ಹಿರಿಯ ಕಾಂಗ್ರೆಸ್ ನಾಯಕ ಹೆಬ್ರಿ ಪ್ರಸನ್ನ ಬಲ್ಲಾಳ್ ನಿಧನ
ಹೆಬ್ರಿ, ಸೆ.23: ಹಿರಿಯ ಕಾಂಗ್ರೆಸ್ ಮುಖಂಡ, ಹೆಬ್ರಿಯ ಜನಪ್ರಿಯ ಸಾರಿಗೆ ಉದ್ಯಮಿ ಹೆಬ್ರಿಬೀಡು ಎಚ್. ಪಸನ್ನ ಬಲ್ಲಾಳ್ (55) ಶನಿವಾರ ಅನಾರೋಗ್ಯ ದಿಂದ ನಿಧನರಾದರು.
ಅವರು ತಾಯಿ, ಪತ್ನಿ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಹೆಬ್ರಿಯಲ್ಲಿ ಅಜಾತಶತ್ರು ಎನಿಸಿದ್ದ ಪ್ರಸನ್ನ ಬಲ್ಲಾಳ್ ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಹಕಾರ, ಸಾಮಾಜಿಕ ಸಂಘಟನೆಗಳ ಜೊತೆಗೆ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ತನ್ನ ತಂದೆ ಹೆಬ್ರಿಬೀಡು ಸುಭೋದ್ ಬಲ್ಲಾಳ್ ನಿಧನ ನಂತರ ಸಾಮಾಜಿಕ ಮುನ್ನಲೆಗೆ ಬಂದ ಪ್ರಸನ್ನ ಬಲ್ಲಾಳ್ ಮಂಡಲ ಪ್ರಧಾನರಾಗಿ, ಎರಡು ಬಾರಿ ಜಿಪಂ ಸದಸ್ಯರಾಗಿ, ಜಿಪಂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಪರಮಾಪ್ತರಾಗಿದ್ದ ಇವರು, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಉಡುಪಿ ಜಿಲ್ಲಾ ಕಾಂಗ್ರೆಸ್ ಸದಸ್ಯ, ಉಪಾಧ್ಯಕ್ಷರಾಗಿ ದುಡಿದಿದ್ದಾರೆ.
ಮೃತರ ಗೌರವಾರ್ಥ ಹೆಬ್ರಿ ಪೇಟೆಯನ್ನು ಬಂದ್ ಮಾಡಿ ಗೌರವ ಸೂಚಿಸಲಾಯಿತು. ಎಪಿಎಂ ಸಾರಿಗೆ ಸಂಸ್ಥೆಯ ಬಸ್ಗಳು ಇಂದು ಸಂಚರಿಸಲಿಲ್ಲ. ಸಂಸದ ಎಂ.ವೀರಪ್ಪ ಮೊಯ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್. ಗೋಪಾಲ ಭಂಡಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್, ಹರ್ಷ ಮೊಯ್ಲಿ, ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ವಿನಯ ಕುಮಾರ್ ಸೊರಕೆ, ಕೆ. ಅಭಯಚಂದ್ರ ಜೈನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ, ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಣಿಪಾಲ ವಿವಿ ಕುಲಪತಿ ಡಾ.ಹೆಚ್.ಎಸ್. ಬಲ್ಲಾಳ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ಹೆಗ್ಡೆ, ವೆರೋನಿಕಾ ಕರ್ನೆಲಿಯೋ ಸಹಿತ ಸಾವಿರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು.