ಗುರುಪುರ ಹೋಬಳಿಯನ್ನು ಮಂಗಳೂರಿನಲ್ಲೇ ಉಳಿಸಲು ಆಗ್ರಹ
ಗುರುಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮಾಲೋಚನಾ ಸಭೆ
ಮಂಗಳೂರು, ಸೆ.10: ಗುರುಪುರ ಹೋಬಳಿಯನ್ನು ನೂತನ ತಾಲೂಕಾಗಲಿರುವ ಮೂಡುಬಿದಿರೆಗೆ ಸೇರಿಸುವ ಪ್ರಸ್ತಾವಕ್ಕೆ ಗುರುಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಸಮಾಲೋಚನಾ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ.
ಸಮಾಲೋಚನಾ ಸಭೆಯು ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶಾಸಕ ಬಿ.ಎ.ಮೊಯ್ದಿನ್ ಬಾವ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೊಯ್ದಿನ್ ಬಾವ, ಗುರುಪುರ ಹೋಬಳಿಯನ್ನು ಮಂಗಳೂರು ತಾಲೂಕಿನಲ್ಲೇ ಉಳಿಸುವ ನಿಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಎಲ್ಲರೂ ಕೈ ಜೋಡಿಸುವ ಹಾಗೂ ಇದಕ್ಕೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ವಿಚಾರ ಮಂಡಿಸೋಣ ಎಂದರು.
ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಂದ್ರ ಕಂಬಳಿ ಹಾಗೂ ಮಾಜಿ ಅಧ್ಯಕ್ಷ ಕೆಪಿಸಿಸಿ ಸದಸ್ಯರಾದ ಪೃಥ್ವಿರಾಜ್ ವಿಷಯ ಪ್ರಸ್ತಾಪಿಸಿದರು.
ವೇದಿಕೆಯಲ್ಲಿ ಮಂಗಳೂರು ತಾಲೂಕ್ ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹೀಂ, ಗುರುಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆಲ್ವಿನ್ ಡಿಸೋಜ, ಉತ್ತರ ಯುವ ಕಾಂಗ್ರೆಸ್ ಅದ್ಯಕ್ಷ ಗಿರೀಶ್ ಆಳ್ವ, ವಕ್ತಾರ ಗಣೇಶ್ ಪೂಜಾರಿ,ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೆಲಿನ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.