ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಗೆ ಸಜೆ
ಚಾಮರಾಜನಗರ, ಸೆ. 13 : ಕರ್ತವ್ಯನಿರತ ಪೊಲೀಸ್ ಪೇದೆಯೊಬ್ಬರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ 2 ವರ್ಷ 2 ತಿಂಗಳು ಸಾದಾ ಸಜೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ಅರಳೀಪುರ ಗ್ರಾಮದ ಹನುಮಶೆಟ್ಟಿ ಅವರ ಮಗ ನಾಗರಾಜು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಕಳೆದ 2013ರ ಏಪ್ರಿಲ್ 26ರಂದು ನಗರದ ಪಟ್ಟಣ ಪೊಲೀಸ್ ಠಾಣೆಯ ಮುಂಭಾಗ ಸಾರ್ವಜನಿಕರನ್ನು ಉದ್ದೇಶಿಸಿ ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದರು. ಈ ಸಮಯದಲ್ಲಿ ಸಮವಸ್ತ್ರದಲ್ಲಿದ್ದ ಪಟ್ಟಣ ಪೊಲೀಸ್ ಠಾಣೆಯ ಪೇದೆ ಎಂ. ಮಹೇಶ ಅವರು ಕೇಳಲು ಹೋದಾಗ ಆರೋಪಿಯು ಮಹೇಶ್ ಅವರ ಬಟ್ಟೆಯನ್ನು ಹಿಡಿದುಕೊಂಡು ಎಳೆದಾಡಿ ಬಾಯಿಯಿಂದ ಎಡಗಡೆ ಎದೆಯ ಬಳಿ ಕಚ್ಚಿ, ನಂತರ ಎಡಬೆರಳನ್ನೂ ಸಹ ಬಾಯಿಯಿಂದ ಕಚ್ಚಿ ತೀವ್ರ ಸ್ವರೂಪದ ಗಾಯ ಉಂಟು ಮಾಡಿದ್ದ.
ಪ್ರಕರಣ ದಾಖಲುಗೊಂಡು ಪೊಲೀಸ್ ಪೇದೆ ಮಹೇಶ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ನಾಗರಾಜುವಿಗೆ 2 ವರ್ಷ 2 ತಿಂಗಳ ಸಾದಾ ಸಜೆ ವಿಧಿಸಿ ಕಳೆದ ಸೆಪ್ಟೆಂಬರ್ 11ರಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.





