ಆಯುಷ್ನಿಂದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ
ಮಂಗಳೂರು, ಸೆ.14: ಆಯುಷ್ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಯುಷ್ ಆಸ್ಪತ್ರೆ, ಮಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಸುಲ್ತಾನ್ ಬತ್ತೇರಿಯ ಬೋಳೂರಿನಲ್ಲಿರುವ ಅಕ್ಷರ ಸದನ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಜರಗಿತು.
ಶಿಶು ಕಲ್ಯಾಣಾಧಿಕಾರಿ ಶೋಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಜಿಲ್ಲಾ ಆಯುರ್ವೆದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಹೇಮವಾಣಿ ಪಿ. ಪೌಷ್ಟಿಕ ಆಹಾರದ ಮಹತ್ವ, ಮಕ್ಕಳಿಗೆ ಕೊಡಬಹುದಾದ ವಿವಿಧ ಪೌಷ್ಟಿಕ ಆಹಾರ ತಯಾರಿಕಾ ವಿಧಾನವನ್ನು ವಿವರಿಸಿದರು.
ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ.ದೇವದಾಸ್, ಬರ್ಕೆ ಠಾಣೆಯ ನಿರೀಕ್ಷಕ ರಾಮಕೃಷ್ಣ, ಮಾಜಿ ಕಾರ್ಪೊರೇಟರ್ ಕಮಲಾಕ್ಷ ಸಾಲಿಯಾನ್, ಲಿಂಕ್ ನ ಆಪ್ತ ಸಮಾಲೋಚಕಿ ಲಿಡಿಯಾ, ಯುನೈಟೆಡ್ ಯೂತ್ ಕ್ಲಬ್ ನ ವಾಸುದೇವ ಬೋಳಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸುಮಾರು 60 ಮಂದಿ ಸಾರ್ವಜನಿಕರು ಸಮಾರಂಭದಲ್ಲಿ ಪಾಲ್ಗೊಂಡು ವಿವಿಧ ರೀತಿಯ ಪೌಷ್ಟಿಕ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರದರ್ಶಿಸಿದರು. ಅವರಿಗೆ ಇಲಾಖೆಯ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಶುಶ್ರೂಷಕಿ ಸುನಂದಾ, ಅಂಗನವಾಡಿ ಮೇಲ್ವಿಚಾರಕಿ ಶೈಲಜಾ ಹಾಗೂ ಕಾರ್ಯಕರ್ತೆ ಕುಮುದಾಕ್ಷಿ ಸಹಕರಿಸಿದರು.