ಸಯನೈಡ್ ಕಿಲ್ಲರ್ ಮೋಹನ್ ಕುಮಾರ್ ವಿರುದ್ಧದ 4ನೆ ಆರೋಪ ಸಾಬೀತು
ಮಂಗಳೂರು, ಸೆ.13: ಪುತ್ತೂರು ತಾಲೂಕಿನ ಪಟ್ಟೆಮಜಲು ಗ್ರಾಮದ ಯುವತಿಯ ಅತ್ಯಾಚಾರ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಯನೈಡ್ ಸರಣಿ ಕಿಲ್ಲರ್ ಮೋಹನ್ ಕುಮಾರ್ನನ್ನು ತಪ್ಪಿತಸ್ಥನೆಂದು 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಕೊಲೆ, ಅತ್ಯಾಚಾರ, ಚಿನ್ನಾಭರಣ ಲೂಟಿ, ಸಯನೈಡ್ ನೀಡಿಕೆ, ಸಾಕ್ಷಿ ನಾಶ ನ್ಯಾಯಾಲಯದಲ್ಲಿ ಸಾಬೀತಾಗಿರುವುದರಿಂದ ನ್ಯಾಯಾಲಯದ ನ್ಯಾಯಾಧೀಶ ಡಿ.ಪಿ.ಪುಟ್ಟರಂಗ ಸ್ವಾಮಿ ಈ ತೀರ್ಪು ನೀಡಿದ್ದಾರೆ.
ಮೋಹನ್ ಕುಮಾರ್ ತನ್ನನ್ನು ಆನಂದ ಎಂದು ಯುವತಿಯೊಂದಿಗೆ ಪರಿಚಯಿಸಿಕೊಂಡಿದ್ದು, ಮದುವೆಯಾಗುವುದಾಗಿ ನಂಬಿಸಿ ಭರವಸೆ ನೀಡಿದ್ದ.
2009ರ ಸೆಪ್ಟಂಬರ್ 17ರಂದು ಯುವತಿಯನ್ನು ಚಿನ್ನಾಭರಣದೊಂದಿಗೆ ಪುತ್ತೂರಿನ ಮಾರ್ಕೆಟ್ಗೆ ಕರೆಸಿಕೊಂಡಿದ್ದ ಮೋಹನ್ ಕುಮಾರ್, ಬಳಿಕ ಆಕೆಯನ್ನು ಮಡಿಕೇರಿಗೆ ಕರೆದೊಯ್ದು ಲೈಂಗಿಕ ಸಂಪರ್ಕ ಬೆಳೆಸಿದ್ದ. ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಮಾತ್ರೆಯ ಹೆಸರಿನಲ್ಲಿ ಯುವತಿಗೆ ಸಯನೈಡ್ ಅನ್ನು ನೀಡಿದ್ದ. ಇದನ್ನು ಸೇವಿಸಿದ ಯುವತಿ ಮೃತಪಟ್ಟ ಬಳಿಕ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದ. 44 ಸಾಕ್ಷಿಗಳನ್ನು ವಿಚಾರಿಸಿ 60 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ಎಂದು ತಿಳಿಸಿದ್ದಾರೆ. ಪ್ರಾಸಿಕ್ಯೂಶನ್ ಪರವಾಗಿ ಜುಡಿತ್ ಕ್ರಾಸ್ತಾ ವಾದಿಸಿದ್ದರು.