ಪೊಲೀಸ್ ವ್ಯವಸ್ಥೆಯಲ್ಲಿರುವ ಫ್ಯಾಶಿಸ್ಟ್ ಶಕ್ತಿಗಳನ್ನು ಮಟ್ಟಹಾಕುವ ಕರ್ತವ್ಯ ಕಾಂಗ್ರೆಸ್ ಗಿದೆ: ಮಾಜಿ ಶಾಸಕ ಕುಞಾಂಬು
'ವಾರ್ತಾಭಾರತಿ' ವರದಿಗಾರನ ಬಂಧನ
ಮಂಗಳೂರು, ಸೆ.8: “ಈಗಾಗಲೇ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಜಾತ್ಯಾತೀತ ಶಕ್ತಿಗಳ ಸದ್ದಡಗಿಸುವ ಪ್ರಯತ್ನಗಳು ಇನ್ನಿಲ್ಲದಂತೆ ಮುಂದುವರಿದಿದೆ. ಇತ್ತೀಚೆಗಷ್ಟೇ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಹತ್ಯೆಗೈಯಲಾಗಿತ್ತು. ಜಾತ್ಯಾತೀಯ ಮೌಲ್ಯಗಳ ಪರ ಇರುವ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ. ‘ವಾರ್ತಾಭಾರತಿ’ಯ ಪತ್ರಕರ್ತನ ಬಂಧನ ಖಂಡನೀಯವಾಗಿದ್ದು, ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ” ಎಂದು ಮಂಜೇಶ್ವರದ ಮಾಜಿ ಶಾಸಕ ಕುಞಾಂಬು ಹೇಳಿದ್ದಾರೆ.
“ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿಯುವ, ವಸ್ತುನಿಷ್ಠ ಪತ್ರಿಕೆ ‘ವಾರ್ತಾಭಾರತಿ’ಯ ವರದಿಗಾರನ ಬಂಧನ ನಿಜಕ್ಕೂ ಖಂಡನೀಯವಾಗಿದೆ, ಕರಾವಳಿ ಕರ್ನಾಟಕದ ಪೊಲೀಸ್ ವ್ಯವಸ್ಥೆಯಲ್ಲಿ ಫ್ಯಾಶಿಸ್ಟ್ ಶಕ್ತಿಗಳು ನುಸುಳಿಕೊಂಡಿದ್ದು, ಇಂತಹ ಶಕ್ತಿಗಳಿಂದ ಈ ಕೃತ್ಯ ನಡೆದಿದೆ. ಇಂತಹ ಶಕ್ತಿಗಳ ಬಗ್ಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ಅರಿತುಕೊಳ್ಳಬೇಕು ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು. ನ್ಯಾಯಪರ ಮಾಧ್ಯಮದ ಸದ್ದಡಗಿಸುವ ಷಡ್ಯಂತ್ರವನ್ನು ಕಾಂಗ್ರೆಸ್ ಸರಕಾರ ನಿಯಂತ್ರಿಸಬೇಕಾಗಿದೆ” ಎಂದವರು ಒತ್ತಾಯಿಸಿದ್ದಾರೆ.