ಡಾ.ಎಂ.ಎನ್ ರಾಜೇಂದ್ರ ಕುಮಾರ್ರಿಗೆ ಎಫ್ಸಿಬಿಎ - 2017ರ ಬೆಸ್ಟ್ ಚೇರ್ಮೆನ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಮಂಗಳೂರು, ಸೆ. 9: ಬ್ಯಾಂಕಿಂಗ್ ಪ್ರೋಂಟಿಯರ್ಸ್ ಮುಂಬಯಿ ಇದರ 11ನೆ ವರ್ಷದ ಪ್ರೋಂಟಿಯರ್ಸ್ ಇನ್ ಕೋ-ಅಪರೇಟಿವ್ ಬ್ಯಾಂಕಿಂಗ್ ಎವಾರ್ಡ್-2017 (ಎಫ್ಸಿಬಿಎ)ರ ಬೆಸ್ಟ್ ಚೇರ್ಮೆನ್ ರಾಷ್ಟ್ರೀಯ ಪ್ರಶಸ್ತಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್)ನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ರವರಿಗೆ ಸೆ.8ರಂದು ಜೈಪುರದಲ್ಲಿ ಪ್ರದಾನ ಮಾಡಲಾಯಿತು.
ಜೈಪುರದಲ್ಲಿ ನಡೆದ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕುಗಳ ಸಮಾವೇಶದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಪುಣೆ ಕೋ-ಅಪರೇಟಿವ್ ಫೆಡರೇಶನ್ನ ಅಧ್ಯಕ್ಷೆ ಶೋಭ ತಾ ಅವರಿಂದ ಸ್ವೀಕರಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಬ್ಯಾಂಕಿಂಗ್ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರದ್ದು. ಆಧುನಿಕ ತಂತ್ರಜ್ಞಾನವನ್ನು ಬಳಸಿ 102 ಶಾಖೆಗಳಲ್ಲಿ ಗ್ರಾಹಕರಿಗೆ ಉತ್ಕೃಷ್ಠ ಸೇವೆಯನ್ನು ಈ ಬ್ಯಾಂಕ್ ನೀಡುತ್ತಿದೆ. ಸಹಕಾರಿ ಸ್ವಾಮ್ಯದ ಎಸ್ಸಿಡಿಸಿಸಿ ಬ್ಯಾಂಕ್ನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸರಿಸಮಾನಾಗಿ ರೂಪುಗೊಳಿಸಿದ ಡಾ.ರಾಜೇಂದ್ರ ಕುಮಾರ್ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿರುವರು.
23 ವರ್ಷಗಳ ಸುದೀರ್ಘ ಅವಧಿಯಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ್ನು ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಮುನ್ನಡೆಸಿದ್ದಾರೆ. ಹಲವಾರು ನೂತನ ಯೋಜನೆಗಳ ಮೂಲಕ ಈ ಬ್ಯಾಂಕ್ನ್ನು ‘ಜನಸ್ನೇಹಿ’ ಬ್ಯಾಂಕ್ನ್ನಾಗಿ ಪರಿವರ್ತಿಸುವಲ್ಲೂ ಇವರು ಯಶಸ್ವಿಯಾಗಿದ್ದಾರೆ. ಇವರು ಅಧ್ಯಕ್ಷರಾದ ಬಳಿಕ ಈ ಬ್ಯಾಂಕಿಗೆ 18 ವರ್ಷಗಳಿಂದ ರಾಜ್ಯದ ಅತ್ಯುತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂದು ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಹಾಗೂ 18 ವರ್ಷಗಳಿಂದ ನಬಾರ್ಡ್ ಪ್ರಶಸ್ತಿ ಲಭಿಸಿದೆ.
ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡಾಗ ಕೇವಲ 25 ಶಾಖೆಗಳು ಇದ್ದು ಒಟ್ಟು ಠೇವಣಾತಿ ರೂ.64ಕೋಟಿ, ಹೊರಬಾಕಿ ಸಾಲ ರೂ.46ಕೋಟಿ,ಲಾಭ ರೂ.42ಲಕ್ಷ ಮಾತ್ರ ಇತ್ತು. ಆದರೆ ಈಗ ಬ್ಯಾಂಕು 102 ಶಾಖೆಗಳನ್ನು ಹೊಂದಿದ್ದು ಬ್ಯಾಂಕಿನ ಠೇವಣಾತಿ ರೂ.3201.64ಕೋಟಿ, ಬ್ಯಾಂಕ್ ರೂ.2382.05 ಕೋಟಿ ಮುಂಗಡ ನೀಡಿದ್ದು, ಒಟ್ಟು ವ್ಯವಹಾರ ರೂ.5883.67ಕೋಟಿ, ಲಾಭ ರೂ.24.07ಕೋಟಿ ಆಗಿದೆ. ಬ್ಯಾಂಕಿನ ಸರ್ವಾಂಗೀಣ ಪ್ರಗತಿಗೆ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಕಾರಣರಾಗಿದ್ದಾರೆ.
ಕೋ-ಅಪರೇಟಿವ್ ಬ್ಯಾಂಕ್ ಅಸೋಸಿಯನ್ ಸೋಲಾಪುರದ ಅಧ್ಯಕ್ಷ ರಾಜ್ಗೋಪಾಲ್, ಆದರ್ಶ ಕೋ-ಅಪರೇಟಿವ್ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮದನ್ಗೋಪಾಲ್ ಸ್ವಾಮಿ, ಮಾಸ್ಟರ್ ಕಾರ್ಡ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ಅಗರ್ವಾಲ್ ಮತ್ತು ಬ್ಯಾಂಕಿಂಗ್ ಪ್ರೋಂಟಿಯರ್ಸ್ ಮ್ಯಾಗಜಿನ್ನ ಪ್ರಕಾಶಕ ಬಾಬು ನಾಯರ್ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಸಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅರುಣಾ ರಾಜೇಂದ್ರ ಕುಮಾರ್, ಬ್ಯಾಂಕಿನ ನಿರ್ದೇಶಕರಾದ ವಿನಯಕುಮಾರ್ ಸೂರಿಂಜೆ, ಟಿ.ಜಿ.ರಾಜಾರಾಮ್ ಭಟ್, ಭಾಸ್ಕರ ಎಸ್. ಕೋಟ್ಯಾನ್, ಬಿ. ರಘುರಾಮ ಶೆಟ್ಟಿ, ಎಂ.ವಾದಿರಾಜ ಶೆಟ್ಟಿ, ಕೆ.ಎಸ್ ದೇವರಾಜ್, ಸದಾಶಿವ ಉಳ್ಳಾಲ್, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ, ರಾಜೇಶ್ ರಾವ್, ಎಸ್.ಬಿ.ಜಯರಾಮ್ ರೈ, ಐಕಳ ಭಾವ ದೇಪ್ರಸಾದ್ ಶೆಟ್ಟಿ ಬೆಳಪು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಎಸ್., ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ಯ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಟೀಚರ್ಸ್ ಕೋ-ಅಪರೇಟಿವ್ ಬ್ಯಾಂಕಿನ ನಿರ್ದೇಶಕ ಕೆ.ಸಿ ರಾಜೇಶ್ ಹಾಗೂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.