ಭಾರೀ ಮಳೆ: ಮಂಗಳೂರಿನ ಹಲವೆಡೆ ಕೃತಕ ನೆರೆ
ಮಂಗಳೂರು, ಸೆ.16: ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಶನಿವಾರ ಮಂಗಳೂರು ನಗರದ ಹಲವೆಡೆ ಕೃತಕ ನೆರೆ ವಾತಾವರಣ ಸೃಷ್ಟಿಯಾಗಿದೆ. ಕೆಲವೆಡೆ ತಡೆಗೋಡೆಗಳು ಕುಸಿದಿರುವುದು ವರದಿಯಾಗಿವೆ.
ನಗರದ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಬಳಿಯ ಅರ್ಪಾಟ್ ಮೆಂಟ್ ಒಂದರ ತಡೆಗೋಡೆ ಕುಸಿದು ಇನ್ನೊಂದು ಅರ್ಪಾಟಮೆಂಟನಲ್ಲಿ ಪಾರ್ಕ್ ಮಾಡಿದ್ದ ಕಾರಗಳ ಮೇಲೆ ಬಿದ್ದು ಹಾನಿಗೊಂಡಿರುವುದು ವರದಿಯಾಗಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಈ ಘಟನೆ ನಡೆದಿದೆ. ಈ ವೇಳೆ ಪಾರ್ಕ್ ಮಾಡಿದ್ದ ಎರಡು ಕಾರುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು ಮಹಾನಗರ ಪಾಲಿಕೆಯ ಕೊಡಿಯಾಲ್ ಬೈಲ್, ಬಿಜೈ, ಅತ್ತಾವರ ಮೊದಲಾದ ಕಡೆಗಳಲ್ಲಿ ಕೃತಕ ನೆರೆ ಉಂಟಾಗಿದೆ. ನೀರು ನುಗ್ಗಿರುವ ಕುರಿತಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳುವಂತೆ ಮೇಯರ್ ಕವಿತಾ ಸೂಚಿಸಿದ್ದಾರೆ.
ನಗರ ಪಾಲಿಕೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಜಲಸಿರಿ ಯೋಜನೆಯ ಕುರಿತಾದ ಸಭೆಯಲ್ಲಿ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಮೇಯರ್, ಸಂಬಂಧಪಟ್ಟ ಅಧಿಕಾರಿಗಳು ಬ್ಯಾಂಕಿಗೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದರು.
# ಶಾಸಕರಿಂದ ಪರಿಶೀಲನೆ
ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ನುಗ್ಗಿ ಜಲಾವೃತಗೊಂಡ ಅತ್ತಾವರ ಕೆ.ಎಂ.ಸಿ. ಹಿಂಬಾಗದಲ್ಲಿರುವ ಪ್ರದೇಶಕ್ಕೆ ಶಾಸಕ ಜೆ.ಆರ್.ಲೋಬೊ ಇಂದು ಭೇಟಿ ನೀಡಿದರು.
ನೀರು ನುಗ್ಗಿ ಹಾನಿಗೀಡಾದ ಪ್ರದೇಶದ ಸಮಗ್ರ ವರದಿಯನ್ನು ಮ.ನ.ಪಾ ಆಧಿಕಾರಿಗಳಿಂದ ಪಡೆದ ಶಾಸಕರು ತುರ್ತು ಕ್ರಮ ಕೈಗೊಳ್ಳುವಂತೆ ಆಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಈ ಸಂಬಂಧ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ತುರ್ತು ಸಭೆ ಕರೆಸಿ ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮ.ನ.ಪಾ ಆಯುಕ್ತರು ಹಾಗೂ ಆಧಿಕಾರಿಗಳು ಉಪಸ್ಥಿತರಿದ್ದರು.