ಹಣಕ್ಕಾಗಿ ಸತಾಯಿಸಬೇಡಿ-ದಾಖಲೆ ಪರಿಶೀಲಿಸಿ ಹಕ್ಕುಪತ್ರ ನೀಡಿ: ಕಾಗೋಡು
ಮಂಗಳೂರು, ಸೆ.14: ಯಾವ ಕಾರಣಕ್ಕೂ ಫಲಾನುಭವಿಗಳನ್ನು ಹಣಕ್ಕಾಗಿ ಸತಾಯಿಸಬಾರದು. ದಾಖಲೆಗಳನ್ನು ಪರಿಶೀಲಿಸಿ ಹಕ್ಕು ಪತ್ರ ನೀಡಲು ಸೂಚಿಸಿದ್ದೇನೆ. ಒಂದು ವೇಳೆ ಹಣಕ್ಕಾಗಿ ಸತಾಯಿಸಿದ ಪ್ರಕರಣ ಬೆಳಕಿಗೆ ಬಂದರೆ ಅಂತಹ ಅಧಿಕಾರಿಗಳಿಗೆ ‘ಬರೆ’ ಹಾಕಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಮಂಗಳೂರು ವಿವಿಯ ಅತಿಥಿಗೃಹದಲ್ಲಿ ಗುರುವಾರ ಅಧಿಕಾರಿಗೊಂದಿಗೆ ಪ್ರಗತಿಪರಿಶೀಲನೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಬಗರ್ಹುಕುಂ ಯೋಜನೆಯಡಿ ಫಾರಂ 50ರಡಿ 3 ಸಾವಿರ ಹಾಗೂ ಫಾರಂ 53ರಡಿ 15,671 ಅರ್ಜಿಗಳನ್ನು ವಿಲೇವಾರಿಗೊಳಿಸಲು ತೀರ್ಮಾನಿಸಲಾಗಿದೆ. ಫಾರಂ 50ರಲ್ಲಿ 694 ಅರ್ಜಿಗಳು ಮತ್ತು ಫಾರಂ 53ರಡಿ 12,256 ಅರ್ಜಿಗಳು ಬಾಕಿ ಇದ್ದು, ಅವುಗಳ ವಿಲೇವಾರಿಗೆ ಕ್ರಮ ಜರಗಿಸಲಾಗುವುದು ಎಂದರು.
94 ಸಿ ಯೋಜನೆಯಡಿ ಜಿಲ್ಲೆಯಲ್ಲಿ 77,814 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 73,397 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿಯುಳಿದ 4,417 ಅರ್ಜಿಗಳ ವಿಲೇವಾರಿಗೆ ಕ್ರಮ ಜರಗಿಸಲಾಗುವುದು. 94ಸಿಸಿ ಯೋಜನೆಯಡಿ 30,872 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 9309 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 21,563 ಅರ್ಜಿಗಳು ಬಾಕಿ ಇದೆ. ಈಗಾಗಲೆ 35,577 ಹಕ್ಕುಪತ್ರಗಳನ್ನು ನೀಡಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ಸರಕಾರ ಇಂತಹ ಮಹತ್ತರವಾದ ಯೋಜನೆಗಳನ್ನು ಜಾರಿಗೊಳಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವು ವಿಳಂಬಗೊಳ್ಳುತ್ತಿವೆ. ಹಾಗಾಗಿ ಈ ಬಗ್ಗೆ ಎಲ್ಲಾ ತಹಶೀಲ್ದಾರರು ಕ್ರಿಯಾಶೀಲರಾಗಬೇಕು. ವಾರಕ್ಕೊಂದು ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡಬೇಕು. ದಾಖಲೆಪತ್ರ ಪರಿಶೀಲಿಸಿದ ತಕ್ಷಣ ಹಕ್ಕು ಪತ್ರ ಕೊಡಲು ಮುಂದಾಗಬೇಕು. ಯಾವ ಕಾರಣಕ್ಕೂ ಹಣಕ್ಕಾಗಿ ಸತಾಯಿಸಬಾರದು. ಹಣ ಪಾವತಿಗೂ ಹಕ್ಕು ಪತ್ರ ವಿತರಣೆಗೂ ಸಂಬಂಧವಿಲ್ಲ. ಹಣ ಪಾವತಿಸದಿದ್ದರೆ ನೋಟಿಸ್ ಕೊಡಲು ಸೂಚಿಸಲಾಗಿದೆ. ಶಾಸಕರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಲಾಗಿದೆ. ಆಯಾ ಗ್ರಾಮದ ವಿಎ, ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲು ತಿಳಿಸಲಾಗಿದೆ ಎಂದರು.