ಕೆರೆಗೆ ಬಿದ್ದು ಕೂಲಿ ಕಾರ್ಮಿಕನ ಮೃತ್ಯು
ಪುತ್ತೂರು, ಸೆ. 19: ಕೃಷಿ ಕೂಲಿ ಕಾರ್ಮಿಕರೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬೆಟ್ಟಂಪಾಡಿ ಗ್ರಾಮದ ಇರ್ದೆ ಕಕ್ಕೂರು ಎಂಬಲ್ಲಿ ಸೋಮವಾರ ನಡೆದಿದೆ. ನಿಡ್ಪಳ್ಳಿ ಗ್ರಾಮದ ಕೋಡಿ ನಿವಾಸಿ ಸುಬ್ಬ ನಾಯ್ಕ ಎಂಬವರ ಪುತ್ರ ಸುಂದರ ನಾಯ್ಕ (45) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಸುಂದರ ನಾಯ್ಕ ತನ್ನ ಮನೆಯಲ್ಲಿ ಸಹೋದರರ ಜೊತೆ ಸೊಪ್ಪು ಕಡಿಯುವ ಕೆಲಸ ಮಾಡಿ ಬೆಟ್ಟಂಪಾಡಿಯ ಕಕ್ಕೂರಿನಲ್ಲಿರುವ ತರವಾಡು ಮನೆಯಾದ ಆನಂದ ನಾಯ್ಕರ ತೋಟದಲ್ಲಿ ಅಡಿಕೆ ಗಿಡ ನೆಡಲು ಹೋಗಿದ್ದರು. ಅಡಿಕೆ ಗಿಡ ನಡುತ್ತಿರುವ ವೇಳೆ ಆನಂದ ನಾಯ್ಕರು ಉಳಿದ ಅಡಿಕೆ ಗಿಡ ತರಲೆಂದು ತೆರಳಿದವರು ತಿರುಗಿ ಬಾರದ ಹಿನ್ನೆಲೆಯಲ್ಲಿ ಅವರನ್ನು ಹುಡುಕಾಡಿದರು. ತೋಟದ ಕೆರೆಯ ಪಕ್ಕದ ಶೆಡ್ಡಿನಲ್ಲಿ ಸುಂದರ ನಾಯ್ಕರ ಚಪ್ಪಲಿ ಇರುವುದನ್ನು ಕಂಡು ಸಂಶಯಗೊಂಡ ಆನಂದ ನಾಯ್ಕ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಕೆರೆಯಲ್ಲಿ ಹುಡುಕಾಡಿದಾಗ ಸುಂದರ ನಾಯ್ಕ ಮೃತ ದೇಹ ಪತ್ತೆಯಾಗಿತ್ತು.
ಘಟನೆಗೆ ಸಂಬಂಧಿಸಿ ಸುಂದರ ನಾಯ್ಕ ಪತ್ನಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.