ಭಟ್ಕಳ: ದೊಂಬಿ, ಕಲ್ಲೆಸೆತ, ಪೊಲೀಸರ ಮೇಲೆ ಹಲ್ಲೆ ಸಂಬಂಧಿಸಿದಂತೆ 4 ಪ್ರಕರಣ ದಾಖಲು

ಭಟ್ಕಳ, ಸೆ. 15: ಪುರಸಭೆ ಅಂಗಡಿ ಮಳಿಗೆ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಆಕ್ರೋಷಿತರು ಪುರಸಭೆ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ಸಿಬ್ಬಂಧಿಗಳ ಮೇಲೆ ಹಲ್ಲೆ, ಆತ್ಮಹತ್ಯೆಗೆ ಯತ್ನ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಸಂಬಂಧಿಸಿದಂತೆ ಒಟ್ಟು ನಾಲ್ಕು ವಿವಿಧ ಪ್ರಕರಣಗಳು ಭಟ್ಕಳ ನಗರ ಠಾಣೆಯಲ್ಲಿ ದಾಖಲಾಗಿವೆ.
ಪೊಲೀಸ್ ಸಿಬ್ಬಂದಿ ಗೌತಮ್ ನೀಡಿದ ದೂರಿನಲ್ಲಿ ಗುರುವಾರ ಬೆಳಗ್ಗೆ ಅಂಗಡಿ ಕಬ್ಜಾ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ ಚಿತ್ರಿಕರಣ ಮಾಡುತ್ತಿದ್ದಾಗ ಬಿಜೆಪಿ ಮುಖಂಡ ಗೋವಿಂದ ನಾಯ್ಕ ಸೇರಿದಂತೆ ರಾಘವೇಂದ್ರ ನಾಯ್ಕ, ಮಾರೂತಿ ನಾಯ್ಕ, ಶ್ರೀನಿವಾಸ ನಾಯ್ಕ, ಸುಧಾಕರ್ ನಾಯ್ಕ, ಕೃಷ್ಣಾನಂದ ಸಾಣಿಕಟ್ಟೆ, ತುಳಸಿದಾಸ ನಾಯ್ಕ, ಕುಮಾರ್ ನಾಯ್ಕ, ಉದಯ ನಾಯ್ಕ ಹಾಗೂ ನಾಗರಾಜ ನಾಯ್ಕ ಎನ್ನುವವರು ಅವಾಚ್ಯ ಶಬ್ಧಗಳಿಂದ ಬೈಯ್ದು, ನೀರನ್ನು ಮುಖಕ್ಕ ಎರಚಿ ಕಾಲಿಗೆ ಗಾಯ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪುರಸಭೆಯ ಕಿರಿಯ ಇಂಜಿನೀಯರ್ ಉಮೇಶ್ ಮಡಿವಾಳ ದೂರನ್ನು ನೀಡಿದ್ದು, ಗುರುವಾರ ಅಂಗಡಿಗಳನ್ನು ಕಬ್ಜಾ ಪಡೆಯುವ ಸಂದರ್ಭದಲ್ಲಿ ಕಿಡಿಗೇಡಿಗಳು ಪುರಸಭೆಯ ಕಚೇರಿ ಕಿಟಕಿ ಗಾಜುಗಳನ್ನು ಒಡೆದು ರೂ. 2ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತನ್ನುನಾಶಪಡಿಸಿದ್ದಾರೆ ಎಂದು ದೂರಿದ್ದಾರೆ.
ಮತ್ತೊಂದು ದೂರಿನಲ್ಲಿ ನಗರಠಾಣೆಯ ಪಿ.ಎಸ್.ಐ ಅಣ್ಣಪ್ಪ ಮೊಗೇರ್, ಗುರುವಾರ ಬೆಳಗ್ಗೆ 6.15ಕ್ಕೆ ಪುರಸಭೆ ಎದುರು ಅಂಗಡಿ ಕಬ್ಜಾ ಪಡೆಯುತ್ತಿರುವ ಸಂದಂರ್ಭದಲ್ಲಿ ರಾಮಚಂದ್ರ ನಾಯ್ಕ ಎಂಬಾತ ಪುರಸಭೆ ಕಚೇರಿ ಬಳಿ ಬಂದು ಆವೇಶದಿಂದ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಈ ಸಂದರ್ಭದಲ್ಲಿ ರಕ್ಷಿಸಲು ಬಂದ ಈಶ್ವರ್ ನಾಯ್ಕ ಎಂಬುವವರಿಗೆ ಗಾಯಗಳಾಗಿವೆ ಎಂದು ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ರಾಮಚಂದ್ರ ನಾಯ್ಕ ರ ಅತ್ಮಹತ್ಯೆಗೆ ಪುರಸಭೆಯ ಅಧಿಕಾರಿಗಳೇ ಕಾರಣ ಎಂದು ಆರೋಪಿಸಿ ಪ್ರಕರಣವೊಂದು ದಾಖಲಾಗಿದ್ದು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಆಬಿಯಂತರ ಆರ್.ಪಿ.ನಾಯ್ಕ ಹಾಗೂ ಭಟ್ಕಳ ಪುರಸಭೆ ಅಧಿಕಾರಿಗಳ ವಿರುದ್ಧ ವೆಂಕಟೇಶ್ ನಾಯ್ಕಎಂಬುವವರು ದೂರು ದಾಖಲಿಸಿದ್ದಾರೆ.







