ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಸಂಸದ ನಳಿನ್ ವಿರುದ್ಧ ಪ್ರಕರಣ ದಾಖಲು
ಮಂಗಳೂರು, ಸೆ.8: ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿದ್ದ 'ಮಂಗಳೂರು ಚಲೋ' ರ್ಯಾಲಿ ಸಂದರ್ಭ ಬಂಧಿಸಲ್ಪಟ್ಟ ಬಿಜೆಪಿ ಕಾರ್ಯಕರ್ತರ ಬಿಡುಗಡೆ ವಿಚಾರದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಮಧ್ಯಾಹ್ನ ರ್ಯಾಲಿ ನಡೆದ ಬಳಿಕ ಕಾರ್ಯಕರ್ತರಲ್ಲಿ ಕೆಲವರನ್ನು ಬಂಧಿಸಿ ಕದ್ರಿಯ ಗೋರಕ್ಷನಾಥ ಸಭಾಂಗಣಕ್ಕೆ ಕರೆತಂದು ನಿಯಮಾವಳಿಯಂತೆ ಎಲ್ಲರ ಸಹಿ ತೆಗೆದುಕೊಳ್ಳಲಾಗುತ್ತಿತ್ತು. ಈ ಸಂದರ್ಭ ಸಭಾಂಗಣಕ್ಕೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಕದ್ರಿ ಇನ್ಸ್ಪೆಕ್ಟರ್ ಮಾರುತಿ ನಾಯ್ಕ ಜತೆ ಒರಟಾಗಿ ವರ್ತಿಸಿದ್ದಲ್ಲದೆ, ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ಜಿಲ್ಲಾ ಬಂದ್ಗೆ ಕರೆ ನೀಡುವುದಾಗಿ ಬೆದರಿಕೆ ಹಾಕಿದ್ದರು.
ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಂಸದ ನಳಿನ್ ಹಾಗೂ ಮತ್ತಿತರರ ಮೇಲೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Next Story