ಪವಾಡ ರಹಸ್ಯ ಬಯಲಿನ ಆಂದೋಲನ
ನರೇಂದ್ರ ನಾಯಕ್ ಜೀವನ ಕಥನ
![ಪವಾಡ ರಹಸ್ಯ ಬಯಲಿನ ಆಂದೋಲನ ಪವಾಡ ರಹಸ್ಯ ಬಯಲಿನ ಆಂದೋಲನ](https://www.varthabharati.in/sites/default/files/images/articles/2017/09/10/gfszaf.jpg)
ಭಾಗ 12
ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಜೀವಶಾಸ್ತ್ರಗಳೆಂಬ ವಿಜ್ಞಾನ ಜಗತ್ತೇ ಒಂದು ವಿಸ್ಮಯ. ಆ ವಿಸ್ಮಯದೊಳಗೆ ಅದೆಷ್ಟೋ ರಹಸ್ಯಗಳು ಅಡಗಿವೆ. ಆ ರಹಸ್ಯಗಳನ್ನೇ ಕೆಲವರು ತಮ್ಮ ಬಂಡವಾಳವಾಗಿಸಿ ಜನರನ್ನು ಮೋಸಗೊಳಿಸುವುದನ್ನು ನಡೆಸುತ್ತಾರೆ. ಜನ ಮೋಸ ಹೋಗುತ್ತಲೇ ಇದ್ದಾರೆ.
ವಿಚಾರವಾದಿಗಳ ತಂಡದಿಂದ ಸಮಾಜದಲ್ಲಿ ಸಾಮಾಜಿಕ ಚಟುವಟಿಕೆ ಗಳ ನಡುವೆಯೇ ಮುಖ್ಯ ಧ್ಯೇಯವಾದ ಪವಾಡ ರಹಸ್ಯ ಬಯಲಿನ ಕಾರ್ಯಕ್ರಮಗಳು ಮುಂದುವರಿಯುತ್ತಿತ್ತು. ಆಂದೋಲನ ರೂಪದಲ್ಲಿ ಈ ಪವಾಡ ರಹಸ್ಯವನ್ನು ಮುಂದುವ ರಿಸಬೇಕೆಂಬುದು ನಮ್ಮ ಬಯಕೆಯಾಗಿತ್ತು. ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳಲಾರಂಭಿಸಿದೆವು. ಮೂಢನಂಬಿಕೆಗಳನ್ನು ಸಮಾಜದಿಂದ ಕಿತ್ತೊಗೆದು ಜನರಲ್ಲಿ ವಿಜ್ಞಾನದ ಚಿಂತನೆಗಳನ್ನು ಹರಿಯಬಿಡುವುದು ನಮ್ಮ ಇರಾದೆ ಯಾಗಿತ್ತು. ಕೆಂಡದ ಮೇಲೆ ನಡೆದಾಡುವುದು, ದೇವಮಾನವರು ಗಾಳಿಯಲ್ಲಿ ವಿಭೂತಿ ನೀಡುವುದು, ನಂಬಿಕೆಯಲ್ಲೇ ರೋಗಗಳನ್ನು ಗುಣಪಡಿಸುವುದು ಮೊದಲಾದವುಗಳನ್ನು ಅಣಕು ಪ್ರದರ್ಶನಗಳ ಮೂಲಕ ಜನರ ಮುಂದಿಟ್ಟು ಅದರ ಹಿಂದಿನ ರಹಸ್ಯವನ್ನು ಬಟಾಬಯಲುಗೊಳಿಸುವ ನಿಟ್ಟಿನಲ್ಲಿ ನಾವು ನಮ್ಮ ಚಟುವಟಿಕೆಗಳನ್ನು ಕೇಂದ್ರೀಕರಿಸಿದೆವು.
ನಮ್ಮ ಆರಂಭಿಕ ಕಾರ್ಯಕ್ರಮ ವಿಭೂತಿಯನ್ನು ಸೃಷ್ಟಿಸುವುದರಿಂದ ಆರಂಭಿಸಲಾಗಿತ್ತು. ನಮ್ಮ ಪ್ರದರ್ಶನಕ್ಕೆ ಬರುವವರ ಕೈಗೆ ಪರಿಮಳದ ವಿಭೂತಿಯನ್ನು ನೀಡುವುದು. ಪರಸ್ಪರ ಕೈಗಳನ್ನು ಉಜ್ಜಿದಾಗ ಆ ವಿಭೂತಿ ರಾಶಿಯಾಗುವುದು. ನೋಡುಗರು ವಿಸ್ಮಯ. ಅಬ್ಬಾ ಇದು ಹೇಗೆ ಸಾಧ್ಯ? ಎಂದು ನಮ್ಮ ಕಾರ್ಯಕ್ರಮಗಳಲ್ಲಿ ಹುಬ್ಬೇರಿಸಿದವರೇ ಅಧಿಕ. ದೇವ ಮಾನವರು ತಮ್ಮ ಭವಿಷ್ಯ, ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳಲು ಹೋದಾಗ ಅದನ್ನೇ ಅಲ್ಲವೇ ಮಾಡುವುದು. ಹಾಗಂತ ಇದೊಂದು ಪವಾಡ, ಇದು ದೇವ ಮಾನವರಿಂದ ಮಾತ್ರವೇ ಸಾಧ್ಯ ಎಂದು ಅವರ ಕಾಲಿಗೆ ಅಡ್ಡ ಬಿದ್ದು, ಅವರಿಗೆ ಮನಸೋ ಇಚ್ಛೆ (ಆರ್ಥಿಕವಾಗಿ ಸಂಕಷ್ಟದಲ್ಲಿರುವವರು ಕೂಡಾ) ಕಾಣಿಕೆ ನೀಡುವುದನ್ನು ಮಾಡುತ್ತಾ ಬಂದಿರುವ, ಅದನ್ನು ನೋಡುತ್ತಾ ಬಂದಿರುವ ವರಿಗೆ ನಾವು ನಮ್ಮ ಪವಾಡ ರಹಸ್ಯ ಬಯಲಿನ ವೇಳೆ ವಿಭೂತಿ ಸೃಷ್ಟಿಸುವಾಗ ಅಚ್ಚರಿಯಾಗುತ್ತಿದುದು ನಿಜ. ಕೆಲವರು ನಮ್ಮನ್ನೂ ದೇವ ಮಾನವರೆಂದೇ ನಂಬಿ, ನಮ್ಮ ಕಾಲಿಗೆ ಅಡ್ಡ ಬೀಳಲು ಬಂದವರೂ ಇದ್ದಾರೆ. ಆದರೆ ಇದರ ಹಿಂದಿರುವ ವಿಜ್ಞಾನದ ತಾಕತ್ತನ್ನು ವಿವರಿಸಿದಾಗ ಬಹಳಷ್ಟು ಮಂದಿಗೆ ಮನವರಿಕೆಯಾಗಿದ್ದೂ ಇದೆ.
ದೇವಮಾನವರೆಂದು ಹೇಳಿಕೊಳ್ಳುವವರು ತಮ್ಮ ಅಂಗೈಯಲ್ಲಿ ವಿಭೂತಿಯನ್ನು ಉಂಡೆಯಾಕಾರದಲ್ಲಿ ಕೈ ಬೆರಳಿನಿಂದ ಅದುಮಿರುತ್ತಾರೆ. ತಾವು ಮಂತ್ರವನ್ನು ಜಪಿಸುತ್ತಾ, ಏನಾದರೂ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಈ ಕೈಯಲ್ಲಿರುವ ಉಂಡೆ ಯಾಕಾರದ ಬೂದಿಯನ್ನು ಅದುಮಿದಾಗ ಕೈಯಲ್ಲಿ ವಿಭೂತಿ ಸೃಷ್ಟಿಯಾಗುತ್ತದೆ. ನೋಡುಗನ ಕಣ್ಣಿಗೆ ಖಾಲಿ ಅಂಗೈಯಲ್ಲಿ ನಮ್ಮದೆರಿನ ದೇವ ಮಾನವ ವಿಭೂತಿ ಯನ್ನು ಗಾಳಿಯಲ್ಲೇ ಸೃಷ್ಟಿಸಿಬಿಟ್ಟ ಎಂದು ನಂಬುತ್ತಾರೆ. ಅದೇ ರೀತಿ 10 ಪೈಸೆಯನ್ನು 5 ಪೈಸೆಯನ್ನಾಗಿಸುವ ತಂತ್ರವನ್ನೂ ನಾವು ಪ್ರೇಕ್ಷಕರಿಗೆ ಬಯಲು ಮಾಡಿದೆವು. ಒಟ್ಟಿನಲ್ಲಿ ಹೇಳುವುದಾದರೆ ಇವೆಲ್ಲವೂ ಬಹುತೇಕವಾಗಿ ಜಾದೂಗಾರರು ತಮ್ಮ ಆಟಗಳಲ್ಲಿ ಬಳಸುವ ಕೆಲವೊಂದು ತಂತ್ರಗಳಷ್ಟೆ. ಅದನ್ನೇ ಪವಾಡ ಎಂದು ನಂಬಿ ಜನ ಮೋಸ ಹೋಗುತ್ತಾರೆ. ನಾವು ಸಾವಿರಾರು ಸಂಖ್ಯೆಯಲ್ಲಿ ದೇಶದ ಉದ್ದಗಲಕ್ಕೂ ಇಂತಹ ಪವಾಡ ರಹಸ್ಯ ಬಯಲುಗಳನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿದ್ದೇವೆ. ಇನ್ನೂ ನಡೆಸುತ್ತಲೇ ಇದ್ದೇವೆ. ಆದರೆ ಮುಗ್ಧ ಹಾಗೂ ಅಮಾಯಕರನ್ನು ವಿಜ್ಞಾನದ ಕೌತುಕಗಳ ಬಗೆಗೆ ಅರಿವೇ ಇಲ್ಲದವರನ್ನು ಮೋಸಗೊಳಿಸುವ ತಂತ್ರ ಕೂಡಾ ಇಂತಹ ನಕಲಿ ದೇವಮಾನವರಿಂದ ಇಂದಿಗೂ ನಡೆಯುತ್ತಿರುವುದು ಮಾತ್ರ ನಿಜಕ್ಕೂ ಬೇಸರದ ಸಂಗತಿ.
ರಸಾಯನಶಾಸ್ತ್ರ, ಭೌತಶಾಸ್ತ್ರ ಹಾಗೂ ಜೀವಶಾಸ್ತ್ರಗಳೆಂಬ ವಿಜ್ಞಾನಜಗತ್ತೇ ಒಂದು ವಿಸ್ಮಯ. ಆ ವಿಸ್ಮಯದೊಳಗೆ ಅದೆಷ್ಟೋ ರಹಸ್ಯಗಳು ಅಡಗಿವೆ. ಆ ರಹಸ್ಯಗಳನ್ನೇ ಕೆಲವರು ತಮ್ಮ ಬಂಡವಾಳವಾಗಿಸಿ ಜನರನ್ನು ಮೋಸ ಗೊಸುತ್ತಾರೆ. ಜನ ವೆಸ ಹೋಗುತ್ತಲೇ ಇದ್ದಾರೆ.
ಈ ವಿಜ್ಞಾನದ ಕೌತುಕಗಳು ಶಾಲಾ ಕಾಲೇಜುಗಳ ಮೂಲಕ ಜನಮಾನಸಕ್ಕೆ ತಲುಪಬೇಕಿದೆ. ದೇವ ಮಾನವರೆಂದು ಕರೆಸಿಕೊಳ್ಳುವವರು ಜನರಿಗೆ ಮಾಡುತ್ತಿರುವ ಮೋಸದ ಬಗ್ಗೆ ಪಠ್ಯದ ಮೂಲಕ ಮಕ್ಕಳಿಗೆ ರವಾನೆಯಾಗಬೇಕು. ಆ ಮೂಲಕ ಮನೆ ಮನಗಳಿಂದ ಮೂಢನಂಬಿಕೆಯಿಂದ ಪೆಡಂಭೂತವನ್ನು ಹೋಗಲಾಡಿಸಲು ಸಾಧ್ಯ.
ಮುಂದುವರಿಯುವುದು