ಉಡುಪಿ: ಕ್ಲಾಕ್ಟವರ್, ಜಟಕಾ ಸ್ಟಾಂಡ್ ಬಳಿ ಪ್ರತಿಭಟನೆಗೆ ನಿಷೇಧ

ಉಡುಪಿ, ಸೆ.8: ಉಡುಪಿ ನಗರದ ಕೇಂದ್ರ ಸ್ಥಾನದಲ್ಲಿರುವ ಸರ್ವಿಸ್ ಬಸ್ ನಿಲ್ದಾಣದ ಆಸುಪಾಸಿನ ಬೋರ್ಡ್ ಹೈಸ್ಕೂಲ್ ಮುಂಭಾಗ, ಕ್ಲಾಕ್ ಟವರ್ ಹಾಗೂ ಜಟಕಾ ಸ್ಟಾಂಡ್ಗಳಲ್ಲಿ ಇದುವರೆಗೆ ನಡೆಯುತಿದ್ದ ಸಾರ್ವಜನಿಕ ಪ್ರತಿಭಟನೆ, ಧರಣಿ, ಸಭೆಗಳಿಗೆ ಶಾಶ್ವತವಾದ ಬ್ರೇಕ್ ಬಿದ್ದಿದೆ. ಇಲ್ಲಿ ನಡೆಯುವ ಇಂಥ ಎಲ್ಲಾ ಕಾರ್ಯಕ್ರಮಗಳನ್ನು ಶಾಶ್ವತವಾಗಿ ನಿಷೇಧಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜನಜಂಗುಳಿಯಿಂದ ಸದಾ ಬಿರುಸಿನ ಚಟುವಟಿಕಾ ಕೇಂದ್ರವಾಗಿರುವ ಸರ್ವಿಸ್ ಬಸ್ ನಿಲ್ದಾಣದ ಆಸುಪಾಸಿನ ಈ ಸ್ಥಳಗಳು ದಿಢೀರ್ ಸಭೆ, ಧರಣಿ, ಪ್ರತಿಭಟನೆ, ವಿಜಯೋತ್ಸವವನ್ನು ಸಂಘಟಿಸುವ ಎಲ್ಲಾ ರಾಜಕೀಯ ಪಕ್ಷಗಳ, ಸಂಘಟನೆಗಳ ನೆಚ್ಚಿನ ತಾಣಗಳಾಗಿದ್ದು, ದೊಡ್ಡ ಸಂಖ್ಯೆಯ ಜನರ ಗಮನವನ್ನು ಸೆಳೆಯುತಿದ್ದವು. ಇದೀಗ ಇಂಥ ಎಲ್ಲಾ ಚಟುವಟಿಕೆಗೆ ತೆರೆ ಬಿದ್ದಂತಾಗಿದೆ.
ಉಡುಪಿ ಸರ್ವಿಸ್ ಬಸ್ ನಿಲ್ದಾಣದಿಂದ ಕಿನ್ನಿಮುಲ್ಕಿವರೆಗೆ ಮದ್ಯ ಇರುವ ಕವಿ ಮುದ್ದಣ್ಣ ರಸ್ತೆ (ಕೆ.ಎಂ ಮಾರ್ಗ) ಉಡುಪಿ ನಗರದ ಹೃದಯ ಭಾಗದ ಮುಖ್ಯ ರಸ್ತೆಯಾಗಿದ್ದು, ದ್ವಿಪಥವಿದ್ದರೂ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ, ಕಿರಿದಾದ ರಸ್ತೆಯಿಂದ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಸಾಧ್ಯವಿಲ್ಲದಂತಾಗಿದೆ. ಇದೇ ರಸ್ತೆಯಲ್ಲಿ ಕ್ಲಾಕ್ ಟವರ್, ಜಟಕಾ ಸ್ಟಾಂಡ್ ಇದ್ದು, ಅಕ್ಕಪಕ್ಕದಲ್ಲಿ ಸರ್ವೀಸ್ ಬಸ್ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಸಿಟಿಬಸ್ ನಿಲ್ದಾಣಗಳಿವೆ. ಶಾಲಾ-ಕಾಲೇಜುಗಳು, ಸರಕಾರಿ ಕಚೇರಿ, ಆಸ್ಪತ್ರೆಗಳೂ ರಸ್ತೆಯ ಅಕ್ಕಪಕ್ಕದಲ್ಲಿವೆ.
ಬಸ್ಸು ನಿಲ್ದಾಣಗಳಿಂದ ಕೆ.ಎಂ. ಮಾರ್ಗವಾಗಿ ಪ್ರತಿ ದಿನ ಸರಕಾರಿ ಹಾಗೂ ಖಾಸಗಿ ಬಸ್ಸುಗಳು ಸಾವಿರಕ್ಕೂ ಹೆಚ್ಚು ಟ್ರಿಪ್ ಮಾಡುತ್ತಿದ್ದು, ಈ ರಸ್ತೆ ಸದಾ ಸದಾ ಜನ ದಟ್ಟಣೆಯಿಂದ ಕೂಡಿರುತ್ತದೆ. ಈ ಮಧ್ಯೆ ಕ್ಲಾಕ್ಟವರ್, ಜಟ್ಕಾ ಸ್ಟಾಂಡ್ ಬಳಿ ಪ್ರತಿ ದಿನವೆಂಬಂತೆ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು, ವಿವಿಧ ಜಾತಿಯವರು ಪ್ರತಿಟನೆ ನಡೆಸುತ್ತಿದ್ದು, ಇದರಿಂದ ರಸ್ತೆಯಲ್ಲಿ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಸಂಚರಿಸಲು ಅಡಚಣೆ ಯೊಂದಿಗೆ ಅಪಾಯಕಾರಿಯೂ ಆಗಿರುತ್ತದೆ.
ಇದರಿಂದ ನಿತ್ಯ ಪ್ರಯಾಣಿಸುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಸರಕಾರಿ/ಖಾಸಗಿ ನೌಕರರಿಗೆ, ಪ್ರಯಾಣಿಕರಿಗೆ, ಆಸ್ಪತ್ರೆಗೆ ಬರುವ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳಿಗೆ ತುರ್ತು ಸಮಯದಲ್ಲಿ ತಲುಪಲು ಕಷ್ಟವಾಗುತ್ತಿದ್ದು, ಸಾರ್ವಜನಿಕ ಹಿತದೃಷ್ಟಿ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಉಡುಪಿ ಸರ್ವಿಸ್ ಬಸ್ ನಿಲ್ದಾಣ, ಕ್ಲಾಕ್ ಟವರ್ ಹಾಗೂ ಜಟಕಾ ಸ್ಟಾಂಡ್ ಬಳಿ, ಸಾರ್ವಜನಿಕರು, ಸಂಘ-ಸಂಸ್ಥೆಗಳು, ಯಾವುದೇ ಪ್ರತಿಭಟನೆ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದನ್ನು ಶಾಶ್ವತವಾಗಿ ನಿಷೇಧಿಸಿ ಅಪರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.







