ಮನೆಗಳವು ಪ್ರಕರಣ: ಮೂವರು ಆರೋಪಿಗಳು ಬಂಧನ
ದಾವಣಗೆರೆ, ಸೆ.16: ಹೊನ್ನಾಳಿ ತಾಲೂಕಿನ ಹಿರೇಬಾಸೂರು ಗ್ರಾಮದಲ್ಲಿ ಕಳೆದ ಒಂದು ವರ್ಷದ ಹಿಂದೆ ನಡೆದಿದ್ದ ಮನೆಗಳವು ಪ್ರಕರಣ ಭೇದಿಸಿರುವ ಪೊಲೀಸರು ಮೂವರನ್ನು ಕಳ್ಳರನ್ನು ಬಂಧಿಸಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಡಾ.ಭೀಮಾಶಂಕರ್ ಗುಳೇದ, ಅಪ್ರೋಝ್ ಅಹ್ಮದ್, ಮುನೀರ್ ಸಾಬ್ ಮತ್ತು ನಾಗೇಂದ್ರ ಬಂಧಿತ ಆರೋಪಿಗಳು. ಹಿರೇಬಾಸೂರಿನ ಮಂಜುನಾಥ್ ಅವರ ತಾಯಿ ಸುವರ್ಣಮ್ಮ ಎನ್ನುವವರು 2016ರ ಸೆ.28ರಂದು ತಮ್ಮ ಮನೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದ ಸಂದರ್ಭ ರಾತ್ರಿ ಕಳ್ಳರು ಮನೆ ಹೆಂಚು ತೆಗೆದು ಒಳನುಗ್ಗಿ 2.5 ಲಕ್ಷ ರು. ಬೆಲೆಯ 9 ತೊಲ ಬಂಗಾರ 15 ಸಾವಿರ ರು. ದೋಚಿಕೊಂಡು ಪರಾರಿಯಾಗಿದ್ದರು ಎಂದು ಹೇಳಿದರು.
ಪ್ರಕರಣದ ಸಂಬಂಧ ರಚನೆಗೊಂಡಿದ್ದ ಪೊಲೀಸ್ ತಂಡ ಈ ಹಿಂದೆ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನವೊಂದರಲ್ಲಿ ಭಾಗಿಯಾಗಿದ್ದ ಆರೋಪಿ ಅಪ್ರೋಜ್ ಅಹಮದ್ನ ಬೆರಳಚ್ಚು ಹೊಂದಾಣಿಕೆಯಾದ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಿದಾಗ ಸುವರ್ಣಮ್ಮ ಮನೆ ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಬಾಯಿಬಿಟ್ಟಿದ್ದಾರೆ. ಇದೀಗ ಬಂಧಿತರಿಂದ 8 ಲಕ್ಷ ರೂ ಮೌಲ್ಯದ 300 ಗ್ರಾಂ ಬಂಗಾರದ ಆಭರಣ, 10 ಸಾವಿರ ರೂ. ಬೆಲೆಯ 250 ಗ್ರಾಂ ಬೆಳ್ಳಿಯ ಆಭರಣ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.







