ಮಸೀದಿ-ಮದ್ರಸಗಳು ‘ಮಾಹಿತಿ ಕೇಂದ್ರ’ವಾಗಿಯೂ ರೂಪುಗೊಳ್ಳಲಿ: ಸಚಿವ ತನ್ವೀರ್ ಸೇಠ್
ದ.ಕ. ಮತ್ತು ಉಡುಪಿ ಜಿಲ್ಲೆಯ ಮುತವಲ್ಲಿಗಳ ಸಮಾವೇಶ

ಮಂಗಳೂರು, ಸೆ.2: ಮಸೀದಿ, ಮದ್ರಸಗಳನ್ನು ನಮಾಝ್, ಕುರ್ಆನ್ ಕಲಿಕೆಗೆ ಮಾತ್ರ ಸೀಮಿತಗೊಳಿಸಬಾರದು. ತಂತ್ರಜ್ಞಾನ ಯುಗಕ್ಕೆ ಮುಸ್ಲಿಂ ಸಮಾಜ ಒಗ್ಗಿಕೊಳ್ಳುವ ಅನಿವಾರ್ಯತೆ ಇರುವುದರಿಂದ ಮಸೀದಿ-ಮದ್ರಸಗಳನ್ನು ‘ಮಾಹಿತಿ ಕೇಂದ್ರ’ವಾಗಿಯೂ ರೂಪುಗೊಳಿಸಬೇಕು ಎಂದು ವಕ್ಫ್ ಸಚಿವ ತನ್ವೀರ್ ಸೇಠ್ ಅಭಿಪ್ರಾಯಪಟ್ಟರು.
ನಗರದ ಬೋಳಾರ ಶಾದಿಮಹಲ್ನಲ್ಲಿ ಶನಿವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಮುತವಲ್ಲಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರವು ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಮರ ಕಲ್ಯಾಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ ಅವುಗಳ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇಲ್ಲದ ಕಾರಣ ಅರ್ಹರಿಗೆ ತಲುಪುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ. ಆದರೂ ಜನರಿಗ ಸೂಕ್ತ ಮಾಹಿತಿ ಸಿಕ್ಕಿಲ್ಲ. ಹಾಗಾಗಿ ಮಸೀದಿ-ಮದ್ರಸಗಳಲ್ಲಿ ಮುತವಲ್ಲಿಗಳು, ಇಮಾಮರು ಸಕಾಲಕ್ಕೆ ಮಾಹಿತಿಯನ್ನು ನೀಡಬೇಕಾಗಿದೆ. ಪ್ರತೀ ಶುಕ್ರವಾರ ಸೂಕ್ತ ಮಾಹಿತಿಯನ್ನು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಪ್ರಯತ್ನಿಸಬಹುದಾಗಿದೆ ಎಂದು ತನ್ವೀರ್ ಸೇಠ್ ಹೇಳಿದರು.
ವಕ್ಫ್ ಅಲ್ಲಾಹನ ಆಸ್ತಿಯಾಗಿದ್ದು, ಅದನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ವಕ್ಫ್ ಆಸ್ತಿಯನ್ನು ಯಾವ ಕಾರಣಕ್ಕೂ ಒತ್ತುವರಿಯಾಗಲು ಬಿಡಲಾರೆ. ಯಾರೇ ಒತ್ತುವರಿ ಮಾಡಿಕೊಂಡರೂ ಕೂಡ ಅದನ್ನು ಕಾನೂನುಬದ್ಧವಾಗಿ ಮರಳಿ ಪಡೆಯಲಾಗುವುದು ಎಂದ ತನ್ವೀರ್ ಸೇಠ್, ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡಿದರೆ ವಕ್ಫ್ ಸಂಸ್ಥೆಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟದ ಕೆಲಸವಲ್ಲ ಎಂದರು.
ಮಸೀದಿ-ಮದ್ರಸಗಳನ್ನು ನಿರ್ಮಿಸಿದರೆ ಸಾಲದು, ಅದರ ನಿರ್ವಹಣೆಯೂ ಮುಖ್ಯ. ಮಸೀದಿಯ ಆಡಳಿತ ಎಂಬುದು ಸೇವೆಯಾಗಿದೆ, ಜವಾಬ್ದಾರಿಯಾಗಿದೆ. ಅದೆಂದೂ ರಾಜ್ಯಭಾರ ಅಲ್ಲ. ಹಾಗಾಗಿ ಎಲ್ಲ ಮುತವಲ್ಲಿಗಳು ಅಧಿಕಾರಕ್ಕಾಗಿ ಸ್ವಾರ್ಥ ಮಾಡಿಕೊಳ್ಳಬಾರದು. ಮಸೀದಿಯ ಆರ್ಥಿಕ ವ್ಯವಹಾರದ ಲೆಕ್ಕಪತ್ರ ಜೋಪಾಣವಾಗಿಟ್ಟುಕೊಳ್ಳಬೇಕು. ವಕ್ಫ್ ನಿಯಮಾವಳಿಯಂತೆ ಅಧಿಕಾರವಧಿ ಮುಗಿಯಲು 3 ತಿಂಗಳಿರುವಾಗಲೇ ಮುಂದಿನ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಅವಧಿ ಮುಗಿದರೂ ಅಧಿಕಾರ ಬಿಟ್ಟುಕೊಡದಿದ್ದರೆ ವಕ್ಫ್ ಸಂಸ್ಥೆಯ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಲಾಗುವುದು. ಯಾರೂ ಕೂಡ ವಕ್ಫ್ನೊಂದಿಗೆ ಚೆಲ್ಲಾಟವಾಡಬಾರದು. ವಕ್ಫ್ ಕಾಯ್ದೆ ಮೀರಿ ವರ್ತಿಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಸರಕಾರ ಹಿಂದೇಟು ಹಾಕುವುದಿಲ್ಲ ಎಂದು ತನ್ವೀರ್ ಸೇಠ್ ಎಚ್ಚರಿಸಿದರು.
ಕೇಂದ್ರ ಸರಕಾರವು ಕಳೆದ ವರ್ಷ 4.16 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಗುರಿ ಹಾಕಿಕೊಂಡಿತ್ತು. ಆದರೆ ರಾಜ್ಯ ಸರಕಾರವು ಅಲ್ಪಸಂಖ್ಯಾತ ಇಲಾಖೆಯ ಮೂಲಕ 14 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ. ಅರಿವು ಸಾಲ ಯೋಜನೆಯ ಪ್ರಯೋಜನವನ್ನೂ ಕಲ್ಪಿಸಲಾ ಗಿದೆ. ರಾಜ್ಯದ 6 ಸಾವಿರ ದಫನ್ ಭೂಮಿಗೆ ಆವರಣ ಗೋಡೆಗಳಿಲ್ಲ. ಕಳೆದ ಬಾರಿ 1,430 ದಫನ ಭೂಮಿಗೆ ಆವರಣ ಗೋಡೆ ನಿರ್ಮಿಸಲಾಗಿದ್ದು, ಈ ಬಾರಿ 35 ಕೋ.ರೂ. ವೆಚ್ಚದಲ್ಲಿ 603 ದಫನ ಭೂಮಿಗೆ ಆವರಣ ಗೋಡೆ ನಿರ್ಮಿಸಲಾಗುವುದು ಎಂದರು.
ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಸಮಾವೇಶದ ಅಧ್ಯಕ್ಷತೆಯನ್ನು ಶಾಸಕ ಜೆ.ಆರ್.ಲೋಬೊ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿದರು. ವಕ್ಫ್ ಬೋರ್ಡ್ನ ವಿಶೇಷಾಧಿಕಾರಿ ಮುಜೀಬುಲ್ಲಾ ಜಪ್ಫಾರಿ ವಕ್ಫ್ ಆಡಳಿತ ನಿರ್ವಹಣೆ, ಜವಾಬ್ದಾರಿಯ ಬಗ್ಗೆ ಮಾಹಿತಿ ನೀಡಿದರು. ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ರ ಸಂದೇಶ ವಾಚಿಸಲಾಯಿತು.
ವೇದಿಕೆಯಲ್ಲಿ ವಕ್ಫ್ ಬೋರ್ಡ್ನ ಸಿಇಒ ಎಸ್.ಎಂ. ಝುಲ್ಫಿಕರ್ ಉಲ್ಲಾ, ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅನುರಾಧಾ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಕೆ.ಎಂ. ಇಬ್ರಾಹೀಂ, ರಾಜ್ಯ ವಕ್ಫ್ ಬೋರ್ಡ್ನ ಮಾಜಿ ಸದಸ್ಯ ಯೆನೆಪೊಯ ಮುಹಮ್ಮದ್ ಕುಂಞಿ, ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಉಸ್ಮಾನ್ ಹಾಜಿ, ದ.ಕ.ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್, ಮುಡಾ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಎಂ. ಅಬೂಬಕರ್, ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿ ಕರೀಂ ಅಸಾದಿ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಎಸ್.ಎಂ. ರಶೀದ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಯಹ್ಯಾ ನಕ್ವಾ ವಂದಿಸಿದರು. ಟಿಆರ್ಎಫ್ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಪಠ್ಯಪುಸ್ತಕ ವಿವಾದ ಕೊನೆಗೊಳಿಸಿ: ಸಚಿವ ತನ್ವೀರ್ ಸೇಠ್
ದ.ಕ.ಜಿಲ್ಲೆಯ 23 ಕಡೆ ಪಠ್ಯಪುಸ್ತಕ ವಿವಾದವು ತಾರಕಕ್ಕೇರಿದ್ದು, ಹೈಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಇದು ಮುಸ್ಲಿಂ ಸಮಾಜಕ್ಕೆ ಶೋಭೆಯಲ್ಲ. ಈ ಸಮಸ್ಯೆಯನ್ನು ತಾವು ತಮ್ಮೆಳಗೆ ಪರಿಹರಿಸಿಕೊಳ್ಳಬೇಕು. ಈಗಾಗಲೆ ಬೆಂಗಳೂರು-ಮೈಸೂರು ಹಾಗೂ ಬೆಳಗಾವಿ-ಗುಲ್ಬರ್ಗಾ ಕೇಂದ್ರಿತವಾಗಿ ವಕ್ಫ್ ನ್ಯಾಯ ಮಂಡಳಿಯನ್ನು ರಚಿಸಲಾಗಿದೆ. ಯಾವುದೇ ವಿವಾದವನ್ನು ಈ ನ್ಯಾಯಮಂಡಳಿಯ ಮೂಲಕ ಬಗೆಹರಿಸಬೇಕು ಎಂದು ಸಚಿವ ತನ್ವೀರ್ ಸೇಠ್ ಹೇಳಿದರು.
ಸಚಿವ ತನ್ವೀರ್ ಸೇಠ್ರ ಭಾಷಣದ ಸಾರಾಂಶ
► ತಾಲೂಕು ಮಟ್ಟದಲ್ಲೂ ಮಾಹಿತಿ ಕೇಂದ್ರ ಸ್ಥಾಪನೆ
►ತಾಲೂಕು ಮಟ್ಟದಲ್ಲಿ ವಕ್ಫ್ ಸಲಹಾ ಸಮಿತಿ ರಚನೆ
► ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಕ್ಫ್ ಟಾಸ್ಕ್ಫೋರ್ಸ್ ರಚನೆ
► ಎರಡು ನಗರ ಕೇಂದ್ರಿತವಾಗಿ ರಾಜ್ಯ ವಕ್ಫ್ ನ್ಯಾಯ ಮಂಡಳಿ ರಚನೆ
► ವಕ್ಫ್ ಆಸ್ತಿಯ ಮೌಲ್ಯ ನಿಗದಿಗೆ ಕ್ರಮ
► ರಾಜ್ಯದ ಎಲ್ಲಾ ವಕ್ಫ್ ಆಸ್ತಿಯ ಸರ್ವೆ ಕಾರ್ಯಕ್ಕೆ ಚಾಲನೆ







