ರಾಜ್ಯ ಗೃಹ ಮಂಡಳಿಯ ಫ್ಲಾಟ್ ಹಂಚಿಕೆಗೆ ‘ಪ್ರಾಪರ್ಟಿ ಎಕ್ಸ್ಪೋ’: ಮಾಲಿಕಯ್ಯ ಗುತ್ತೇದಾರ್
ಬೆಂಗಳೂರು, ಸೆ.21: ಬೆಂಗಳೂರಿನಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಬಹುಮಹಡಿ ಸಮುಚ್ಚಯಗಳ ಫ್ಲಾಟ್ಗಳನ್ನು ಸ್ಥಳದಲ್ಲಿಯೆ ಹಂಚಿಕೆ ಮಾಡಲು ಸೆ.22 ರಿಂದ 24ರ ವರೆಗೆ ಮೂರು ದಿನಗಳ ‘ಪ್ರಾಪರ್ಟಿ ಎಕ್ಸ್ಪೋ’ ಮೇಳವನ್ನು ಕೆಂಗೇರಿ ಉಪನಗರದಲ್ಲಿನ ಕೆಎಚ್ಬಿ-ಪ್ಲಾಟಿನಂ ಕ್ಲಬ್ ಹಾಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗೃಹ ಮಂಡಳಿಯ ಅಧ್ಯಕ್ಷ ಮಾಲಿಕಯ್ಯ ಗುತ್ತೇದಾರ್ ತಿಳಿಸಿದರು.
ಗುರುವಾರ ನಗರದ ಕಾವೇರಿ ಭವನದಲ್ಲಿರುವ ರಾಜ್ಯ ಗೃಹ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹ ಮಂಡಳಿಯು ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ, ಬಂಡೇಮಠದಲ್ಲಿ ಹಾಗೂ ಸೂರ್ಯನಗರದಲ್ಲಿ ಸುಸಜ್ಜಿತವಾದ ಹಾಗೂ ಮೂಲ ಸೌಕರ್ಯಗಳನ್ನೊಳಗೊಂಡ ವಿವಿಧ ವರ್ಗದ ಫ್ಲಾಟ್ಗಳನ್ನು ನಿರ್ಮಿಸಿದ್ದು, ಈಗಾಗಲೇ ಕೆಲವು ಫ್ಲಾಟ್ಗಳನ್ನು ಹಂಚಿಕೆ ಮಾಡಲಾಗಿದೆ ಎಂದರು.
ಕೆಂಗೇರಿ ಉಪನಗರದಲ್ಲಿನ ಪ್ಲಾಟಿನಂ ಬಹುಮಹಡಿ ಕಟ್ಟಡದಲ್ಲಿ ಒಟ್ಟು 808 ವಿವಿಧ ವರ್ಗದ ಫ್ಲಾಟ್ಗಳನ್ನು ನಿರ್ಮಿಸಿದ್ದು, 397 ಫ್ಲಾಟ್ಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಪ್ರಸ್ತುತ 411 ಫ್ಲಾಟ್ಗಳು ಹಂಚಿಕೆಗೆ ಲಭ್ಯವಿದೆ ಎಂದು ಹೇಳಿದರು.
ಕೆಂಗೇರಿ ಬಂಡೇಮಠ ಬಡಾವಣೆಯಲ್ಲಿನ ಡೈಮಂಡ್ ಬಹುಮಹಡಿ ಕಟ್ಟಡದಲ್ಲಿ ಒಟ್ಟು 306 ವಿವಿಧ ವರ್ಗದ ಫ್ಲಾಟ್ಗಳನ್ನು ನಿರ್ಮಿಸಿದ್ದು, 110 ಫ್ಲಾಟ್ಗಳನ್ನು ಈಗಾಗಲೆ ಹಂಚಿಕೆ ಮಾಡಿದ್ದು, ಪ್ರಸ್ತುತ 206 ಫ್ಲಾಟ್ಗಳು ಹಂಚಿಕೆಗೆ ಲಭ್ಯವಿದೆ ಎಂದು ಅವರು, ಸೂರ್ಯನಗರ 1ನೆ ಹಂತದ ಬಡಾವಣೆಯಲ್ಲಿನ ಸೂರ್ಯ ಎಲಿಗೆನ್ಸ್ ಬಹುಮಹಡಿ ಕಟ್ಟಡದಲ್ಲಿ ಒಟ್ಟು 384 ವಿವಿಧ ವರ್ಗದ ಫ್ಲಾಟ್ಗಳನ್ನು ನಿರ್ಮಿಸಿದ್ದು, 58 ಫ್ಲಾಟ್ಗಳನ್ನು ಈಗಾಗಲೇ ಹಂಚಿಕೆ ಮಾಡಿದ್ದು, ಪ್ರಸ್ತುತ 326 ಫ್ಲಾಟ್ಗಳು ಹಂಚಿಕೆಗೆ ಲಭ್ಯವಿರುತ್ತವೆ ಎಂದರು.
ಉತ್ತಮ ಗುಣಮಟ್ಟದ ಫ್ಲಾಟ್ಗಳು ನೀರು, ವಿದ್ಯುತ್, ಒಳಚರಂಡಿ ಹಾಗೂ ಸಕಲ ಸೌಲಭ್ಯಗಳನ್ನು ಒಳಗೊಂಡಿವೆ. ಫ್ಲಾಟ್ಗಳು ಕೂಡಲೆ ವಾಸಕ್ಕೆ ಸಿದ್ಧವಿರುತ್ತವೆ. ಪ್ಲಾಟಿನಂ ಮತ್ತು ಸೂರ್ಯ ಎಲಿಗೆನ್ಸ್ ಬಹುಮಹಡಿ ಕಟ್ಟಡಗಳಲ್ಲಿ ಈಜುಕೊಳ ಹಾಗೂ ಕ್ಲಬ್ಹೌಸ್ ಸೇರಿದಂತೆ ಹೆಚ್ಚಿನ ಸೌಲಭ್ಯಗಳು ಒಳಗೊಂಡಿವೆ ಎಂದು ತಿಳಿಸಿದರು.
ಗೃಹ ಮಂಡಳಿಯ ಆಯುಕ್ತ ಎ.ಬಿ.ಇಬ್ರಾಹೀಂಮಾತನಾಡಿ, ಪಾಪರ್ಟಿ ಎಕ್ಸ್ಪೋ ದಸರಾ ವಿಶೇಷ ಕೊಡುಗೆಯೆಂದು ಶೇ.2ರಷ್ಟು ವಿಶೇಷ ರಿಯಾಯಿತಿ ನೀಡಿ ಸ್ಥಳದಲ್ಲಿಯೆ ಸಾರ್ವಜನಿಕರು ಇಚ್ಛಿಸುವ ಫ್ಲಾಟ್ಗಳನ್ನು ಕೈಗೆಟಕುವ ದರದಲ್ಲಿ ಹಂಚಿಕೆ ಮಾಡಿ ಹಂಚಿಕೆ ಪತ್ರವನ್ನು ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯಡಿಯಲ್ಲಿ ಖರೀದಿಸಲು ನೀಡಲಾಗಿರುವ ಸಾಲ ಸೌಲಭ್ಯಗಳನ್ನು ಫ್ಲಾಟ್ ಖರೀದಿಸುವ ಗ್ರಾಹಕರಿಗೆ ಬ್ಯಾಂಕ್ ಸಾಲ ಪಡೆಯಲು ಗೃಹ ಮಂಡಳಿಯಿಂದ ಖಾತ್ರಿಯನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಗೃಹ ಮಂಡಳಿಯ ಕಾರ್ಯದರ್ಶಿ ದಯಾನಂದ್ ಭಂಡಾರಿ ಮಾತನಾಡಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 3 ಲಕ್ಷ ರೂ. ಒಳಗೆ ವಾರ್ಷಿಕ ಆದಾಯ ಹೊಂದಿರುವ ಅರ್ಜಿದಾರರು ಒಂದು ಬಿ.ಎಚ್.ಕೆ. ಫ್ಲಾಟ್ ಅನ್ನು ಬ್ಯಾಂಕ್ ಸಾಲದ ಮುಖಾಂತರ ಖರೀದಿಸಿದಲ್ಲಿ, ಕೇಂದ್ರ ಸರಕಾರದಿಂದಲೂ 1.5 ಲಕ್ಷ ರೂ.ಗಳಷ್ಟು ಸಹಾಯಧನ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಜಿದಾರರಿಗೆ ಹೆಚ್ಚುವರಿಯಾಗಿ ರಾಜ್ಯ ಸರಕಾರದ ವತಿಯಿಂದ 1.80 ಲಕ್ಷ ರೂ.ಗಳಷ್ಟು ವಿಶೇಷ ಸಹಾಯಧನ ಪಡೆಯಲು ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ 18 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವ ಅರ್ಜಿದಾರರು ಬ್ಯಾಂಕ್ ಸಾಲದ ಮುಖಾಂತರ ಫ್ಲಾಟ್ ಖರೀದಿಸಿದಲ್ಲಿ, ಗರಿಷ್ಠ 2.67 ಲಕ್ಷ ರೂ.ವರೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆಯಡಿ ಬಡ್ಡಿಯಲ್ಲಿ ವಿಶೇಷ ರಿಯಾುತಿ ಪಡೆಯಲು ಅವಕಾಶವಿರುತ್ತದೆ ಎಂದು ಅವರು ಹೇಳಿದರು.







