ದಾವಣಗೆರೆ : ಕೊಲೆ ಪ್ರಕರಣದ ಆರೋಪಿಗಳ ಬಂಧನ

ದಾವಣಗೆರೆ,ಸೆ.13:ಶಿರಮನಹಳ್ಳಿ ಸಮೀಪ ನಾಗನೂರು ಕಾಲುವೆ ರಸ್ತೆಯಲ್ಲಿ ಮಂಗಳವಾರ ವ್ಯಕ್ತಿಯೊಬ್ಬರನ್ನು ಬರ್ಬರ ಹತ್ಯೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೆನ್ನೈನ ಕಾಂಚಿಪುರಂನ ಹೊರಕ್ಕಟ್ಟುಪೆಟೈನ ಪೂಜಾರ ವೃತ್ತಿ ಮಾಡುವ ಬ್ರಾಹ್ಮಣ ವ್ಯಕ್ತಿಯಾದ ಎಂ.ಆರ್.ಅಶೋಕ(54) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿನೋಬ ನಗರ ವಾಸಿ, ಬಾರ್ ಬೆಂಡಿಂಗ್ ಕೆಲಸಗಾರ ಸತೀಶಕುಮಾರ (21 ವರ್ಷ), ಮಂಜುನಾಥ (22 ವರ್ಷ) ಅಲಿಯಾಸ್ ಮಂಜು ಅಲಿಯಾಸ್ ಬ್ಲಾಕಿ, ಶಾಬನೂರು ರಸ್ತೆಯ ಆಶ್ರಯ ಆಸ್ಪತ್ರೆ ಹಿಂಭಾಗದ ವಾಸಿ, ಚಾಲಕ ವೃತ್ತಿ ಮಾಡುವ ನೂರುಲ್ಲಾ (21 ವರ್ಷ) ಬಂಧಿತ ಆರೋಪಿಗಳು.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಡಾ.ಭೀಮಾಶಂಕರ್ ಎಸ್.ಗುಳೇದ್, ಶ್ವಾನದಳದ `ಪೂಜಾ' ನೀಡಿದ ಸುಳಿವಿನ ಆದಾರದಲ್ಲಿ ಬೇಧಿಸಿ, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊದಲ ಆರೋಪಿ ಸತೀಶನ ತಾಯಿ ಚಂದ್ರಮ್ಮನ ಜೊತೆಗೆ ಚೆನ್ನೈನ ಅಶೋಕ 3-4 ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದು, ಆಕೆ ಅಲ್ಲಿಯೇ ವಾಸವಾಗಿದ್ದರು. ಐದಾರು ತಿಂಗಳ ಹಿಂದಷ್ಟೇ ಚಂದ್ರಮ್ಮ ದಾವಣಗೆರೆಗೆ ಮರಳಿದ್ದರು. ಆಕೆಯನ್ನು ಹುಡುಕಿಕೊಂಡು ಅಶೋಕ ಇಲ್ಲಿಗೆ ಬಂದಿದ್ದನು ಎಂದರು.
ಅಶೋಕ ತನ್ನ ತಾಯಿಯನ್ನು ಹುಡುಕಿಕೊಂಡು ಬಂದ ವಿಚಾರ ತಿಳಿದ ಸತೀಶ ತನ್ನ ಸ್ನೇಹಿತರಾದ ಮಂಜುನಾಥ, ನೂರುಲ್ಲಾ ಜೊತೆಗೆ ಸೇರಿಕೊಂಡು ಅಶೋಕನನ್ನು ಕಳೆದ ದಿ.11ರಂದು ರಾತ್ರಿ 9.30ರಿಂದ 10 ಗಂಟೆ ವೇಳೆಯಲ್ಲಿ ತಾಲೂಕಿನ ನಾಗನೂರು ಕಾಲುವೆ ಬಳಗೆ ಕರೆದೊಯ್ದು ಥಳಿಸಿ, ನಂತರ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದರು. ನಂತರ ಮೃತನ ಮೊಬೈಲ್, ಎಟಿಎಂ ಕಾರ್ಡನ್ನು ಸತೀಶನಿಂದ, 2ನೇ ಆರೋಪಿ ಮಂಜುನಾಥ 300 ರು.ಗಳನ್ನು, 3ನೇ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಆಟೋ ಜಪ್ತು ಮಾಡಲಾಯಿತು ಎಂದು ಅವರು ತಿಳಿಸಿದರು.
ಪೊಲೀಸ್ ಶ್ವಾನದಳದ ಶ್ವಾನ `ಪೂಜಾ' ನೀಡಿದ ಸುಳಿವನ್ನು ಆದರಿಸಿ ಸಿಪಿಐ ಎಚ್.ಗುರುಬಸವರಾಜ ಮತ್ತು ತಂಡ ಆರೋಪಿಗಳನ್ನು ಬಂಧಿಸಲಾಗಿದೆ.
ಗ್ರಾಮಾಂತರ ಸಿಪಿಐ ಎಚ್.ಗುರುಬಸವರಾಜ, ಹದಡಿ ಠಾಣೆ ಎಸ್.ರೇವಣಸಿದ್ದಪ್ಪ, ಸಿಬ್ಬಂದಿಯಾದ ವೆಂಕಟೇಶ, ನಟರಾಜ, ಅಣ್ಣಯ್ಯ, ಎಚ್.ಡಿ.ಬಣಕಾರ್, ಮಂಜಪ್ಪ, ಶ್ರೀನಿ ವಾಸ, ಆಶಾ, ಬಸವರಾಜ, ನೀಲಪ್ಪ ಗಾಡಿ, ರಾಜಪ್ಪ, ರಾಜಪ್ಪ ಹಾಗೂ ಶ್ವಾನದಳದ ತಂಡಕ್ಕೆ, ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ರಾಮಚಂದ್ರ ಜಾಧವ್, ಅರುಣಕುಮಾರ, ರಮೇಶರ ಕಾರ್ಯಕ್ಕೆ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.







