸಂಚರಿಸಿ ಪರಿಶೀಲಿಸಿದರು.
ತುಮಕೂರು ನಾಲೆಗೆ ಹೇಮಾವತಿಯಿಂದ ಸ್ವೀಕರಿಸುತ್ತಿರುವ ನೀರಿನ ಪ್ರಮಾಣವೆಷ್ಟು, ಪ್ರತಿ ತಾಲೂಕಿನ ಗಡಿಯಲ್ಲಿ ಸ್ವೀಕರಿಸುತ್ತಿರುವ ನೀರಿನ ಪ್ರಮಾಣವೆಷ್ಟು, ಪ್ರತೀ ತಾಲೂಕಿನಿಂದ ಹೊರ ಹರಿಯುತ್ತಿರುವ ನೀರಿನ ಪ್ರಮಾಣವೆಷ್ಟು ಎಂಬುದರ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್, ನೀರು ಸೋರಿಕೆಯಾಗದಂತೆ ತಡೆಗಟ್ಟಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ರೈತರೊಂದಿಗೆ ಇದೇ ಸಂದರ್ಭದಲ್ಲಿ ಮಾತುಕತೆ ನಡೆಸಿದರು.
ಈ ಸಂದರ್ಬದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್, ತಿಪಟೂರು ಉಪವಿಭಾಗಾಧಿಕಾರಿ ಶಿಲ್ಪಾ, ಸೇರಿದಂತೆ ನೀರಾವರಿ, ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.







