ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಪರಿಹಾರವಲ್ಲ: ಡಾ.ಪ್ರಮೋದ್
ಶಿವಮೊಗ್ಗ, ಸೆ.17: ಮಾನಸಿಕ ದೌರ್ಬಲ್ಯದ ಒಂದು ಕ್ಷಣ ಮನುಷ್ಯನ ಜೀವನವನ್ನೇ ಬಲಿತೆಗೆದುಕೊಳ್ಳುತ್ತದೆ. ಯಾವುದೇ ವ್ಯಕ್ತಿಯು ಮಾನಸಿಕವಾಗಿ ನೊಂದಿದ್ದರೆ, ಅವನಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಸಮುದಾಯ, ಸ್ನೇಹಿತರು, ಕುಟುಂಬದವರು, ಬಂಧುಮಿತ್ರರು, ಮಾಧ್ಯಮದವರು, ಸಂಘ-ಸಂಸ್ಥೆಗಳು ಮಾಡುವ ಮೂಲಕ ವ್ಯಕ್ತಿಯ ನವಜೀವನದ ಆರಂಭಕ್ಕೆ ಮುನ್ನಡಿ ಬರೆಯುವಂತೆ ಮಾನಸಿಕ ತಜ್ಞ ಡಾ.ಪ್ರಮೋದ್ ಅವರು ನುಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಅಂಗವಾಗಿ ನಗರದ ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಜಾಥಾ ಮತ್ತು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಯಾವುದೇ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೂ, ಅದಕ್ಕೆ ಕಾರಣಗಳು ಏನೇ ಇದ್ದರೂ ಅಂತಿಮವಾಗಿ ನೊಂದುಕೊಳ್ಳುವವರು ಅವರ ಸಂಗಾತಿ, ಪೋಷಕರು, ಮಕ್ಕಳು, ಸ್ನೇಹಿತರು ಅಥವಾ ಸಹೋದ್ಯೋಗಿಗಳೇ ಆಗಿರುತ್ತಾರೆ ಎಂದ ಅವರು, ಅಮೂಲ್ಯವಾಗಿರುವ ಜೀವನವನ್ನು ಯಾವುದೋ ಕ್ಷುಲ್ಲಕ ಕಾರಣಕ್ಕೆ ಬಲಿಕೊಡುವುದು ತರವಲ್ಲ, ಆತ್ಮಹತ್ಯೆ ಯೋಚನೆ ಬಂದಕೂಡಲೇ ಒಂದು ನಿಮಿಷ ಜೀವನದ ಬಗ್ಗೆ ಯೋಚಿಸಿದರೆ ಅದರಿಂದ ಹೊರಬರಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಏರ್ಪಡಿಸಿದ್ದ ಜಾಗೃತಿಜಾಥಾಕ್ಕೆ ಚಾಲನೆ ನೀಡಿ ನಂತರ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಆರ್.ಬಿ.ಧರ್ಮಗೌಡರ ಅವರು ಮಾತನಾಡಿ, ವ್ಯಕ್ತಿ ಅನೇಕ ಕಾರಣಗಳಿಂದಾಗಿ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಸಮಸ್ಯೆಗಳ ಪರಿಹಾರಕ್ಕೆ ಆತ್ಮಹತ್ಯೆಯೊಂದೆ ಪರಿಹಾರವಲ್ಲ. ಸಮಸ್ಯೆಗಳ ಪರಿಹಾರಕ್ಕೆ ಪರ್ಯಾಯವಾಗಿರುವ ಕ್ರಮಗಳ ಕುರಿತು ಸಮಾಧಾನಚಿತ್ತರಾಗಿ ಆಲೋಚಿಸಿ ಮುಂದುವರೆಯುವುದು ಕ್ಷೇಮಕರ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ಸುರಗೀಹಳ್ಳಿ, ಡಾ.ಕಾಂತರಾಜ್, ಡಾ.ಉಮಾ ಮುಂತಾದವರು ಉಪಸ್ಥಿತರಿದ್ದರು.







