ಅಫಘಾತದಲ್ಲಿ ಗಾಯಗೊಂಡಿದ್ದ ಸಂಪ್ಯ ಠಾಣೆಯ ಕಾನ್ಸ್ಟೇಬಲ್ ಮೃತ್ಯು
ಪುತ್ತೂರು, ಸೆ. 18: ಪುತ್ತೂರು ತಾಲ್ಲೂಕಿನ ಬಡಗನ್ನೂರು ಗ್ರಾಮದ ಮುಡ್ಪಿನಡ್ಕದಲ್ಲಿ ಪುತ್ತೂರು ಸುಳ್ಯಪದವು ರಸ್ತೆಯಲ್ಲಿ ಎರಡು ವಾರದ ಹಿಂದೆ ಬೈಕ್ ಮತ್ತು ಆಕ್ಟಿವಾ ಹೋಂಡ ನಡುವೆ ಸಂಭವಿಸಿದ ಅಫಘಾತದಲ್ಲಿ ಗಾಯಗೊಂಡಿದ್ದ ಸಂಪ್ಯ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಹನುಮಂತ ಪುಜಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದರೊಂದಿಗೆ ಈ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.
ಕಳೆದ ಸೆ. 4ರಂದು ಬಡಗನ್ನೂರು ಗ್ರಾಮದ ಮುಡ್ಪಿನಡ್ಕ ಎಂಬಲ್ಲಿ ಬೈಕ್ ಮತ್ತು ಆಕ್ಟೀವಾ ಹೊಂಡಾ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರರಾಗಿದ್ದ ಸಂಪ್ಯ ಠಾಣೆಯ ಕಾನ್ಸ್ಟೇಬಲ್ ಹನುಮಂತ ಪುಜಾರ್ ಮತ್ತು ಆಕ್ಟೀವಾ ಹೊಂಡದಲ್ಲಿ ಸಹ ಸವಾರರಾಗಿ ಪ್ರಯಾಣಿಸುತ್ತಿದ್ದ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಸಮೀಪದ ನಿವಾಸಿ ಸಂತೋಷ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರಿಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂಪ್ಯ ಠಾಣೆಯ ಕಾನ್ಸ್ಟೇಬಲ್ ಹನುಮಂತ ಮತ್ತು ಹೋಮ್ಗಾರ್ಡ್ ಸುಧಾಕರ್ ಅವರು ಕರ್ತವ್ಯದ ನೆಲೆಯಲ್ಲಿ ಬೀಟ್ಗೆ ತೆರಳಿದವರು ಮುಡ್ಪಿನಡ್ಕ ಕಡೆಯಿಂದ ಸುಳ್ಯಪದವು ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಎದುರುನಿಂದ ಬರುತ್ತಿದ್ದ ಲಾರಿಯೊಂದನ್ನು ಹಿಂದಿಕ್ಕಿ ಹರೀಶ್ ಎಂಬವರು ಚಲಾಯಿಸಿಕೊಂಡು ಬಂದ ಆಕ್ಟೀವಾ ಹೋಂಡಾ ಬೈಕ್ಗೆ ಢಿಕ್ಕಿ ಹೊಡೆದಿರುವುದಾಗಿ ಪ್ರಕರಣ ದಾಖಲಾಗಿತ್ತು.
ಈ ಘಟನೆಯಲ್ಲಿ ಆಕ್ಟಿವಾ ಹೋಂಡ ಚಾಲಕ ಹರೀಶ್ ಮತ್ತು ಕಾನ್ಸ್ಟೇಬಲ್ ಹನುಮತ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿನಲ್ಲಿ ಹಿಂಬದಿ ಸವಾರ ಹೋಂಗಾರ್ಡ್ ಸುಧಾಕರ್ ಅವರು ಸಣ್ಣಪಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು. ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಇಬ್ಬರ ಪೈಕಿ ಆಕ್ಟಿವಾ ಹೋಂಡಾ ಸಹ ಸವಾರ ಸಂತೋಷ್ ಅವರು ಸೆ.7ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಭಾನುವಾರ ರಾತ್ರಿ ಹನುಮಂತ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಇದರಿಂದಾಗಿ ಈ ಘಟನೆಯಲ್ಲಿ ಎರಡು ಜೀವಗಳು ಬಲಿಯಾಗಿವೆ.
ಬಳ್ಳಾರಿಯವರಾಗಿರುವ ಹನಮಂತ ಅವರು 2008ರಲ್ಲಿ ಡಿಎಆರ್ಗೆ ಪೊಲೀಸ್ ಆಗಿ ಸೇರ್ಪಡೆಗೊಂಡಿದ್ದರು. ಕಳೆದ 5 ವರ್ಷಗಳಿಂದ ಪುತ್ತೂರು ಗ್ರಾಮಾಂತರ ಸಂಪ್ಯ ಠಾಣೆಯಲ್ಲಿ ಕಾಣ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಬಡಗನ್ನೂರು ಗ್ರಾಮದ ಬೀಟ್ ಪೊಲೀಸ್ ಜವಾಬ್ದಾರಿ ನಿರ್ವಹಿಸುತಿದ್ದರು.