ರೈಲು ಸೌಲಭ್ಯ ಒದಗಿಸಲು ಆಗ್ರಹಿಸಿ ಸಿಪಿಎಂ ಮನವಿ
ಕುಂದಾಪುರ, ಸೆ.16: ರೈಲು ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಸಿಪಿಎಂ ಬೈಂದೂರು ವಲಯ ಸಮಿತಿಯ ವತಿಯಿಂದ ಬೈಂದೂರು ನಾಡ ಗ್ರಾಮದ ಸೇನಾಪುರ ಸ್ಟೇಷನ್ ಮಾಸ್ಟರ್ ಬಿ.ಟಿ.ನಾಯಕ್ ಮೂಲಕ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಸೇನಾಪುರ ರೈಲು ನಿಲ್ದಾಣದಲ್ಲಿ ಅವಶ್ಯಕವಾದ ವ್ಯವಸ್ಥೆಗಳಿದ್ದರೂ ಬೆಂಗಳೂರು, ಮುಂಬೈ ಕಡೆಗಳಿಗೆ ಹಾದು ಹೋಗುವ ಬರುವ ರೈಲುಗಳ ನಿಲುಗಡೆ ಇಲ್ಲದಿರುವುದರಿಂದ ಗ್ರಾಮದ ನೂರಾರು ಜನರಿಗೆ ತೊಂದರೆಯಾಗಿದೆ. ಸರಕಾರ, ಜನಪ್ರತಿನಿಧಿಗಳ ಅಸಡ್ಡೆಗಳಿಂದಾಗಿ ಇಲ್ಲಿನ ಜನರು ರೈಲು ಸೌಲಭ್ಯ ವಂಚಿತರಾಗುವಂತಾಗಿದೆ ಎಂದು ಸಿಪಿಎಂ ಮನವಿಯಲ್ಲಿ ಆರೋಪಿಸಿದೆ.
ಸೇನಾಪುರ ಮಾರ್ಗವಾಗಿ ಸಂಚರಿಸುವ ಎಲ್ಲ ರೈಲುಗಳನ್ನು ಸೇನಾಪುರದಲ್ಲಿ ನಿಲುಗಡೆ ಮಾಡಬೇಕು. ಕಾರವಾರ ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿಮೆಗೊಳಿಸಬೇಕು. ಹಾಸನ ಶ್ರವಣಬೆಳಗೊಳ ಮಾರ್ಗವಾಗಿ ಮತ್ತೊಂದು ರಾತ್ರಿ ರೈಲು ಆರಂಭಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಿಲ್ಲೆ ಯಾದ್ಯಂತ ಎಲ್ಲ ಸ್ಟೇಷನ್ಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಸಿಪಿಎಂ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಮುಖಂಡ ರಾದ ರಾಜೀವ ಪಡುಕೋಣೆ, ನಾಗರತ್ನ ನಾಡ, ಪರಮೇಶ್ವರ ಪಡುಕೋಣೆ, ಶೀಲಾವತಿ ಪಡುಕೋಣೆ, ವೆಂಕಟೇಶ್ ಕೋಣಿ, ಗಣೇಶ್ ತೊಂಡೆಮಕ್ಕಿ ಮೊದ ಲಾದವರು ಉಪಸ್ಥಿತರಿದ್ದರು.