ಬಿಜೆಪಿಗೆ ಆರೋಪಿಸಲು ವಿಷಯಗಳೇ ಇಲ್ಲ: ಸಚಿವ ಖಾದರ್
ಮಂಗಳೂರು, ಸೆ.18: ಪ್ರತಿಪಕ್ಷ ಬಿಜೆಪಿಗೆ ಸರಕಾರದ ವಿರುದ್ಧ ಆರೋಪಿಸಲು ವಿಷಯಗಳೇ ಇಲ್ಲ. ಅದೀಗ ಸಚಿವ ಕೆ.ಜೆ.ಜಾರ್ಜ್ರ ರಾಜೀನಾಮೆ ಕೇಳಿ ನಗೆಪಾಟಲಿಗೀಡಾಗುತ್ತಿವೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ನಗರದ ಸರ್ಕಿಟ್ ಹೌಸ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರದ ಮೇಲೆ ವೃಥಾ ಆರೋಪ ಮಾಡುತ್ತಿವೆ. ಕಳೆದ ನಾಲ್ಕುವರೆ ವರ್ಷದಲ್ಲಿ ಸರಕಾರ ಯಾವುದೇ ಭ್ರಷ್ಟಾಚಾರದಲ್ಲಿ ಸಿಲುಕದೆ, ಹಗರಣದಲ್ಲಿ ಭಾಗಿಯಾಗದೆ ಉತ್ತಮ ಆಡಳಿತ ನೀಡುತ್ತಿವೆ. ಇದರಿಂದ ಹತಾಶರಾಗಿರುವ ಬಿಜೆಪಿಗರು ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸಚಿವ ಕೆ.ಜೆ.ಜಾರ್ಜ್ರನ್ನು ಆರೋಪಿ ಎಂದು ಗುರುತಿಸಿಲ್ಲ. ಸಿಬಿಐ ತನಿಖೆ ನಡೆಸಿ 3 ತಿಂಗಳೊಳಗೆ ವರದಿ ಸಲ್ಲಿಸಲು ಆದೇಶಿಸಿದೆ. ಬಿಜೆಪಿಗರಿಗೆ ಸಿಬಿಐ ಮೇಲೆ ವಿಶ್ವಾಸವಿರುವಾಗ 3 ತಿಂಗಳು ಕಾಯಲಿ. ಆ ಬಳಿಕ ಮುಂದೇನು ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ. ಅದು ಬಿಟ್ಟು ಸಚಿವ ಕೆ.ಜೆ.ಜಾರ್ಜ್ರ ರಾಜೀನಾಮೆ ಕೇಳುವುದು ಸರಿಯಲ್ಲ. ಕೇಳುವ ನೈತಿಕತೆಯೂ ಬಿಜೆಪಿಗಿಲ್ಲ ಎಂದು ಸಚಿವ ಖಾದರ್ ನುಡಿದರು.
ಗಲಭೆಗೆ ಸಂಚು: ಚಾಮರಾಜ ನಗರದದಲ್ಲಿ ದೇವಸ್ಥಾನವೊಂದರ ಭಗವಾಧ್ವಜಕ್ಕೆ ಬೆಂಕಿ ಹಚ್ಚಿ ಮತೀಯ ಗಲಭೆ ಸೃಷ್ಟಿಸಲು ನಡೆಸಿದ ಸಂಚಿನಲ್ಲಿ ಬಿಜೆಪಿಗರು ಭಾಗಿಯಾಗಿದ್ದಾರೆ. ಚುನಾವಣೆ ಬರುವಾಗ ಗಲಭೆಗೆ ಸಂಚು ಹೂಡವುದು ಬಿಜೆಪಿಗರ ಜಾಯಾಮಾನ. ಬಿಜೆಪಿಗರಿಗೆ ಚುನಾವಣೆಗೆ ಹೋಗಲು ವಿಷಯವೇ ಇಲ್ಲ. ಹಾಗಾಗಿ ಇಂತಹ ಸಂಚು ನಡೆಸುತ್ತಿದೆ. ಆದರೆ, ರಾಜ್ಯದ ಜನತೆ ಇದಕ್ಕೆ ಮನ್ನಣೆ ನೀಡುತ್ತಿಲ್ಲ ಎಂದರು.
ಸಾಕ್ಷಿ ಸಮೇತ ಬಹಿರಂಗಪಡಿಸಲಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರು ಮುಖ್ಯಮಂತ್ರಿಯ ವಿರುದ್ಧ ಆರೋಪ ಹೊರಿಸಲು ದಿನಾಂಕ ನಿಗದಿಪಡಿಸಿದ್ದಾರೆ. ಧೈರ್ಯವಿದ್ದರೆ ಅವರು ಸಾಕ್ಷಿ ಸಮೇತ ಆರೋಪ ಮಾಡಲಿ. ಅದನ್ನು ಎದುರಿಸುವ ಶಕ್ತಿ ಕಾಂಗ್ರೆಸ್ಗೆ ಇದೆ. ಸರಕಾರ ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.