ಕನ್ನಡಿಗರಿಗೆ ನ್ಯಾಯ ಒದಗಿಸಿ
ಮಾನ್ಯರೆ,
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರಕಾರಿ ಕೆಲಸ ಸಿಗಬೇಕಾದರೆ ತುಂಬಾ ಕಷ್ಟದ ಮಾತು. ಹಾಗಾಗಿ ಸರಕಾರಿ ಕೆಲಸ ಪಡೆದುಕೊಳ್ಳಲೋಸುಗ ವಿದ್ಯಾರ್ಥಿಗಳು ಹಲವು ಖಾಸಗಿ ಪರೀಕ್ಷಾ ತರಬೇತಿ ಸಂಸ್ಥೆಗಳಿಂದ ಸಾಕಷ್ಟು ಹಣ ಖರ್ಚು ಮಾಡಿ ಸೂಕ್ತ ತರಬೇತಿ ಪಡೆದುಕೊಂಡು ಹಗಲು ರಾತ್ರಿ ಲೆಕ್ಕಿಸದೆ ನಿರಂತರ ಅಭ್ಯಸಿಸಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧರಾಗುತ್ತಾರೆ. ಹೀಗಿರುವಾಗ ಸರಕಾರ ನೇಮಕಾತಿ ಹೊರಡಿಸಿರುವ ಐಬಿಪಿಎಸ್, ಆರ್ಆರ್ಬಿಪಿಒ ಆನ್ಲೈನ್ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯದವರಿಗೂ ನಮ್ಮಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದರಿಂದ ನಮ್ಮ ರಾಜ್ಯದ ಸಾವಿರಾರು ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿದ್ದಾರೆ.
ಅಲ್ಲದೆ ರಾಜ್ಯದ ಹಲವು ಗ್ರಾಮೀಣ ಸರಕಾರಿ ಬ್ಯಾಂಕುಗಳಲ್ಲಿ ಹೊರ ರಾಜ್ಯದವರೇ ನೇಮಕಾತಿಗೊಂಡಿರುವುದರಿಂದ ರೈತರಿಗೆ ಮತ್ತು ಜನಸಾಮಾನ್ಯರಿಗೆ ಭಾಷಾ ಸಮಸ್ಯೆ ಜೊತೆಗೆ ವ್ಯವಹಾರಕ್ಕೂ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ಇವುಗಳೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ರಾಜ್ಯ ಸರಕಾರ ಭವಿಷ್ಯದಲ್ಲಿ ರಾಜ್ಯದಲ್ಲಿ ಸರಕಾರಿ ನೌಕರಿ ಪಡೆದುಕೊಳ್ಳಲು ಸಾಕಷ್ಟು ನಿರೀಕ್ಷೆ ಹೊತ್ತಿರುವ ಕನ್ನಡದ ಅಭ್ಯರ್ಥಿಗಳಿಗೆ ಮಾತ್ರ ಪರೀಕ್ಷೆಗೆ ಅವಕಾಶ ನೀಡಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು.