ಅ.2: ಪಡುಮಲೆಗೆ ಬಿಜೆಪಿ ಪಾದಯಾತ್ರೆ
ಮಂಗಳೂರು, ಸೆ.23: ಕೋಟಿ-ಚೆನ್ನಯರ ಜನ್ಮಸ್ಥಳ ಪಡುಮಲೆಯ ದೇಯಿ ಬೈದೆತಿ ಪುತ್ಥಳಿಗೆ ಅಪಮಾನ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಬೇಕು ಮತ್ತು ಜತೆಗೆ ಧಾರ್ಮಿಕ ಕ್ಷೇತ್ರಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಅ.2ರ ಗಾಂಧಿ ಜಯಂತಿಯಂದು ಜಿಲ್ಲಾ ಬಿಜೆಪಿ ವತಿಯಿಂದ ಪುತ್ತೂರಿನಿಂದ ಪಡುಮಲೆಗೆ ಶಾಂತಿಯುತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ತಿಳಿಸಿದರು.
ಶನಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರ ಕುರಿತು ತುಳುನಾಡಿನ ಜನತೆ ವಿಶೇಷ ಭಕ್ತಿ, ಶ್ರದ್ಧೆಯನ್ನು ಇಟ್ಟುಕೊಂಡಿದ್ದಾರೆ. ದೇಯಿ ಬೈದೆತಿ ಪುತ್ಥಳಿಗೆ ಅಪಮಾನ ಪ್ರಕರಣ ಹಿಂದೂ ಬಾಂಧವರ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬನನ್ನು ಬಂಧಿಸಲಾಗಿದೆ. ಉಳಿದವರನ್ನು ಇನ್ನೂ ಬಂಧಿಸಿಲ್ಲ. ಇದನ್ನು ರಾಜಕೀಯ ಪ್ರೇರಿತವಾಗಿ ಮುಚ್ಚಿ ಹಾಕುವ ಪ್ರಯತ್ನವೂ ನಡೆಯುತ್ತಿದೆ ಎಂದರು.
ಸಂಸದ ನಳಿನ್ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿಯ ನೇತೃತ್ವದಲ್ಲಿ 22 ಕಿ.ಮೀ. ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಕೋಟಿ ಚೆನ್ನಯರ ಜನ್ಮಸ್ಥಳದ ಅಭಿವೃದ್ಧಿಗಾಗಿ ರಾಜ್ಯ ಸರಕಾರ 5 ಕೋ.ರೂ. ಘೋಷಣೆ ಮಾಡಿದ್ದರೂ, ಈ ತನಕ ಬಿಡಿಗಾಸನ್ನೂ ನೀಡಿಲ್ಲ. ಇದನ್ನು ಜನರಿಗೆ ತಿಳಿಸುವ ಕಾರ್ಯವನ್ನೂ ಬಿಜೆಪಿ ಮಾಡಲಿದೆ. ಕೆಲವು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪಡುಮಲೆಗೆ ಭೇಟಿ ನೀಡಿ, ದೇಯಿ ಬೈದೆತಿ ಔಷಧಿ ವನದಲ್ಲಿ ಯಾರಿಗೂ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ ಎಂದು ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ ಎಂದು ಸಂಜೀವ ಮಠಂದೂರು ಆರೋಪಿಸಿದರು.
ದೇಯಿ ಬೈದೆತಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿಲ್ಲ ಎಂಬ ಉಸ್ತುವಾರಿ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಂಸದ ನಳಿನ್ಕುಮಾರ್ ಕಟೀಲು ಸ್ವಾತಂತ್ರ್ಯ ಹೋರಾಟಗಾರರ ಮೂರ್ತಿಯನ್ನೂ ಪ್ರತಿಷ್ಠಾಪನೆ ಮಾಡುವುದಿಲ್ಲ. ಆದರೆ ಇಂತಹ ಮೂರ್ತಿಗಳಿಗೆ ಅಪಮಾನ ಮಾಡಿದರೆ ಅದರ ಗೌರವಕ್ಕೆ ಧಕ್ಕೆ ಮಾಡಿದಂತಾಗುತ್ತದೆ. ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಹಿಂದೆ ಕಟೀಲಿನ ದೇವಿಗೆ ಅಪಮಾನವಾದಗಲೂ ಬಿಜೆಪಿಯು ಪೊಳಲಿಯಿಂದ ಕಟೀಲಿಗೆ ಪಾದಯಾತ್ರೆ ನಡೆಸಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ್ ಮೂಡುಬಿದಿರೆ, ಕ್ಯಾ. ಬ್ರಿಜೇಶ್ ಚೌಟ, ವಕ್ತಾರ ವಿಕಾಸ್ ಪುತ್ತೂರು ಉಪಸ್ಥಿತರಿದ್ದರು.