ಮೂಡಿಗೆರೆ : ಜನಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಟ್ಟಣ ವಾಸಿಗಳಿಂದ ಸಮಸ್ಯೆಗಳ ಮಹಾಪೂರ

ಮೂಡಿಗೆರೆ, ಸೆ.13: ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವ್ಯಾಪಕ ಭ್ರಷ್ಟಾಚಾರದಿಂದಾಗಿ ಯಾವುದೇ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್ ವಿಷಾಧ ವ್ಯಕ್ತಪಡಿಸಿದರು.
ಅವರು ಬುಧವಾರ ಪಟ್ಟಣದ ಜೇಸಿ ಭವನದಲ್ಲಿ ಸಪ್ತಾಹದ ಅಂಗವಾಗಿ, ಜೇಸಿಐ ಸಂಸ್ಥೆ, ತಾಲೂಕು ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಪಟ್ಟಣದ ಅಭಿವೃದ್ಧಿ ಮತ್ತು ಕುಂದು ಕೊರತೆಗಳ ಕುರಿತು ಜನಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ನಾಗರಿಕರಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಾಮಾಣಿಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಭ್ರಷ್ಟಾಚಾರ ನಿಯಂತ್ರಣ ಮಾಡಲು ಮುಂದಾದರೆ ಹೆಸರು ಕೆಡಿಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ವ್ಯವಸ್ಥೆಗೆ ಹೊಂದಿಕೊಂಡು ಹೋಗುವಂತಹ ಅನಿವಾರ್ಯತೆ ಇರುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಕುಂಟಿತವಾಗುತ್ತಿದೆ.
ಸರಕಾರದ ಬಿಡುಗಡೆಯಾದ ಅನುಧಾನದಲ್ಲಿ ಇಂಜಿನಿಯರ್ಗಳಿಗೆ ಇಂತಿಷ್ಟು ಎಂಬಂತೆ ಗುತ್ತಿಗೆದಾರರು ಪರ್ಸಂಟೇಜ್ ಕೊಡಬೇಕಾಗುತ್ತದೆ. ಇಲ್ಲವಾದರೆ ಯವುದೇ ಬಿಲ್ ಪಾಸಾಗುವುದಿಲ್ಲ. ಪರ್ಸಂಟೇಜ್ ಕೊಟ್ಟಾಗ ಕಾಮಗಾರಿಯಲ್ಲಿ ಕಳಪೆಯಾಗುತ್ತದೆ. ಈ ಪದ್ದತಿ ನಿಲ್ಲಬೇಕು. ಅಲ್ಲದೆ ಅಭಿವೃದ್ಧಿ ಅನುಧಾನಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡುವುದರ ಬಗ್ಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪ್ರಶ್ನಿಸುವಂತಾದರೆ ಮಾತ್ರ ಅಭಿವೃದ್ಧಿ ಪತದಲ್ಲಿ ಸಾಗಲು ಸಾಧ್ಯ ಎಂದು ಹೇಳಿದರು.
ಪಪಂ ಸದಸ್ಯರಾದ ಲತಾ ಲಕ್ಷ್ಮಣ್ ಹಾಗೂ ಟಿ.ಎ.ಮದೀಶ್, ಮುಖ್ಯಾಧಿಕಾರಿ ಕಲಾವತಿ ಅವರು, ಪಟ್ಟಣದಲ್ಲಿ ನಡೆದ ಅಭಿವೃದ್ಧಿ, ಇನ್ನು ಮುಂದೆ ಆಗಬೇಕಾದ ಅಭಿವೃದ್ಧಿ ಹಾಗೂ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಸಮಸ್ಯೆಯನ್ನು ಪರಿಹರಿಸುವ ಬರವಸೆಯೊಂದಿಗೆ ಸಮಜಾಯಿಸಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು, ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ವೃತಾಪೂಲಾಗುತ್ತಿರುವುದು, ಕಸ ವಿಲೇವಾರಿ, ಹೋಟೆಲ್ಗಳಿಂದ ಬರುವ ತ್ಯಾಜ್ಯವನ್ನು ಚರಂಡಿಗೆ ಬಿಡುವುದು, ಕಿರಿದಾದ ರಸ್ತೆ ಇರುವುದರಿಂದ ಟ್ರಾಫಿಕ್ ಸಮಸ್ಯೆ, ಎಂ.ಜಿ.ರಸ್ತೆ ಅಗಲೀಕರಣ, ಎಲ್ಲೆಂದರಲ್ಲಿ ಕೋಳಿ ಮಾಂಸದ ಅಂಗಡಿಗಳ ಸ್ಥಾಪನೆ, ಮಳಿಗೆಗಳು ಹರಾಜು ಮಾಡದಿರುವುದು, ಶೌಚಾಲಯ, ರಸ್ತೆ ನಿರ್ಮಾಣ, ಬೀದಿದೀಪ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುಂದಿಟ್ಟರು.
ಬಳಿಕ ಕಾರ್ಯಕ್ರಮದ ಆಯೋಜಕರಿಂದ ಪಟ್ಟಣದ ಸಮಸ್ಯೆಗಳನ್ನು ಪರಿಹರಿಸುವಂತೆ ಮುಖ್ಯಾಧಿಕಾರಿ ಕಲಾವತಿ ಅವರಿಗೆ ಮನವಿ ನೀಡಲಾಯಿತು. ಜೇಸಿಐ ಅಧ್ಯಕ್ಷ ನಯನ ಕಣಚೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಶಾಮಣ್ಣ, ತಾ.ಪಂ. ಸದಸ್ಯರಾದ ಭಾರತಿ ರವೀಂದ್ರ, ಸುಂದರ್ ಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ನಯನ ತಳವಾರ, ರೋಟರಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ್, ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ಗೌಡ, ಶಶಿಕಿರಣ್, ರವಿಕುಮಾರ್, ಎಂ.ಎಸ್.ಅಶೋಕ್, ಹೆಚ್.ಕೆ.ಯೋಗೇಶ್, ಟಿ.ಹರೀಶ್ ಉಪಸ್ಥಿತರಿದ್ದರು.
ಮೂಡಿಗೆರೆ ತಾಲೂಕಿನಲ್ಲಿ ಮೂವರು ಶಾಸಕರಿದ್ದರೂ ಪಪಂ ಅಭಿವೃದ್ಧಿ ಮತ್ತು ಕುಂದುಕೊರತೆಗಳ ಬಗ್ಗೆ ಸಂವಾಧ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಅಲ್ಲದೆ ಪಪಂ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಒಟ್ಟು 9 ಮಂದಿ ಸದಸ್ಯರು ಗೈರು ಹಾಜರಾಗಿದ್ದರು. ಇದರಿಂದ ನೆರದಿದ್ದವರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು. ಇವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ನಾವು ಬೇಕಾಗಿತ್ತು. ನಮ್ಮ ಅವಹಾಲು ಸ್ವೀಕರಿಸಲು ಇವರಿಗೆ ಪುರುಸೋತ್ತಿಲ್ಲ. ಇಂತಹ ಜನಪ್ರತಿನಿಧಿಗಳ ಅಗತ್ಯ ನಮಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ, ಕೈಯಲ್ಲಿದ್ದ ಅಹವಾಲು ಯಾರಿಗೆ ಸಲ್ಲಿಸಬೇಕೆಂದು ತಿಳಿಯದೆ ಪರದಾಡಬೇಕಾಯಿತು. ನಂತರ ಸ್ಥಳದಲ್ಲಿದ್ದ ಒಂದೆರಡು ಸದಸ್ಯರು ಸಹಿತ ಮುಖ್ಯಾಧಿಕಾರಿಗೆ ಸಲ್ಲಿಸಿ ಮರಳಬೇಕಾಯಿತು.







