ರೈತರು ಇಲಾಖೆ ಯೋಜನೆಗಳ ಪ್ರಯೋಜನ ಹೆಚ್ಚೆಚ್ಚು ಪಡೆಯಲಿ: ಕೆಡಿಪಿ ಸಭೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು

ಉಡುಪಿ, ಸೆ. 22: ಜಿಲ್ಲೆಯ ಕೃಷಿ ಇಲಾಖೆಯಲ್ಲಿ ರೈತರಿಗಾಗಿ ಹಲವು ಯೋಜನೆಗಳಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸದ ಕಾರಣ ಯೋಜನೆಗಳ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧ್ಯವಾಗುತ್ತಿಲ್ಲ. ಆದುದರಿಂದ ಹೆಚ್ಚು ಹೆಚ್ಚು ರೈತರು ಇಲಾಖೆಯಲ್ಲಿನ ಯೋಜನೆಗಳ ಪ್ರಯೋಜನ ಪಡೆಯ ಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಉಡುಪಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಕೃಷಿ ಇಲಾಖೆಯಲ್ಲಿ ಶೇ.90ರ ಸಬ್ಸಿಡಿ ದರದಲ್ಲಿ ರೈತರಿಗೆ ಸ್ಪಿಂಕ್ಲರ್ ಸೌಲಭ್ಯ ಒದಗಿಸಲು ಹಾಗೂ ಕೃಷಿ ಯಂತ್ರೋಪಕ ರಣ ವಿತರಿಸಲು, ಮಿನಿ ಟ್ರಾಕ್ಟರ್ ಖರೀದಿಸಲು ಸಹಾಯಧನ ನೀಡಲಾಗು ತ್ತಿದೆ. ಭೂ ಸಮೃದ್ದಿ ಯೋಜನೆಯ ಹಾಗೂ ಕೃಷಿ ಭಾಗ್ಯ ಯೋಜನೆಯ ಪ್ರಯೋಜನವನ್ನು ರೈತರು ಪಡೆಯಬೇಕು ಎಂದರು.
ಪ್ರಸ್ತುತ ಇದುವರೆವಿಗೂ ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.18ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಕಳೆದ ವಾರ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಆರೋಗ್ಯಕರ ಬೆಳೆಯ ಬೆಳವಣಿಗೆ ಆಗಿದೆ. ರಾಸಾಯನಿಕ ಗೊಬ್ಬರಗಳ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಂಥೋನಿ ಮರಿಯಾ ಇಮಾನ್ಯುಯಲ್ ತಿಳಿಸಿದರು.
ಜಿಲ್ಲೆಯ ಎಲ್ಲಡೆ ಸ್ಚಚ್ಛತೆಯ ಬಗ್ಗೆ ಪರಿಣಾಮಕಾರಿಯಾಗಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು, ಯುವಕ ಮಂಡಲಗಳು ಗಮನಾರ್ಹವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಸರಕಾರಿ ಕಚೇರಿಗಳಲ್ಲಿ ಸ್ವಚ್ಚತೆಯ ನಿರ್ವಹಣೆ ಕಳಪೆಯಾಗಿದೆ. ಇಂದಿನಿಂದಲೇ ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಮತ್ತು ಪ್ಲಾಸ್ಟಿಕ್ ಬಳಕೆ ನಿಷೇಧಿಸಿ, ಹಸಿರು ಶಿಷ್ಠಾಚಾರ ಪಾಲಿಸಬೇಕು ಎಂದು ದಿನಕರ ಬಾಬು ಸೂಚಿಸಿದರು.
ಉಡುಪಿಯಲ್ಲಿ ಸ್ಥಳಾಂತರಿಸಲಾಗಿರುವ ಮಹಾತ್ಮಗಾಂಧಿ ಹಿರಿಯ ಪ್ರಾಥಮಿಕ ಶಾಲೆಯನ್ನು ದುರಸ್ತಿ ಮಾಡಿಸಿ, ಅಕ್ಟೋಬರ್ ರಜೆಯ ನಂತರ ಪುನಾರಂಭಿಸಬೇಕು ಎಂದು ಡಿಡಿಪಿಐಗೆ ಸೂಚಿಸಿದ ದಿನಕರ ಬಾಬು, ಒಳ ಕಾಡು ಶಾಲೆಯಲ್ಲಿ ಸ್ಥಳಿಯ ಜಿಪಂ ಸದಸ್ಯರ ಗಮನಕ್ಕೆ ಹಾಗೂ ಜಿಪಂ ಗಮನಕ್ಕೆ ತರದೇ ಕಾರ್ಯಕ್ರಮ ಆಯೋಜಿಸಿರುವ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ವಿತರಣೆ ವಿಳಂಬವಾಗಿರುವುದರಿಂದ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ತೊಂದರೆಯಾಗಿದೆ ಎಂದು ಅಧ್ಯಕ್ಷರು ದೂರಿದರು. ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗೆ ಚಿಕಿತ್ಸೆ ಉದ್ದೇಶಕ್ಕಾಗಿ ತಾತ್ಕಾಲಿಕ ಕಾರ್ಡ್ ನೀಡಲಾಗುವುದು. ಜಿಲ್ಲೆಯ 1191 ಬಿಪಿಎಲ್ ಕಾರ್ಡ್ ಮುದ್ರಣ ಆಗಿದ್ದು, ಶೀಘ್ರದಲ್ಲಿ ಅಂಚೆ ಮೂಲಕ ಫಲಾ ನುಭವಿಗಳ ಮನೆ ಬಾಗಿಲಿಗೆ ತಲುಪಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಮರಳು ತೆಗೆಯುವ ಪಂಚಾಯತ್ಗೆ ನೇರವಾಗಿ ರಾಜಧನವನ್ನು ಪಾವತಿಸು ವಂತೆ ಹಾಗೂ ಶಿರೂರು ಕುಂದಾಪುರ ನಡುವೆ ಪರ್ಮಿಟ್ ಪಡೆದರೂ ಬಸ್ ವ್ಯವಸ್ಥೆ ಕಲ್ಪಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಅಸಮಧಾನ ವ್ಯಕ್ತಪಡಿಸಿ, ಸೂಕ್ತ ವರದಿ ನೀಡುವಂತೆ ಸೂಚಿಸಿದರು.
ನಾಲ್ಕೂರು ಗ್ರಾಪಂನಲ್ಲಿ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಇಲ್ಲದ ಕಾರಣ ತೊಂದರೆಯಾಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಲೀಡ್ ಬ್ಯಾಂಕ್ ಮೆನೇಜರ್ ಅವರಿಗೆ ಉಪಾಧ್ಯಕ್ಷ ಶೀಲಾ ಶೆಟ್ಟಿ ತಿಳಿಸಿದರು. ಜಿಲ್ಲೆಯಲ್ಲಿ ಅ.1 ರಿಂದ 15ರವರೆಗೆ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ಸಮೃದ್ಧಿ ಹಾಗೂ ಸ್ವಚ್ಛತಾ ಪಾಕ್ಷಿಕ ಆಚರಿಸುತ್ತಿದ್ದು, ಈ ಕುರಿತು ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ಸಿಇಓ ಶಿವಾನಂದ ಕಾಪಶಿ ತಿಳಿಸಿದರು.
ಸಭೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.







