"ಭ್ರಷ್ಟಾಚಾರದಲ್ಲಿ ಬಂಟ್ವಾಳ ಪುರಸಭೆ ನಂ.1"
ಬಂಟ್ವಾಳ, ಸೆ. 23: ತನ್ನ ಹಾಗೂ ಬಿಜೆಪಿ ಸದಸ್ಯರ ಮೇಲೆ ಆರೋಪ ಮಾಡಿರುವ ಅಕ್ರಮ ಕಟ್ಟಡವನ್ನು ಪುರಸಭೆಯು ತಕ್ಷಣ ತೆರವುಗೊಳಿಸಲಿ ಎಂದು ಪುರಸಭಾ ವಿಪಕ್ಷ ಬಿಜೆಪಿ ಸದಸ್ಯ ದೇವದಾಸ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ಪುರಸಭಾ ಆಡಳಿತದ ವಿರುದ್ಧದ 15 ಆರೋಪಗಳನ್ನೊಳಗೊಂಡ ಆರೋಪ ಪಟ್ಟಿಯನ್ನು ವಿಪಕ್ಷ ಬಿಜೆಪಿ ಸದಸ್ಯರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಬಂಟ್ವಾಳ ಪುರಸಭಾಧ್ಯಕ್ಷರಿಗೆ ಅನುಭವದ ಕೊರತೆ ಇದ್ದು, ಸಚಿವ ಬಿ.ರಮಾನಾಥ ರೈ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ, ಪುರಸಭಾ ಸದಸ್ಯ ಬಿ.ದೇವದಾಸ ಶೆಟ್ಟಿ ಹೇಳಿದ್ದಾರೆ. ರಾಜ್ಯ ಅರಣ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಸ್ವಕ್ಷೇತ್ರವಾದ ಬಂಟ್ವಾಳ ಕ್ಷೇತ್ರದ ಪುರಸಭೆ ಭ್ರಷ್ಟಾಚಾರದಲ್ಲಿ ರಾಜ್ಯದ ನಂ.1 ಪುರಸಭೆ ಎನ್ನುವ ಕುಖ್ಯಾತಿ ಪಡೆದಿದೆ ಎಂದು ಬಿಜೆಪಿ ಸದಸ್ಯ ದೇವದಾಸ್ ಶೆಟ್ಟಿ ಹೇಳಿದರು.
ಬಂಟ್ವಾಳ ಪುರಸಭೆಯಲ್ಲಿ ಕಸ ಸಂಗ್ರಹ, ತ್ಯಾಜ್ಯ ನಿರ್ವಹಣೆ ಮತ್ತಿತರ ವಿಚಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಈ ಪ್ರಕರಣ ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಮಾಲಕತ್ವದ ವಾಣಿಜ್ಯ ಸಂಕೀರ್ಣದಲ್ಲಿ ಅಕ್ರಮ ನಡೆದ ಬಗ್ಗೆ ದಾಖಲೆ ಸ್ಪಷ್ಟವಾಗಿದ್ದರೂ, ಸಚಿವರನ್ನು ರಕ್ಷಿಸುವ ಪ್ರಯತ್ನ ಪುರಸಭಾಡಳಿತ ನಡೆಸುತ್ತಿದೆ. 5 ಸೆಂಟ್ಸ್ ನಿವೇಶನದಲ್ಲಿ ಅನಧಿಕೃತವಾಗಿ ವಾಣಿಜ್ಯ ಕಟ್ಟಡ ನಿರ್ಮಿಸಿ ಅಧಿಕಾರ ದುರುಪಯೋಗ ಪಡೆಸಿರುವ ರಾಜ್ಯದ ಹಿರಿಯ ಸಚಿವರ ಘನತೆಗೆ ಶೋಭೆಯಲ್ಲ. ಈ ಬಗ್ಗೆ ಸರಕಾರದ ಅಭಿಪ್ರಾಯ ಪಡೆದು, ಸಾರ್ವಜನಿಕ ಹಿತಾಸಕ್ತಿಯಲ್ಲಿ ಹೋರಾಟ ನಡೆಸಲಾಗುವುದಾಗಿ ಅವರು ಹೇಳಿದರು.
ವಿಎ ಕಚೇರಿಯನ್ನು ಹುಡುಕಿಕೊಡಿ
ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಂದಾಯ ನಿರೀಕ್ಷಕರು, ಗ್ರಾಮಕರಣಿಕರ ಕಚೇರಿ ಸೆ. 22ರಿಂದ ಕಾಣೆಯಾಗಿದೆ. ಪಂಜೆ ಮಂಗೇಶರಾಯ ಭವನ ನಿರ್ಮಿಸಲು ಕಟ್ಟಡ ತೆರವುಗೊಳಿಸುವ ಕಾರ್ಯಕ್ಕೆ ತರಾತುರಿಯಲ್ಲಿ ಹೊರಟಿರುವ ಆಡಳಿತ ಸಾರ್ವಜನಿಕರಿಗೆ ಸೂಚನೆಯನ್ನೂ ನೀಡದೆ ನೆಲ ಸಮತಟ್ಟು ಮಾಡಲು ಹೊರಟಿದೆ. ತಕ್ಷಣ ಈ ಕಟ್ಟಡವನ್ನು ಹುಡುಕಿಕೊಡಿ. ಇಲ್ಲದಿದ್ದಲ್ಲಿ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ ಉಳಿಪ್ಪಾಡಿ, ರುಕ್ಮಯ ಪೂಜಾರಿ, ಸುಲೋಚನಾ ಜಿ.ಕೆ. ಭಟ್, ಜಿ.ಆನಂದ, ದಿನೇಶ್ ಭಂಡಾರಿ, ರಾಮದಾಸ ಬಂಟ್ವಾಳ, ಭಾಸ್ಕರ ಟೈಲರ್, ಸಂಧ್ಯಾ, ಸುಗುಣ ಕಿಣಿ, ರಾಜಾರಾಮ ನಾಯಕ್, ರೊನಾಲ್ಡ್ ಡಿಸೋಜ, ಮೋನಪ್ಪ ದೇವಸ್ಯ, ಸೀತಾರಾಮ ಪೂಜಾರಿ, ದೇವಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.