ಕಲೆ, ಸಾಹಿತ್ಯ ಉತ್ಕೃಷ್ಟತೆಗೆ ಇರುವ ಸಾಧನ: ಜಯಂತ್ ಕಾಯ್ಕಿಣಿ
ಉಡುಪಿ, ಸೆ.16: ಕಲೆ ಮತ್ತು ಸಾಹಿತ್ಯ ಉತ್ಕೃಷ್ಟತೆಗೆ ಇರುವ ಸಾಧನ. ಕಲೆ ಹಾಗೂ ಸಾಹಿತ್ಯ ಆಧುನಿಕ ಆಧ್ಯಾತ್ಮ. ನಮ್ಮೆಲ್ಲಾ ಐಹಿಕ ರಗಳೆಗಳಿಂದ ಹೊರಬಂದು ಎಲ್ಲರನ್ನು ಒಂದುಗೂಡಿಸುವುದು ಕಲೆ ಮತ್ತು ಸಾಹಿತ್ಯದಿಂದ ಮಾತ್ರ ಸಾಧ್ಯ. ಆದುದರಿಂದ ಕಲೆಗಾಗಿ ಕಲೆ ಆಗಬಾರದು ಎಂದು ಖ್ಯಾತ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ.
ಉಡುಪಿಯ ಆರ್ಟಿಸ್ಟ್ ಫೋರಂ ವತಿಯಿಂದ ಗ್ಯಾಲರಿ ದೃಷ್ಟಿಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಉತ್ತರ ಕನ್ನಡದ ನಾಗರಾಜ್ ಹನೇಹಳ್ಳಿ ಅವರ ಏಕವ್ಯಕ್ತಿ ವರ್ಣಚಿತ್ರಕಲಾ ಪ್ರದರ್ಶವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಆರ್ಟಿಸ್ಟ್ ಫೋರಂನ ಅಧ್ಯಕ್ಷ, ಕಲಾವಿದ ರಮೇಶ್ ರಾವ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾಗತೀಕರಣ ಕಲಾಕ್ಷೇತ್ರದ ಮೇಲೆ ಕಲಾವಿದರು ತಾಂತ್ರಿಕತೆಯನ್ನು ಬಳಸಿಕೊಂಡರೂ, ಮೂಲಚಿತ್ರವನ್ನು ನೋಡಲು ಕಲಾ ಪ್ರದರ್ಶನಗಳಿಂದ ಮಾತ್ರ ಸಾಧ್ಯ ಎಂದರು.
ಬೆಂಗಳೂರಿನ ಬಬಿತಾ ಮಧ್ವರಾಜ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆರ್ಟಿಸ್ಟ್ ಫೋರಂನ ಪ್ರಧಾನ ಕಾರ್ಯದರ್ಶಿ ಸಕು ಪಾಂಗಾಳ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರೆ, ಕಲಾವಿದ ನಾಗರಾಜ ಹನೆಹಳ್ಳಿ ವಂದಿಸಿದರು.
ನಾಗರಾಜ ಹನೆಹಳ್ಳಿ ಅವರು ರಚಿಸಿದ ಸುಮಾರು 40 ಕಲಾಕೃತಿಗಳು ಗ್ಯಾಲರಿ ದೃಷ್ಟಿಯಲ್ಲಿ ಇಂದಿನಿಂದ ಸೆ.19ರವರೆಗೆ ಬೆಳಗ್ಗೆ 10ರಿಂದ ಸಂಜೆ 7 ರವರೆಗೆ ವೀಕ್ಷಣೆಗೆ ತೆರೆದಿರುತ್ತದೆ ಎಂದು ಕಲಾವಿದ ನಾಗರಾಜ್ ತಿಳಿಸಿದ್ದಾರೆ.