ಕೊಳ್ಳೇಗಾಲ: ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆ
ಕೊಳ್ಳೇಗಾಲ, ಸೆ.22: ಪೊಲೀಸರು ಮಧ್ಯವಸ್ಥಿಕೆ ವಹಿಸಿದ್ದಾಗ ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಸಾಧ್ಯವಾಗುವುದು ಎಂದು ಡಿವೈಎಸ್ಪಿ ಪುಟ್ಟಮಾದಯ್ಯ ತಿಳಿಸಿದ್ದಾರೆ.
ಪಟ್ಟಣ ವೃತ್ತ ಕಚೇರಿಯಲ್ಲಿ ಶುಕ್ರವಾರ ನಡೆದ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲೆಡೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ಬಡಾವಣೆಗೆ ಒಬ್ಬ ಪೊಲೀಸ್ ಸಿಬ್ಬಂದಿ ಬೀಟ್ ಸದಸ್ಯರನ್ನು ನೇಮಿಸಲಾಗಿದೆ. ಸಾರ್ವಜನಿಕರ ಮಧ್ಯೆ ಕಾನೂನು ಸುವ್ಯವಸ್ಥೆ ಹದಗೆಟ್ಟ ಸಂಧರ್ಭದಲ್ಲಿ ಪೊಲೀಸರಿಗೆ ತಿಳಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಕೊಳ್ಳಬೇಕು ಎಂದು ತಿಳಿಸಿದರು.
ರಸ್ತೆ ಅಗಲೀಕರಣದ ವೇಳೆ ಎನ್ಹೆಚ್ ಅಧಿಕಾರಿಗಳು ನೋಟಿಸ್ ನೀಡದೆ ಏಕಾಏಕಿ ದಲಿತರ ಮನೆಗಳು ಕೆಡವಿದ್ದಾರೆ. ಈಗ ಹೆಣ್ಣುಮಕ್ಕಳ ಸಮೇತ ದಲಿತ ಕುಟುಂಬವೇ ಬೀದಿಯಲ್ಲಿ ನಿಂತಿದೆ ಎಂದು ಸಭೆಯಲ್ಲಿದ್ದ ದಲಿತ ಮುಖಂಡರುಗಳು ದೂರಿದರು.
ವೃತ್ತ ನೀರಿಕ್ಷಕ ಡಿ.ಜಿ.ರಾಜಣ್ಣ ಮಾತನಾಡಿ, ಸರ್ಕಾರದ ಕೆಲಸದ ವೇಳೆ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಮೂಲಕ ಎಲ್ಲಾರ ರಕ್ಷಣೆ ಮಾಡುವ ಸಲುವಾಗಿ ಪೊಲೀಸ್ ಇಲಾಖೆ ಇದೆ. ರಸ್ತೆಗಳಲ್ಲಿ ಬಾರಿ ವಾಹನಗಳನ್ನು ನಿಲ್ಲಿಸುವವರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ರಸ್ತೆ ಬದಿಗಳಲ್ಲಿ ವಾಹನ ನಿಲ್ಲಿಸದಲ್ಲಿ ಬಾರೀ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ದಲಿತ ಮುಖಂಡರಾದ ನಟರಾಜು ಮಾಳಿಗೆ, ಬಾಲರಾಜು, ನಾಗರಾಜು, ಗೋಪಾಲ್, ಕುಮಾರಸ್ವಾಮಿ, ಮಂಜು, ರಾಜಪ್ಪ, ಸೋಮು, ನಾಯಕ ಮುಖಂಡರಾದ ಚಿಕ್ಕಲಿಂಗಯ್ಯ, ಶಂಕರ್, ಚಿಕ್ಕಮಾದು, ಸಿದ್ದರಾಜು ಹಾಗೂ ಇನ್ನೀತರರು ಹಾಜರಿದ್ದರು.