2017-18ನೆ ಸಾಲಿನ ಅಂತರ್ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆ : ಆಳ್ವಾಸ್ ಕಾಲೇಜು ಪ್ರಥಮ ಸಮಗ್ರ ಪ್ರಶಸ್ತಿ
ಮಂಗಳೂರು, ಸೆ.20: ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯವು ಆಗಸ್ಟ್ನಲ್ಲಿ ನಡೆಸಿದ 2017-18ನೆ ಸಾಲಿನ ಅಂತರ್ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಉಜಿರೆ ಎಸ್ಡಿಎಂ ಕಾಲೇಜು ದ್ವಿತೀಯ ಮತ್ತು ಪುತ್ತೂರು ವಿವೇಕಾನಂದ ಕಾಲೇಜು ತೃತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿವೆ ಎಂದು ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕ ಡಾ.ಬಿ. ಉದಯ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಧೀನದ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಾಹಿತ್ಯ, ಲಲಿತಕಲೆ, ಸಂಗೀತ, ರಂಗಭೂಮಿ ಮತ್ತು ನೃತ್ಯ ಹೀಗೆ ಐದು ಪ್ರಕಾರಗಳ ಸ್ಪರ್ಧೆಯು ಮಂಗಳೂರಿನ ರೊಸಾರಿಯೊ, ಉಜಿರೆಯ ಎಸ್ಡಿಎಂ, ಪುತ್ತೂರಿನ ಸಂತ ಫಿಲೋಮಿನಾ, ಕಾರ್ಕಳದ ಭುವನೇಂದ್ರ, ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದಿತ್ತು. ಅದರಲ್ಲಿ ಸಮಗ್ರ ಪ್ರಶಸ್ತಿ ವಿಜೇತ ತಂಡ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಪ್ರಥಮ 50 ಸಾವಿರ ರೂ. ನಗದು, ದ್ವಿತೀಯ 40 ಸಾವಿರ ರೂ. ಮತ್ತು ತೃತೀಯ 30 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಎಪ್ರಿಲ್ನಲ್ಲಿ ವಿತರಿಸಲಾಗುತ್ತದೆ. ಕ್ರೀಡಾ ಕ್ಷೇತ್ರದ ಸಾಧಕರಿಗೂ ಈ ಸಂದರ್ಭ ಅರ್ಜುನ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಅಕ್ಟೋಬರ್-ನವೆಂಬರ್ನಲ್ಲಿ ನಡೆಯುವ ದಕ್ಷಿಣ ವಲಯ ಯುವಜನೋತ್ಸವ ಮತ್ತು ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ. ಅಲ್ಲದೆ ಮಂಗಳೂರು ವಿವಿ ಕ್ಯಾಂಪಸ್ನಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ನಡೆಯುವ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಮಗ್ರ ಪ್ರಶಸ್ತಿ ವಿಜೇತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ ಎಂದು ಡಾ. ಬಿ. ಉದಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ನಾಯ್ಕಿ ಉಪಸ್ಥಿತರಿದ್ದರು.