ಅಮಾನತ್ ಬ್ಯಾಂಕ್ ಪುನರ್ ಕಾರ್ಯಾರಂಭ ಸಾಧ್ಯತೆ: ನಾಸೀರ್ ಅಹ್ಮದ್
ಬೆಂಗಳೂರು, ಸೆ.14: ಮುಸ್ಲಿಮ್ ಸಮುದಾಯದ ಆಸ್ತಿಯಾಗಿರುವ ಅಮಾನತ್ ಬ್ಯಾಂಕ್ ಪುನರ್ ಕಾರ್ಯಾರಂಭ ಮಾಡಲು ಸಾಧ್ಯತೆಯಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷ ನಾಸೀರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಶಿವಾಜಿನಗರದಲ್ಲಿರುವ ಅಮಾನತ್ ಬ್ಯಾಂಕ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಸಭಾ ಸದಸ್ಯ ರಹ್ಮಾನ್ ಖಾನ್ 8.50 ಕೋಟಿ ರೂ.ಶೇರ್ ಕ್ಯಾಪಿಟಲ್ ಹಾಕಿದ್ದಾರೆ. ಇನ್ನು 22.50 ಕೋಟಿ ರೂ.ಸಂಗ್ರಹವಾದರೆ, ಆರ್ಬಿಐ ಬ್ಯಾಂಕ್ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಲಿದೆ ಎಂದರು.
ಬ್ಯಾಂಕಿಗೆ ಸೇರಿದ ಸುಮಾರು 80 ಕೋಟಿ ರೂ.ಗಳ ಆಸ್ತಿಗಳು ಸಂರಕ್ಷಿತವಾಗಿವೆ. ಅಲ್ಲದೆ, 135 ಕೋಟಿ ರೂ.ಠೇವಣಿ ಹಣ ಲಭ್ಯವಿದೆ. ಅಮಾನತ್ ಬ್ಯಾಂಕ್ ಮೊದಲಿನಂತೆ ಸಂಕಷ್ಟದ ಪರಿಸ್ಥಿತಿಯಲ್ಲಿ ಇಲ್ಲ. ಸೆ.17ರಂದು ನಡೆಯಲಿರುವ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಉತ್ತಮ ತಂಡ ಆಯ್ಕೆಯಾಗಿ ಬಂದರೆ, ಅಮಾನತ್ ಬ್ಯಾಂಕ್ ಮತ್ತೆ ಕಾರ್ಯಾರಂಭ ಮಾಡಲು ಹಾದಿ ಸುಗಮವಾಗಿದೆ ಎಂದು ಹೇಳಿದರು.
ಬ್ಯಾಂಕಿನ ಶಾಸನಬದ್ಧ ಲೆಕ್ಕಪರಿಶೋಧನೆ ಹಾಗೂ ಆರ್ಬಿಐ ಲೆಕ್ಕಪರಿಶೋಧನೆ ಆಗಿದೆ. 22 ಕೋಟಿ ರೂ.ಗಳನ್ನು ಸಂಗ್ರಹ ಮಾಡಿಕೊಂಡರೆ, ಬ್ಯಾಂಕ್ ಮತ್ತೆ ಆರಂಭಿಸಲು ಆರ್ಬಿಐ ಅನುಮತಿ ನೀಡುತ್ತದೆ. ಈ ಬ್ಯಾಂಕ್ ಉಳಿಸಿಕೊಳ್ಳಬೇಕಿದೆ. ಇಂತಹ ಮತ್ತೊಂದು ಬ್ಯಾಂಕ್ ಆರಂಭಿಸಲು ಕನಿಷ್ಠ 1 ಸಾವಿರ ಕೋಟಿ ರೂ.ಬೇಕಾಗುತ್ತದೆ ಎಂದು ತಿಳಿಸಿದರು.
2012ರ ಸೆಪ್ಟಂಬರ್ 22ರಂದು ನನ್ನ ಅಧ್ಯಕ್ಷತೆಯ ಆಡಳಿತ ಮಂಡಳಿಯು ಬ್ಯಾಂಕಿನ ಜವಾಬ್ದಾರಿಯನ್ನು ವಹಿಸಿಕೊಂಡಿತು. ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸುಧಾರಿಸಲಾಗಿದೆ. ಸೆ.30ರವರೆಗೆ 393.97 ಕೋಟಿ ರೂ.ಬ್ಯಾಂಕ್ನಲ್ಲಿ ಜಮೆಯಾಗಿತ್ತು. 2013ರ ಮಾ.31ರ ವೇಳೆಗೆ ಈ ಮೊತ್ತವು 428.53 ಕೋಟಿ ರೂ.ಗಳಿಗೆ ಹೆಚ್ಚಳಗೊಂಡಿತ್ತು. ಅಧಿಕಾರ ವಹಿಸಿಕೊಂಡ ಆರು ತಿಂಗಳಲ್ಲಿ 34.56 ಕೋಟಿ ರೂ.ಹೆಚ್ಚುವರಿ ಹಣ ಜಮೆಯಾಗಿತ್ತು ಎಂದರು.
ಅದೇ ವರ್ಷದ ಸೆ.30ರ ವೇಳೆಗೆ 241.13 ಕೋಟಿ ರೂ.ಗಳಷ್ಟಿದ್ದ ಮುಂಗಡ ಹಣದ ಪ್ರಮಾಣವು ಮಾರ್ಚ್ ಅಂತ್ಯಕ್ಕೆ 257.40 ಕೋಟಿ ರೂ.ಗಳಿಗೆ ಹೆಚ್ಚಳಗೊಂಡಿತ್ತು. ಆದರೆ, ಆಕಸ್ಮಿಕವಾಗಿ 2013ನೆ ಸಾಲಿನ ಎಪ್ರಿಲ್ 5ರಂದು ಆರ್ಬಿಐ ಬ್ಯಾಂಕ್ನ ಎಲ್ಲ ವ್ಯವಹಾರಗಳ ಮೇಲೆ ನಿರ್ಬಂಧ ವಿಧಿಸಿತು ಎಂದು ತಿಳಿಸಿದರು.
ನ್ಯಾಯಾಲಯದ ಆದೇಶದಂತೆ ಸಂಕಷ್ಟದ ಸಂದರ್ಭದಲ್ಲಿ ಒಂದು ಲಕ್ಷ ರೂ.ಗಳಿಗಿಂತ ಕಡಿಮೆ ಮೊತ್ತದ ಠೇವಣಿ ಇಟ್ಟಿದ್ದ 9920 ಮಂದಿಗೆ 75 ಕೋಟಿ ರೂ.ಗಳನ್ನು ಪಾವತಿಸಲಾಗಿತ್ತು. ಕೆಲ ಕಾಲ ನಂತರ ಆರ್ಬಿಐ ಠೇವಣಿದಾರರ ಪೂರ್ಣಮೊತ್ತ ಪಾವತಿಸಲು ಅವಕಾಶ ನೀಡಿದಾಗ 47.02 ಕೋಟಿ ರೂ.ಗಳನ್ನು ಪಾವತಿಸಲಾಗಿದೆ ಎಂದು ಹೇಳಿದರು.
ಇದೇ ಅವಧಿಯಲ್ಲಿ ಒಂದು ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಠೇವಣಿ ಇರಿಸಿದ್ದವರಿಗೆ 180.78 ಕೋಟಿ ರೂ.ಗಳನ್ನು ಪಾವತಿ ಮಾಡಲಾಗಿದೆ. ಈ ರೀತಿ ಒಟ್ಟಾರೆ ಯಾಗಿ 292.80 ಕೋಟಿ ರೂ.ಗಳನ್ನು ಎಲ್ಲ ಠೇವಣಿದಾರರಿಗೆ ಪಾವತಿಸಲಾಗಿದೆ ಎಂದ ಅವರು, 44 ಕೋಟಿ ರೂ.ಗಳು ಶೇರ್ ಕ್ಯಾಪಿಟಲ್ ನಮ್ಮ ಬಳಿ ಲಭ್ಯವಿದೆ. ಈಗ ಪ್ರಸ್ತುತ ಬ್ಯಾಂಕ್ನಲ್ಲಿ 135 ಕೋಟಿ ರೂ.ಠೇವಣಿ ಮೊತ್ತ ಇದೆ. ಬ್ಯಾಂಕಿಗೆ ಸುಮಾರು 76 ಕೋಟಿ ರೂ.ಗಳು ಮರುಪಾವತಿಯಾಗಬೇಕಿದೆ. ಐದು ವರ್ಷಗಳಲ್ಲಿ 257 ಕೋಟಿ ರೂ.ಗಳ ಪೈಕಿ 222 ಕೋಟಿ ರೂ.ಗಳನ್ನು ನಾವು ಸಂಗ್ರಹಿಸಿದ್ದೇವೆ ಎಂದು ಹೇಳಿದರು.
ಬ್ಯಾಂಕಿನ ಮಾಜಿ ಪ್ರಧಾನ ವ್ಯವಸ್ಥಾಪಕರೊಬ್ಬರ ತೋಟದ ಮನೆ ಹಾಗೂ ನಿವೇಶವನ್ನು ಹರಾಜು ಹಾಕಿ 15.75 ಕೋಟಿ ರೂ.ಗಳು ಹಾಗೂ ಇನ್ನುಳಿದಂತೆ 13 ಕೋಟಿ ರೂ.ಗಳು ಸೇರಿದಂತೆ ಎನ್ಪಿಎಸ್ ಅಡಿಯಲ್ಲಿ 28 ಕೋಟಿ ರೂ.ಗಳು ಬ್ಯಾಂಕಿಗೆ ಜಮೆಯಾಗಿದೆ ಎಂದು ಅವರು ವಿವರಣೆ ನೀಡಿದರು.
380 ಸಿಬ್ಬಂದಿಗಳು ಬ್ಯಾಂಕ್ನಲ್ಲಿ ಇದ್ದರು. 250 ಮಂದಿ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದಾರೆ. ಈಗ 130 ಮಂದಿ ಇದ್ದಾರೆ. ಇದರಿಂದ ಬ್ಯಾಂಕಿನ ಖರ್ಚುವೆಚ್ಚ ಕಡಿಮೆಯಾಗಿದೆ. ಜೊತೆಗೆ, ಬಿವಿಕೆ ಅಯ್ಯಂಗಾರ್ ಹಾಗೂ ಜೆಜೆಆರ್ ನಗರದ ಶಾಖೆಗಳನ್ನು ಮುಚ್ಚಿ ಎನ್.ಆರ್.ರಸ್ತೆಗೆ ಸ್ಥಳಾಂತರ, ಆಸ್ಟಿನ್ ಟೌನ್ ಶಾಖೆಯನ್ನು ಬ್ರಿಗೇಡ್ರಸ್ತೆಗೆ ಹಾಗೂ ಆರ್.ಬಿ.ರಸ್ತೆ ಶಾಖೆಯನ್ನು ಸಿದ್ದಯ್ಯ ರಸ್ತೆ ಶಾಖೆಗೆ ಸ್ಥಳಾಂತರ ಮಾಡಲಾಗಿದೆ ಎಂದರು.
ಸಂಕಷ್ಟದ ಸಂದರ್ಭದಲ್ಲಿ ನಮಗೆ ಜೊತೆ ನಿಂತ ಠೇವಣಿದಾರರು, ಜನಸಾಮಾನ್ಯರು, ನಿರ್ದೇಶಕರು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಅಧಿಕಾರವಧಿಯು ಸೆ.22ಕ್ಕೆ ಅಂತ್ಯಗೊಳ್ಳಲಿದ್ದು, ನೂತನ ತಂಡವು ಈ ಬ್ಯಾಂಕ್ನ್ನು ಉಳಿಸಿ, ಮುನ್ನಡೆಸಲಿ ಎಂದು ನಾಸೀರ್ ಅಹ್ಮದ್ ಹಾರೈಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಮಾನತ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಂಡು ಕುಂಬ್ಳೆ, ಪ್ರಧಾನ ವ್ಯವಸ್ಥಾಪಕ ಚೈಯಬ್ಬ, ನಿರ್ದೇಶಕರಾದ ರಹ್ಮತುಲ್ಲಾ, ಮುಸ್ತಫಾ ಆಝಮ್ ಶರೀಫ್ ಉಪಸ್ಥಿತರಿದ್ದರು.







