ಪೋಷಕರು ತಮ್ಮ ಮಕ್ಕಳಿಗೆ ಅವರ ಇಚ್ಛಾನುಸಾರ ಶಿಕ್ಷಣ ಒದಗಿಸಬೇಕು: ಎಂ.ಡಿ. ಲಕ್ಷ್ಮಿ ನಾರಾಯಣ್
.jpg)
ಹಾಸನ, ಸೆ.10: ಮಕ್ಕಳು ಶಿಕ್ಷಣವನ್ನು ಕಷ್ಟಪಟ್ಟು ಓದದೆ ಇಷ್ಟಪಟ್ಟು ಓದುವಂತೆ ವಿಧಾನ ಪರಿಷತ್ ಸದಸ್ಯ ಹಾಗೂ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗ ಅಧ್ಯಕ್ಷ ಎಂ.ಡಿ. ಲಕ್ಷ್ಮಿ ನಾರಾಯಣ್ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ದೇವಾಂಗ ನೌಕರರ ಸಂಘ ಸಂಯುಕ್ತಾಶ್ರಯದಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯವರ ವೇದಿಕೆ ಒಳಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ದೇವಾಂಗ ನೌಕರರಿಗೆ, ಸಾಧಕರಿಗೆ ಸನ್ಮಾನ ಮತ್ತು ಸಂಘದ ವಾರ್ಷಿಕ ಸಭೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳಿಗೆ ಬಲವಂತದ ಶಿಕ್ಷಣ ಕೊಡದೆ, ಅವರ ಇಚ್ಛಾನುಸಾರವಾಗಿ ಓದಿಸಬೇಕು. ಕಲಿತ ವಿದ್ಯೆಯನ್ನು ಯಾರು ಕದಿಯಲು ಸಾಧ್ಯವಿಲ್ಲ ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಆರುವರೆ ಕೋಟಿ ಜನಸಂಖ್ಯೆ ಇದ್ದಾರೆ. ಇದರಲ್ಲಿ ವ್ಯವಸ್ಥಿತವಾದ ಜಾತಿ ಎನ್ನುವುದು ಎಲ್ಲಿ ಇದೆ. 1461 ಜಾತಿಗಳಲ್ಲಿ ಯಾವುದೇ ಜಾತಿ ಆಗಿರಲಿ ಅವರಲ್ಲೆಲ್ಲಾ ಹರಿಯುವುದು ಒಂದೆ ರಕ್ತ ಎಂಬುವುದನ್ನು ಯಾರು ಮರೆಯಬಾರದು. 108 ಹಿಂದುಳಿದ ಸಮಾಜ ಇದ್ದರೂ 53 ಸಮಾಜಗಳಿಗೆ ಇಂದು ಕೂಡ ಪ್ರಾಪಂಚಿಕ ಜ್ಞಾನ ಹೊಂದಿರುವುದಿಲ್ಲ. ಈ ಬಗ್ಗೆ ಸರಕಾರ ಗಮನ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಧಾನ ಕೊಡಬೇಕಾಗಿದೆ ಎಂದರು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡ ಮಾತನಾಡಿ, ಸಮಾಜದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಇಂತಹ ಕಾರ್ಯಕ್ರಮದಲ್ಲಿ ಪ್ರೋತ್ಸಹಿಸಿ ನೀಡಲಾಗುತ್ತಿರುವ ಪ್ರತಿಭಾ ಪುರಸ್ಕಾರವು ಉತ್ತಮವಾಗಿದೆ. ಯಾವುದೇ ಜನಾಂಗವಾಗಿರಲಿ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೇ ಆ ಜನಾಂಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ಆಗೇ ಪೋಷಕರು ಕೂಡ ಮಕ್ಕಳ ಇಚ್ಛೆಯನ್ನು ಗುರುತಿಸಿ ಶಿಕ್ಷಣ ನೀಡಿದರೇ ಮುಂದೆ ಒಳ್ಳೆಯ ಭವಿಷ್ಯ ರೂಪಿಸಿಕೊಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತರು ಜಿ.ಆರ್. ಮಂಜೇಶ್ ಮಾತನಾಡಿ, ಇಂದಿನ ದಿನಗಳಲ್ಲಿ ನೇಕಾರರು ಮೂಲೆ ಗುಂಪಾಗಿದ್ದಾರೆ. ಇಲ್ಲಿರುವ ಯಾರು ಒಳ್ಳೆ ಜೀವನ ಮಾಡಲು ಸಾಧ್ಯವಾಗುತ್ತಿಲ್ಲ. ಬಡತನ ಎಂಬುದು ಮಕ್ಕಳ ಶಿಕ್ಷಣಕ್ಕೆ ಅಡ್ಡಿ ಬರಬಾರದು ಎಂದರು.
ಈ ವೇಳೆ ಎಸೆಸೆಲ್ಸಿ, ಪಿಯುಸಿ, ಎಂಎ, ಎಂಎಸ್ಸಿ, ಎಂಬಿಬಿಎಸ್ ಹಾಗೂ ಬಿಇ ಪರೀಕ್ಷೆಯಲ್ಲಿ ಹೆಚ್ಚಿನ ಅಂಖ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ನೌಕರರು ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಲೆಕ್ಕಪತ್ರ ಇಲಾಖೆ ನಿವೃತ್ತ ಹಿರಿಯ ಉಪನಿರ್ದೇಶಕ ಜಿ.ಆರ್. ಹಿರಣಯ್ಯ, ಯಾದಗಿರಿ ನಗರಸಭೆ ಪೌರಾಯುಕ್ತ ಹಾಗೂ ಚಲನಚಿತ್ರ ಕಲಾವಿದ ಸಂಗಮೇಶ್ ಉಪಾಸೆ ಹಾಗೂ ಲೆಕ್ಕಪರಿಶೋಧಕ ಜಲೇಂದ್ರ ಮಾತನಾಡಿದರು. ಜಿಲ್ಲಾ ದೇವಾಂಗ ನೌಕರರ ಸಂಘದ ಅಧ್ಯಕ್ಷ ಬಿ. ಸೋಮಶೇಖರ್, ಕೆಪಿಟಿಸಿಎಲ್ ಲೆಕ್ಕಾಧಿಕಾರಿ ಕೆ. ಧರ್ಮೇಶ್, ರತನ್ ಕುಮಾರ್, ಜಿಪಂ ಸದಸ್ಯೆ ಜಯಮ್ಮ ರಂಗಶೇಟ್ಟರು, ಮಾಜಿ ಜಿಪಂ ಅಧ್ಯಕ್ಷ ವಿ.ಎ. ರಂಗಸ್ವಾಮಿ, ತಾಪಂ ಅಧ್ಯಕ್ಷ ಉಷಾಚಂದ್ರಶೆಟ್ಟಿ, ದೇವಾಂಗ ಸಂಘ ಜಂಠಿ ಕಾರ್ಯದಶಿ ಚಂದ್ರಶೇಖರ್, ಶ್ರೀನಿವಾಸ್ ಮೂರ್ತಿ, ಪತ್ರಕರ್ತ ಪುಟ್ಟಣ್ಣ, ಗೊರೂರು ಶಿವೇಶ್, ಚಿಕ್ಕಮಗಳೂರು ತಹಸೀಲ್ದಾರ್ ಗೀತ, ಪುರುಷೋತ್ತಮ್ ಇತರರು ಉಪಸ್ಥಿತರಿದ್ದರು. ಮಾಲೀನಿಶೇಷಗಿರಿ ಪ್ರಾರ್ಥಿಸಿದರು. ರಮೇಶ್ ಸ್ವಾಗತಿಸಿದರು.







