ಸಮಾಜ ತಲೆತಗ್ಗಿಸುವಂತಹ ಹೇಯ ಕೃತ್ಯ
ಮಾನ್ಯರೆ,
ಪ್ರಗತಿಪರ ವಿಚಾರಧಾರೆ ಹೊಂದಿದ್ದ ಚಿಂತಕಿ, ಸಾಹಿತಿ, ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ರನ್ನು ಹಂತಕನೋರ್ವ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಗೈದಿರುವುದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಹೀನ ಕೃತ್ಯ. ಎಡಪಂಥೀಯ ಚಿಂತನೆ, ನಿರ್ಭೀತ ನಿಲುವುಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಲಿಂಗ ತಾರತಮ್ಯ, ಅಸ್ಪೃಶ್ಯತೆ, ಮೌಢ್ಯಾಚರಣೆ, ಜಾತಿ ವ್ಯವಸ್ಥೆ ಹಾಗೂ ಕೋಮು ಶಕ್ತಿಗಳ ವಿರುದ್ಧ ತಮ್ಮ ಲೇಖನಿ ಹಾಗೂ ಹೋರಾಟದ ಮೂಲಕ ಜಾತ್ಯತೀತ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ದಿಟ್ಟ ಮಹಿಳೆ ಗೌರಿ ಲಂಕೇಶ್. ಇವರ ಈ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆಯಾಗಿದೆ. ಇದು ಖಂಡನಾರ್ಹ.
ಇತ್ತೀಚೆಗೆ ದೇಶದಲ್ಲಿ ವೈಚಾರಿಕ ಚಿಂತನೆ ಹೊಂದಿದ್ದ ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ. ಎಂ. ಕಲಬುರ್ಗಿಯವ ರಂತಹ ವಿಚಾರವಾದಿಗಳ ಹತ್ಯೆಗಳು ಒಂದಾದ ಮೇಲೆ ಒಂದರಂತೆ ನಡೆಯುತ್ತಿದ್ದು ದೇಶದ ಪ್ರಗತಿಪರ ಚಿಂತಕರನ್ನು ಭಯ ಪಡುವಂತೆ ಮಾಡಿದೆ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ನೀಡಿದ ದೊಡ್ಡ ಹೊಡೆತ ಎಂದರೆ ತಪ್ಪಾಗಲಾರದು. ದೇಶದೆಲ್ಲೆಡೆ ವಿಚಾರವಾದಿಗಳ ಹತ್ಯೆಯ ಮೂಲಕ ಹಿಂಸೆ ಬಿತ್ತುತ್ತಿರುವ ಅಂಧ ಶ್ರದ್ಧೆ ಹೊಂದಿರುವ ಗುಂಪುಗಳು ದೇಶದಲ್ಲಿ ನರಕ ಸೃಷ್ಟಿಸುತ್ತಿವೆ.
ಆದ್ದರಿಂದ ಆದಷ್ಟು ಬೇಗ ಈ ಘೋರ ಕೃತ್ಯವನ್ನು ಎಸಗಿರುವ ಹಂತಕರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ಮತ್ತೊಂದೆಡೆ ಗೌರಿ ಲಂಕೇಶ್ರ ಹತ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರವಿಸುತ್ತಿರುವ ಕೆಲವು ಅವಿವೇಕಿಗಳನ್ನು ಬಂಧಿಸಬೇಕು.