'ವಾರ್ತಾಭಾರತಿ' ವರದಿಗಾರನಿಗೆ ಜಾಮೀನು
ಮಂಗಳೂರು, ಸೆ.11: ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಮನೆಗೆ ಪೊಲೀಸರು ಇತ್ತೀಚೆಗೆ ನಡೆಸಿದ ದಾಳಿಯ ಕುರಿತಂತೆ ವರದಿಗೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ 'ವಾರ್ತಾಭಾರತಿ' ವರದಿಗಾರ ಇಮ್ತಿಯಾಝ್ ರಿಗೆ ಬಂಟ್ವಾಳ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ.
ಆರೋಪಿ ಖಲಂದರ್ ಮನೆಗೆ ಪೊಲೀಸರು ನಡೆಸಿದ ದಾಳಿಯ ಸಂದರ್ಭದಲ್ಲಿ ಪೊಲೀಸರು ಅಕ್ರಮ ಎಸಗಿದ್ದಾರೆ ಎಂದು ಕುಟುಂಬಸ್ಥರು ನೀಡಿರುವ ಹೇಳಿಕೆಗಳು ಸೆ.3ರ ‘ವಾರ್ತಾಭಾರತಿ’ ದೈನಿಕದಲ್ಲಿ ಪ್ರಕಟವಾಗಿದ್ದವು. ಈ ವರದಿಗೆ ಸಂಬಂಧಿಸಿ ಪೊಲೀಸರು ಪತ್ರಿಕೆಯ ವರದಿಗಾರ ಮತ್ತು ಪತ್ರಿಕೆಯ ಮುಖ್ಯಸ್ಥರ ವಿರುದ್ಧ ಕಲಂ 153 (ಎ) ಮತ್ತು 505 (2) ಐಪಿಸಿಯಂತೆ ಪ್ರಕರಣ ದಾಖಲಿಸಿದ್ದರು.
ಸೆ.7ರಂದು ಸಂಜೆ ಸುಮಾರು 7 ಗಂಟೆಯ ಹೊತ್ತಿಗೆ ಪತ್ರಿಕೆಯ ವರದಿಗಾರ ಇಮ್ತಿಯಾಝ್ ಅವರನ್ನು ವಿಚಾರಣೆಯ ನೆಪದಲ್ಲಿ ವಶಕ್ಕೆ ಪಡೆದು ಬಂಧಿಸಿದ್ದ ಪೊಲೀಸರು ಸೆ.8ರಂದು ಸಂಜೆ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಇಮ್ತಿಯಾಝ್ ರಿಗೆ ಜಾಮೀನು ಮಂಜೂರು ಮಾಡಿದೆ.