ಬಿಸಿಯೂಟ ನೌಕರರಿಂದ ವಿಧಾನಸೌಧ ಚಲೋ
ಉಡುಪಿ, ಸೆ.13: ಕೇಂದ್ರ ಸರಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅನುದಾನ ಕಡಿತ ಮಾಡಿರುವುದನ್ನು ಹಾಗೂ ಕಳೆದ 8 ವರ್ಷ ಗಳಿಂದ ಕೇಂದ್ರ ಸರಕಾರ ವೇತನ ಹೆಚ್ಚಳ ಮಾಡದಿರುವುದನ್ನು ವಿರೋಧಿಸಿ ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯದಾದ್ಯಂತ ಬಿಸಿಯೂಟದ ನೌಕರರು ಸೆ.14ರಂದು ವಿಧಾನಸೌಧ ಚಲೋ ನಡೆಸಲಿದ್ದಾರೆ.
ಸರಕಾರ ಹಂತ ಹಂತವಾಗಿ ಕೇಂದ್ರಿಕೃತ ಅಡುಗೆ ಕೇಂದ್ರಗಳನ್ನು ತೆರೆಯುವುದರ ಮೂಲಕ ಬಿಸಿಯೂಟ ಯೋಜನೆಯನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಕಾರ್ಮಿಕರ ಸಂವಿಧಾನತ್ಮಕ ಹಕ್ಕಾದ ಆಹಾರ, ಆರೋಗ್ಯ, ಶಿಕ್ಷಣದ ಹಕ್ಕನ್ನು ಕೂಡ ಸಮರ್ಪಕವಾಗಿ ಜಾರಿ ಮಾಡದೆ ತನ್ನ ಹಿಡಿತ ಸಾಧಿಸಲು ಹೊರಟಿದೆ. ಕನಿಷ್ಟ ಕೂಲಿ ವ್ಯಾಪ್ತಿಗೆ ತರದೆ ಬಿಸಿಯೂಟ ಕಾರ್ಮಿಕರನ್ನು ದುಡಿಸುತ್ತಿದೆ. ಈ ಎಲ್ಲಾ ಕಾರಣಗಳೊಂದಿಗೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಸೆ.14ರಂದು ಎಲ್ಲಾ ಸದಸ್ಯರು ಕೆಲಸ ಸ್ಥಗಿತ ಮಾಡಿ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ನೌಕರರ ಸಂಘದ ಪ್ರಕಟಣೆ ತಿಳಿಸಿದೆ.
ಕಾರ್ಮಿಕರ ಕೆಲ ಬೇಡಿಕೆಗಳು: ಬಿಸಿಯೂಟ ಯೋಜನೆಗೆ ಕಳೆದ ಬಜೆಟ್ನಲ್ಲಿ ಕಡಿತ ಗೊಳಿಸಿರುವ ಹಣವನ್ನು ವಾಪಾಸು ನೀಡಬೇಕು ಹಾಗೂ ಯೋಜನೆಯನ್ನು ಆರ್ಥಿಕವಾಗಿ ಪ್ರಬಲಗೊಳಿಸಬೇಕು. 45ನೇ ಭಾರತೀಯ ಕಾರ್ಮಿಕರ ಸಮ್ಮೇಳನ ಶಿಫಾರಸ್ಸಿನಂತೆ ಈ ನೌಕರರಿಗೆ ಕನಿಷ್ಠ ಕೂಲಿ ಹಾಗೂ ಸಾಮಾಜಿಕ ಭದ್ರತೆ ಒದಗಿಸಬೇಕು. ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿ ತರಬೇಕು. ಬಿಸಿಯೂಟ ಯೋಜನೆಯಲ್ಲಿ ಕೆಲಸ ಮಾಡುವ ನೌಕರರನ್ನು ಶೆಡ್ಯೂಲ್ ಪಟ್ಟಿಗೆ ಸೇರಿಸಿ, ಕನಿಷ್ಠ ವೇತನ ನೀಡಬೇಕು.
ಬಿಸಿಯೂಟ ಯೋಜನೆಯನ್ನು 12ನೆ ತರಗತಿವರೆಗೆ ವಿಸ್ತರಣೆ ಮಾಡಬೇಕು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆಯವರಿರಬೇಕು. ಎಲ್ಲಾ ನೌಕರರಿಗೂ ರಾಷ್ಟ್ರೀಯ ಸ್ವಾಸ್ಥಾ ಭೀಮಾ ಯೋಜನೆ ಜಾರಿ ಮಾಡಬೇಕು.ಬಿಸಿಯೂಟ ನೌಕರರನ್ನು ಶಿಕ್ಷಣ ಇಲಾಖೆಯಲ್ಲಿ ಖಾಯಂಗೊಳಿಸಬೇಕು. ಅವರನ್ನು ಶಾಲಾ ಸಿಬ್ಬಂದಿಗಳೆಂದು ನೇಮಿಸಿ ಆದೇಶ ಪತ್ರ ನಿಡಬೇಕು.ಈ ನೌಕರರಿಗೆ ಪೆನ್ಷನ್ ಸೌಲಭ್ಯ ನೀಡಬೇಕು.