ಮನುಕುಲದ ಒಳಿತಿಗೆ ನಾರಾಯಣಗುರು ಅವಿರತ ಶ್ರಮ: ಎಂ. ರಾಮಚಂದ್ರ

ಚಾಮರಾಜನಗರ, ಸೆ.16: ಬ್ರಹ್ಮಶ್ರೀ ನಾರಾಯಣ ಗುರು ಅವರು ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಸಾರುವ ಮೂಲಕ ಇಡೀ ಮನುಕುಲದ ಒಳಿತಿಗೆ ಅಪಾರವಾಗಿ ಶ್ರಮಿಸಿದರು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ. ರಾಮಚಂದ್ರ ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಗುರು ಅವರು ಕೇರಳದಲ್ಲಿ ಜನಿಸಿ ಇಡೀ ದೇಶಾದ್ಯಂತ ಸಂಚರಿಸಿ ವೈಚಾರಿಕತೆ ಬಗ್ಗೆ ಸಾರಿದರು. ದೀನದಲಿತರು, ಶೋಷಿತರಿಗೆ ಭರವಸೆ ನೀಡಿ ಅವರ ಉನ್ನತಿಗೆ ಹಲವಾರು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದರು. ಎಲ್ಲರೂ ಒಂದೇ ಎಂಬ ಮೌಲ್ಯವನ್ನು ಪ್ರತಿಪಾದಿಸಿದರು ಎಂದರು.
ಶಿಕ್ಷಣದಿಂದ ಮಾತ್ರ ಸರ್ವಾಂಗೀಣ ಪ್ರಗತಿ ಸಾಧ್ಯವೆಂಬುದನ್ನು ಇಂದು ಕಂಡುಕೊಂಡಿದ್ದೇವೆ. ಆದರೆ ನಾರಾಯಣಗುರು ಅವರು ಹಿಂದಿನ ಶತಮಾನದಲ್ಲೇ ಶಿಕ್ಷಣದ ಮಹತ್ವವನ್ನು ಮನಗಂಡಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ಈ ಮೂಲಕ ದೇಶಕ್ಕೆ ಮಾದರಿಯಾದರು ಎಂದು ತಿಳಿಸಿದರು.
ಎಲ್ಲಾ ಬಡವರು, ನೊಂದವರ ಪರ ನಿಂತು ಅವರ ಅಭ್ಯುದಯಕ್ಕೆ ಶ್ರಮಿಸಿದ ಮಹಾಪುರುಷರು, ದಾರ್ಶನಿಕರು ಹಾಗೂ ಸಮಾಜಸುಧಾರಕರ ಜಯಂತಿ ಕಾರ್ಯಕ್ರಮವನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸಿ ಭಾಗವಹಿಸುವುದು ಸಲ್ಲದು. ಎಲ್ಲರೂ ಎಲ್ಲಾ ವರ್ಗಕ್ಕೆ ಒಳ್ಳೆಯದನ್ನೇ ಬಯಸಿದ್ದಾರೆ. ಹೀಗಾಗಿ ಎಲ್ಲಾ ಜಯಂತಿ ಕಾರ್ಯಕ್ರಮಗಳಲ್ಲಿ ಸರ್ವ ಸಮುದಾಯಗಳು ಭಾಗವಹಿಸುವಂತಾಗಬೇಕು ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು, ಜಾತೀಯತೆ ಹೋಗಬೇಕೆಂಬ ಉದ್ದೇಶದಿಂದ ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್, ಬ್ರಹ್ಮಶ್ರೀ ನಾರಾಯಣಗುರು ಅವರು ವಿಶೇಷವಾಗಿ ಕಾಳಜಿ ವಹಿಸಿದ್ದರು. ಸಮಾಜದಲ್ಲಿ ಸಮಾನತೆ ಇರಬೇಕೆಂಬ ಆಶಯ ಆದರ್ಶಗಳು ಈಡೇರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪ್ರಗತಿಪರ ಸಾಹಿತಿ ಹಾಗೂ ಪತ್ರಕರ್ತ ಡಾ.ಕೃಷ್ಣಮೂರ್ತಿ ಚಮರಂ ಮಾತನಾಡಿ, ನಾರಾಯಣಗುರು ಅವರು ಜಾತಿ ವ್ಯವಸ್ಥೆಯನ್ನು ಮೆಟ್ಟಿನಿಂತು ಮಾನವಹಕ್ಕುಗಳನ್ನು ತಂದುಕೊಡಬೇಕೆಂಬ ಸದುದ್ದೇಶದಿಂದ ಅವಿರತವಾಗಿ ಶ್ರಮಿಸಿದರು.ಸಾಮಾಜಿಕ ಅಸಮಾನತೆ ಹೋಗಲಾಡಿಸಲು ನಿರಂತರವಾಗಿ ತೊಡಗಿಸಿಕೊಂಡರು. ಸರ್ವಧರ್ಮ ಸಮನ್ವಯ ಸಭೆ ಏರ್ಪಡಿಸಿ ಎಲ್ಲಾ ಧರ್ಮಗಳ ಸಾರವು ಮಾನವಕುಲದ ಒಳಿತನ್ನೇ ಬಯಸಲಿದೆ ಎಂಬ ಉದಾತ್ತ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಮುಂದಾದರು ಎಂದರು.
ಕಾರ್ಯಕ್ರಮದಲ್ಲಿ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಎಂ.ಚಿನ್ನಸ್ವಾಮಿ ಮಾತನಾಡಿದರು. ಎಪಿಎಂಸಿ ಅಧ್ಯಕ್ಷರಾದ ಬಿ,ಕೆ. ರವಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್, ಉಪವಿಭಾಗಾಧಿಕಾರಿ ಎ.ಜೆ. ರೂಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಡಿ. ನಾಗವೇಣಿ, ಮುಖಂಡರಾದ ಜಯಣ್ಣ ಉಪಸ್ಥಿತರಿದ್ದರು.







