ಎನ್ನೆಸ್ಸೆಸ್ಗೆ 13.60 ಕೋಟಿ ರೂ. ಅನುದಾನ: ಪ್ರಮೋದ್
ಉಡುಪಿ, ಸೆ.16: ರಾಜ್ಯದಲ್ಲಿ ಎನ್ನೆಸ್ಸೆಸ್ನ್ನು ಬಲಪಡಿಸುವ ಉದ್ದೇಶದಿಂದ 13.60 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಸ್ಥಳೀಯ ಎಂಜಿಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಒಂದು ಹಾಗೂ ಎರಡರ ಆಶ್ರಯದಲ್ಲಿ ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಎನ್ನೆಸ್ಸೆಸ್ ದತ್ತು ಗ್ರಾಮ ಯೋಜನೆ ಅನ್ವಯ ಅಲೆವೂರು ಗ್ರಾಮ ದತ್ತು ಸ್ವೀಕರಣಾ ಸಮಾರಂಭನ್ನು ಉದ್ಘಾಟಿಸಿ ಮಾತನಾಡುತಿದ್ದರು.
ದೇಶದಲ್ಲಿ ಇತರೆ ರಾಜ್ಯಗಳ ಎನ್ನೆಸ್ಸೆಸ್ಗೆ ಕೇಂದ್ರದ ಅನುದಾನ ದೊರೆಯುತ್ತಿದೆ ಆದರೆ ರಾಜ್ಯದಲ್ಲಿ ಕೇಂದ್ರದ ನೆರವು ಪಡೆಯದೇ ರಾಜ್ಯಸರಕಾರವೇ ಅನುದಾನ ಬಿಡುಗಡೆ ಮಾಡುತ್ತಿದ್ದು, ಕಳೆದ ವರ್ಷ 5.65 ಕೋಟಿ ರೂ. ಇದ್ದ ಅನುದಾನ ವನ್ನು ಈ ವರ್ಷ 13.60 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಎನ್ನೆಸ್ಸೆಸ್ ಸದಸ್ಯರ ಸಂಖ್ಯೆಯನ್ನು 3 ಲಕ್ಷ ರೂ.ನಿಂದ 6 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಎನ್ನೆಸ್ಸೆಸ್ ಬಲವರ್ಧನೆಗೆ ಹಾಗೂ ವಿನೂತನ ಕಾರ್ಯಕ್ರಮಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದವರು ವಿವರಿಸಿದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ ನಾಯಕ್, ಕಾಲೇಜು ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ.ಸುರೇಶ ರಮಣ ಮಯ್ಯ ಉಪಸ್ಥಿತರಿದ್ದರು.
ಎನ್ನೆಸ್ಸೆಸ್ ಯೋಜನಾಧಿಕಾರಿ ಶಮಂತ್ ಸ್ವಾಗತಿಸಿ, ಪ್ರಿಯಾಶ್ರಿ ವಂದಿಸಿದರು. ವಿದ್ಯಾರ್ಥಿನಿಯರಾದ ಶೃತಿ ಮತ್ತು ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.