ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಗೆ ಗೃಹ ಸಚಿವರಿಂದ ಚಾಲನೆ
ಮಂಗಳೂರು, ಸೆ.20: ನಗರದ ನಾಗುರಿ ಬಳಿ ಇಂದು ನೂತನ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು.
ನೂತನ ಗೃಹ ಸಚಿವರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಅವರು, ಶಿಲಾಫಲಕ ಅನಾವರಣಗೊಳಿಸುವ ಮೂಲಕ ನೂತನ ಠಾಣೆಯನ್ನು ಉದ್ಘಾಟಿಸಿದರು.
ವಿದೇಶದಲ್ಲಿ ನೆಲೆಸಿರುವ ಐವನ್ ರಾಡ್ರಿಗಸ್ ಎಂಬವರ ಮನೆಯನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆಯಲಾಗಿದೆ. ಠಾಣೆಯಲ್ಲಿ ಇಬ್ಬರು ಪಿಎಸ್ಐಗಳು, 8 ಎಎಸ್ಐಗಳು, 22 ಹೆಡ್ ಕಾನ್ಸ್ಟೆಬಲ್ಗಳು, 42 ಪಿಸಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಪೂರ್ವ ಠಾಣಾ ಎಸ್ಐ ಸುರೇಶ್ ಕುಮಾರ್ ಠಾಣೆಯ ನೇತೃತ್ವ ವಹಿಸಲಿದ್ದಾರೆ. ಕಂಕನಾಡಿ ನಗರ, ಮಂಗಳೂರು ಗ್ರಾಮಾಂತರ, ಉಳ್ಳಾಲ ಹಾಗೂ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಅಪಘಾತ ಪ್ರಕರಣಗಳು ಈ ಠಾಣೆಗೆ ಒಳಪಡಲಿವೆ.
ನೂತನ ಪೊಲೀಸ್ ಠಾಣೆಯ ಎದುರು ಗೌರವ ವಂದನೆ ಸ್ವೀಕರಿಸಿದ ಸಚಿವ ರಾಮಲಿಂಗಾ ರೆಡ್ಡಿ ಬಳಿಕ ಠಾಣೆಯನ್ನು ಉದ್ಘಾಟಿಸಿದರು.
ಈ ಸಂದರ್ಭ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಮೊಯ್ದಿನ್ ಬಾವ, ಜೆ.ಆರ್. ಲೋಬೋ, ಮೇಯರ್ ಕವಿತಾ ಸನಿಲ್, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಡಿಜಿಪಿ ಅಲೋಕ್ ಮೋಹನ್, ಪಶ್ಚಿಮ ವಲಯ ಐಜಿಪಿ ನಿಂಬಾಳ್ಕರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಹನುಮಂತರಾಯ ಮೊದಲಾದವರು ಉಪಸ್ಥಿತರಿದ್ದರು.
ಅಲ್ಲಿಂದ ಸಮೀಪದ ನಾಗುರಿಯ ಗರೋಡಿ ದೇವಾಲಯಕ್ಕೆ ಭೇಟಿ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಅವರು ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ ಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲು ತೆರಳಿದರು.