ಹುಟ್ಟು ಕುರುಡಿಗೆ 24 ವರ್ಷಗಳ ಬಳಿಕ ಭಾಗಶಃ ದೃಷ್ಠಿ !
ಉಡುಪಿಯಲ್ಲೊಂದು ಅಪರೂಪದ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿ
ಉಡುಪಿ, ಸೆ.12: ಹುಟ್ಟು ಕುರುಡಿಗೆ 24 ವರ್ಷಗಳ ಬಳಿಕ ಭಾಗಶಃ ದೃಷ್ಠಿ ಕರುಣಿಸುವಂತೆ ಮಾಡಿದ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಉಡುಪಿಯ ಕಣ್ಣಿನ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಪ್ರಸಾದ್ ನೇತ್ರಾಲಯದಲ್ಲಿ ನಡೆಸಲಾಗಿದೆ.
ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಕೆಂಚನಗುಡ್ಡ ತಾಂಡದ ಜ್ಯೋತಿ ಬಾಯಿ (24) ದೃಷ್ಠಿ ಪಡೆದುಕೊಂಡ ಮಹಿಳೆ. ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ. ಹರಿಪ್ರಸಾದ್ ಓಕುಡೆ ಹಾಗೂ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣ ಪ್ರಸಾದ್ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಜ್ಯೋತಿಯ ಬಾಳಿನಲ್ಲಿ ಬೆಳಕು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ವೆಂಕಟೇಶ್ ನಾಯಕ್ ಹಾಗೂ ಶಾಂತಿ ದಂಪತಿಯ ಆರು ಮಂದಿ ಮಕ್ಕಳಲ್ಲಿ ಜ್ಯೋತಿ ಬಾಯಿ ಎರಡನೆಯವರು. ಹುಟ್ಟು ಕುರುಡಿಯಾಗಿದ್ದ ಇವರು ಒಂಭತ್ತನೆ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾರೆ. ಬಡತನ ಸಮಸ್ಯೆಯಿಂದಾಗಿ ಹುಟ್ಟಿನಲ್ಲಿ ಕಣ್ಣನ್ನು ಯಾವುದೇ ವೈದ್ಯರಿಗೆ ತೋರಿಸಿಲ್ಲ. ಇತ್ತೀಚೆಗೆ ಬೆಂಗಳೂರಿನ ಅಂಧರ ಸಂಸ್ಥೆಯ ಮೂಲಕ ಬೆಂಗಳೂರಿನ ಅಂಧ ತಿಮ್ಮರಾಯ ಎಂಬವರ ಪರಿಚಯದಲ್ಲಿ ಉಡುಪಿಗೆ ಆಗಮಿಸಿದ ಜ್ಯೋತಿ ಬಾಯಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ.
‘ಬಳ್ಳಾರಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಜ್ಯೋತಿಯನ್ನು ಪರೀಕ್ಷಿಸಿದ್ದ ವೈದ್ಯರು ಈಕೆಗೆ ದೃಷ್ಠಿ ಬರಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದ್ದರು. ಶೇ.100 ಅಂಧತ್ವವನ್ನು ಹೊಂದಿರುವ ಈಕೆಗೆ 1992ರಿಂದ ರಾಜ್ಯ ಸರಕಾರದಿಂದ ವಿಕಲಚೇತನ ಮಾಸಾಶನ ಬರುತ್ತಿದೆ. 2016 ಡಿ.14ರಂದು ನಮ್ಮ ಆಸ್ಪತ್ರೆಗೆ ಬಂದಿದ್ದ ಜ್ಯೋತಿಯನ್ನು ಪರೀಕ್ಷಿಸಿ, ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ. ಆದರೆ ದೃಷ್ಠಿ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಇದಕ್ಕೆ 30-40ಸಾವಿರ ರೂ. ಖರ್ಚು ಆಗುತ್ತದೆ ಎಂಬುದಾಗಿ ಹೇಳಿದ್ದೆವು’ ಎಂದು ಡಾ.ಕೃಷ್ಣಪ್ರಸಾದ್ ಆಸ್ಪತ್ರೆಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿಯಲ್ಲಿ ಅವರು ಸಚಿವ ಪ್ರಮೋದ್ ಮಧ್ವರಾಜ್ರನ್ನು ಭೇಟಿಯಾಗಿ ನೆರವು ನೀಡುವಂತೆ ಮನವಿ ಮಾಡಿದ್ದರು. ಸಚಿವರು ನಮ್ಮನ್ನು ಸಂಪರ್ಕಿಸಿ ಜ್ಯೋತಿಗೆ ಶಸ್ತ್ರಚಿಕಿತ್ಸೆ ಮಾಡುವಂತೆ ತಿಳಿಸಿದರು. ಅದರಂತೆ ಆ.13ರಂದು ಆಸ್ಪತ್ರೆಗೆ ಆಗಮಿಸಿದ್ದ ಜ್ಯೋತಿ ಒಳರೋಗಿಯಾಗಿ ದಾಖಲಾಗಿದ್ದರು. ಇದೇ ವೇಳೆ ನೇತ್ರದಾನ ಮಾಡಿದ ಉಡುಪಿಯ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ಕರೆ ಬಂದಿತ್ತು. ಅದರಂತೆ ಆ ವ್ಯಕ್ತಿಯ ನೇತ್ರವನ್ನು ತೆಗೆದು ಜ್ಯೋತಿಗೆ ಜೋಡಿಸ ಲಾಯಿತು. ಡಾ.ಹರಿ ಪ್ರಸಾದ್ ಜ್ಯೋತಿಯ ಕರಿಗುಡ್ಡೆ ತೆಗೆದು ಜೋಡಿಸಿ, ಪೊರೆ ತೆಗೆದು, ಲೆನ್ಸ್ ಅಳವಡಿಸುವ ನಾಲ್ಕು ಶಸ್ತ್ರಚಿಕಿತ್ಸೆಯನ್ನು ಏಕಕಾಲದಲ್ಲಿ ನೆರವೇರಿಸಿದರು ಎಂದರು.
ಹುಟ್ಟಿದ ಮಗು ಕುರುಡಾಗಿದ್ದರೆ ಆರು ತಿಂಗಳೊಳಗೆ ಕಣ್ಣು ಜೋಡಿಸುವ ಕೆಲಸ ಮಾಡಬೇಕು. ಅದರ ನಂತರ ಮಗುವಿನ ಕಣ್ಣಿನ ನರ ಸತ್ತು ಹೋಗುತ್ತದೆ. ಅದರ ನಂತರ ಯಾವುದೇ ಕಾರಣಕ್ಕೂ ಮಗುವಿಗೆ ದೃಷ್ಟಿ ಬರಲು ಸಾಧ್ಯವಿಲ್ಲ. ಆದರೆ ಜ್ಯೋತಿಗೆ 24 ವರ್ಷಗಳ ನಂತರ ನಡೆಸಿದ ಶಸ್ತ್ರಚಿಕಿತ್ಸೆ ಸ್ವಲ್ಪ ಮಟ್ಟಿನಲ್ಲಿ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ಮಾಡಿದ ದಿನ ಕೇವಲ ಬೆಳಕು ಕಾಣುತ್ತಿತ್ತು. ಆದರೆ ಈಗ ಅವರಿಗೆ ಎದುರಿನಲ್ಲಿ ಇರುವ ವಸ್ತುಗಳು, ಮನುಷ್ಯರು ಕಾಣುತ್ತಾರೆ. ಅದರೆ ಅದು ಅಷ್ಟು ಸ್ಪಷ್ಟವಾಗಿ ಕಾಣುತ್ತಿಲ್ಲ. ಮುಂದೆ ಈ ದೃಷ್ಟಿ ಅಭಿವೃದ್ಧಿ ಯಾಗುವ ಸಾಧ್ಯತೆಗಳಿವೆ. ಯಾವುದನ್ನೂ ಖಚಿತವಾಗಿ ಹೇಳಲು ಆಗಲ್ಲ ಎಂದು ಡಾ.ಕೃಷ್ಣಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಂಧರಾದ ಜ್ಯೋತಿ ಬಾಯಿ, ತಿಮ್ಮರಾಯ ಬೆಂಗಳೂರು, ಡಾ. ಹರಿಪ್ರಸಾದ್ ಓಕುಡೆ ಉಪಸ್ಥಿತರಿದ್ದರು.
ಹುಟ್ಟಿನಿಂದ ಬೆಳಕೆ ಕಾಣದೆ ನನಗೆ ಬೆಳಕನ್ನು ತೋರಿಸಿದ್ದಾರೆ. ಇದು ನನ್ನ ಭಾಗ್ಯ. ಇದರಿಂದ ತುಂಬಾ ಸಂತೋಷ ಆಗುತ್ತಿದೆ. ಈಗ ನನ್ನ ಬಲಗಣ್ಣನ್ನು ಬದಲಾಯಿಸಿ ಬೇರೆ ಕಣ್ಣು ಜೋಡಿಸಲಾಗಿದೆ. ಈಗ ಎದುರಿನಲ್ಲಿ ಚಲಿಸುವ ವಸ್ತುಗಳು ಕಾಣುತ್ತದೆ. ಮುಂದೆ ಇದು ಅಭಿವೃದ್ಧಿಯಾಗುತ್ತದೆ ಎಂಬ ಆಶಯ ದೊಂದಿಗೆ ಇದ್ದೇನೆ. -ಜ್ಯೋತಿ ಬಾಯಿ, ಹುಟ್ಟು ಕುರುಡಿ
ಭಾರತದಲ್ಲಿ ನೇತ್ರದಾನದ ಬಗ್ಗೆ ಸಾಕಷ್ಟು ಜಾಗೃತಿ ಮೂಡಬೇಕಾಗಿದೆ. ದೃಷ್ಠಿಯ ವೌಲ್ಯ ದೃಷ್ಠಿ ಇದ್ದವರಿಗೆ ಗೊತ್ತಾಗುವುದಿಲ್ಲ. ದೃಷ್ಠಿ ಇಲ್ಲದೆ ಪ್ರಪಂಚ ವನ್ನೇ ನೋಡದವರು ನಮ್ಮ ದೇಶದಲ್ಲಿ 40 ಲಕ್ಷ ಮಂದಿ ಇದ್ದಾರೆ. ಆದರೆ ಪ್ರತಿ ವರ್ಷ ನೇತ್ರದಾನ ಮಾಡುವವರ ಸಂಖ್ಯೆ ಮಾತ್ರ ಕೇವಲ 35 ಸಾವಿರ. ಇದು ಸಾಕಾಗುವುದಿಲ್ಲ. ಜನರು ಹೆಚ್ಚು ಹೆಚ್ಚು ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿನಲ್ಲಿ ಬೆಳಕು ಮೂಡಿಸುವ ಕೆಲಸ ಮಾಡಬೇಕು. -ಡಾ. ಹರಿಪ್ರಸಾದ್ ಓಕುಡೆ, ನೇತ್ರತಜ್ಞ