ತಿಂಗಳೊಳಗೆ ಹಂತಕರನ್ನು ಬಂಧಿಸದಿದ್ದರೆ ಉಗ್ರ ಹೋರಾಟ: ಸರಕಾರಕ್ಕೆ ವಾಟಾಳ್ ಎಚ್ಚರಿಕೆ
ಗೌರಿ ಲಂಕೇಶ್ ಹತ್ಯೆ ಪ್ರಕರಣ

ಬೆಂಗಳೂರು, ಸೆ.10: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವಿಳಂಬ ಮಾಡದೆ, ಶೀಘ್ರ ಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದಿಂದ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷ ಕಳೆಯುತ್ತಿದೆ. ಆದರೆ, ಇದುವರೆಗೂ ಹತ್ಯೆ ಮಾಡಿದವರನ್ನು ಹಿಡಿಯಲು ಸಾಧ್ಯವಾಗಿಲ್ಲ. ಅದೇ ರೀತಿ ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನು ತಿಂಗಳೊಳಗೆ ಪತ್ತೆ ಮಾಡಬೇಕು ಹಾಗೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೌರಿ ಲಂಕೇಶ್ರ ಹತ್ಯೆ ಅತ್ಯಂತ ಅಮಾನುಷ. ನೇರವಾಗಿ ಎದುರಿಸಲಾಗದವರು ಇಂತಹ ಅನಾಗರಿಕ ಮತ್ತು ನಾಚಿಗೇಡಿನ ಕೊಲೆ ಮಾಡಿದ್ದಾರೆ. ಗೌರಿ ಲಂಕೇಶ್ರ ವಿಚಾರಧಾರೆಗಳ ಬಗ್ಗೆ ವಿರೋಧವಿದ್ದವರು ಸಾರ್ವಜನಿಕವಾಗಿ ಪ್ರಶ್ನೆ ಮಾಡಬೇಕಿತ್ತು. ಅದು ಬಿಟ್ಟು ಇಂತಹ ಕೃತ್ಯ ಎಸಗಿರುವುದು ಸಮಂಜಸವಲ್ಲ ಎಂದು ಆಕ್ಷೇಪಿಸಿದರು.
ವಿಶ್ವದಲ್ಲಿ ಬಂದೂಕಿನ ದಾಳಿ ನಡೆಸಿದ ಯಾರೊಬ್ಬರೂ ಯಶಸ್ಸು ಸಾಧಿಸಿಲ್ಲ. ಆದರೆ, ಮಹಿಳೆ ಎಂಬ ಕಳಕಳಿಯಿಲ್ಲದೆ ಹತ್ಯೆ ನಡೆಸಿದ್ದಾರೆಂದ ಅವರು, ರಾಜ್ಯ ಸರಕಾರ ಈ ಪ್ರಕರಣವನ್ನು ಮೂಲೆ ಗುಂಪು ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ನೇರವಾಗಿ ಮಾತನಾಡುವವರನ್ನು ಹತ್ತಿಕ್ಕುವ ಸಲುವಾಗಿ ಗೌರಿ ಹತ್ಯೆ ಮಾಡಲಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಸಲ್ಲ. ಇಂದು ಗೌರಿಯಾದರು, ನಾಳೆ ಮತ್ತೊಬ್ಬರು ಹತ್ಯೆ ನಡೆಯಬಹುದು. ಹೀಗಾಗಿ ಸರಕಾರ ಇದಕ್ಕೆ ಪ್ರೋತ್ಸಾಹ ನೀಡದೇ ಸಮಗ್ರ ತನಿಖೆ ನಡೆಸಬೇಕು ಎಂದು ವಾಟಾಳ್ ನಾಗರಾಜ್ ಸರಕಾರವನ್ನು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದು, ಕೆ.ಆರ್. ಕುಮಾರ್,ಪ್ರವೀಣ್ಕುಮಾರ್ ಶೆಟ್ಟಿ, ಶಿವರಾಮೇಗೌಡ, ಸುರೇಶ್ಗೌಡ, ಮಂಜು ನಾಥ್ಯಾದವ್ ಉಪಸ್ಥಿತರಿದ್ದರು.







