ಭಾಸ್ಕರ್ ಪ್ರಸಾದ್ಗೆ ಜೀವ ಬೆದರಿಕೆ ಕರೆ
‘ಮೂರು ದಿನದಲ್ಲಿ ಕೊಲ್ಲುತ್ತೇವೆ’

ಬೆಂಗಳೂರು, ಸೆ.7: ಉಡುಪಿ ಚಲೋ ಹೋರಾಟಗಾರ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಆಪ್ತ ಬಿ.ಆರ್.ಭಾಸ್ಕರ್ ಪ್ರಸಾದ್ ಅವರಿಗೆ ವ್ಯಕ್ತಿಯೋರ್ವ ಮೊಬೈಲ್ ಮೂಲಕ ಕರೆ ಮಾಡಿ ನಿನ್ನನ್ನು ಮೂರು ದಿನದಲ್ಲಿ ಕೊಲೆ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಲಾಗಿದೆ.
ಗುರುವಾರ ಮುಂಜಾನೆ 1:15 ಸುಮಾರಿಗೆ ಭಾಸ್ಕರ್ ಪ್ರಸಾದ್ ಅವರ ಮೊಬೈಲ್ಗೆ +4075577 ಸಂಖ್ಯೆಯಿಂದ ಕರೆ ಬಂದಿದ್ದು, ನಿನ್ನನ್ನು ಇನ್ನೂ ಮೂರು ದಿನದೊಳಗೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವುದಲ್ಲದೆ, ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆಂದು ಫೇಸ್ಬುಕ್ನಲ್ಲಿ ಬಿ.ಆರ್.ಭಾಸ್ಕರ್ ಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.
ಭದ್ರತೆಗೆ ಮನವಿ: ಮೊಬೈಲ್ ಕರೆ ಮೂಲಕ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ತಮಗೆ ಭದ್ರತೆ ನೀಡುವ ಜೊತೆಗೆ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಹೋರಾಟಗಾರ ಬಿ.ಆರ್.ಭಾಸ್ಕರ್ ಪ್ರಸಾದ್ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಕಚೇರಿಗೆ ಭೇಟಿ ನೀಡಿ ಮನವಿ ಮಾಡಿದರು.
ಕರಾವಳಿ ಕನ್ನಡ ಮಾತನಾಡಿದ: ಬಿ.ಆರ್.ಭಾಸ್ಕರ್ ಪ್ರಸಾದ್ ಅವರ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಕರಾವಳಿ ಮೂಲದ ಕನ್ನಡದಲ್ಲಿ ಮಾತನಾಡಿ ಅಶ್ಲೀಲವಾಗಿ ಹೇಳಿಕೆ ನೀಡಿ ಬೆದರಿಕೆ ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.







