ಕಾಪು ಘನತ್ಯಾಜ್ಯ ಘಟಕ ಕಾಮಗಾರಿಗೆ ಎಲ್ಲೂರು ಗ್ರಾಪಂ ವಿರೋಧ
ಪಡುಬಿದ್ರಿ,ಸೆ.25: ಕಾಪು ಪುರಸಭೆ ಘನ ತ್ಯಾಜ್ಯ ಸಂಸ್ಕರಣಾ ಘಟಕದ ಕಾಮಗಾರಿಗೆ ಎಲ್ಲೂರು ಗ್ರಾಮ ಪಂಚಾಯತ್ ಸೋಮವಾರ ತಡೆಯೊಡ್ಡಿದ ಘಟನೆ ಸೋಮವಾರ ನಡೆದಿದೆ.
ಎಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಲ ಕಾಡು ಪ್ರದೇಶದಲ್ಲಿ ಜಿಲ್ಲಾಧಿಕಾರಿಯವರು ಕಾಪು ಪುರಸಭೆಗೆ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಸ್ಥಳ ಮಂಜೂರು ಮಾಡಿದ್ದರು.
ಕಳೆದೆರಡು ದಿನಗಳಿಂದ ಈ ಜಮೀನಿನ ಗಡಿ ಗುರುತು ಮಾಡಿ ಆವರಣಗೋಡೆ ನಿರ್ಮಿಸಲು ಕಾಮಗಾರಿ ನಡೆಯುತ್ತಿದೆ. ಸೋಮವಾರ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯ್ತಿ ಆಡಳಿತ ಸಮಿತಿ, ಈ ಹಿಂದೆಯೇ ಘನತ್ಯಾಜ್ಯ ಘಟಕ ನಿರ್ಮಾಣ ವಿರೋಧಿಸಿ ಪಂಚಾಯಿತಿ ನಿರ್ಣಯ ಕೈಗೊಂಡು ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರಿಗೆ ಆಕ್ಷೇಪ ಪತ್ರ ಸಲ್ಲಿಸಲಾಗಿದೆ.
ಇದೀಗ ಪಂಚಾಯಿತಿ ಗಮನಕ್ಕೆ ತಾರದೆ ಕಾಮಗಾರಿ ಮಾಡುವುದು ಸರಿಯಲ್ಲ. ಘಟಕ ಸ್ಥಾಪನೆಗೆ ನಾವು ಅವಕಾಶ ನೀಡುವುದಿಲ್ಲ. ಮಂಗಳವಾರವೇ ಗ್ರಾಪಂ ತುರ್ತು ಸಭೆ ಕರೆದು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಯವರಿಗೆ ಮತ್ತೆ ಆಕ್ಷೇಪ ಪತ್ರ ಸಲ್ಲಿಸಲಾಗುವುದು ಎಂದು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಜಯಂತ್ ಭಟ್ ತಿಳಿಸಿದರು.
ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಈಗಾಗಲೇ ಯುಪಿಸಿಎಲ್ ಯೋಜನೆಯಿಂದ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಮತ್ತೆ ಇಲ್ಲೇ ಘನತ್ಯಾಜ್ಯ ಘಟಕ ಸ್ಥಾಪನೆ ಮಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಘಟಕ ಆರಂಭದಲ್ಲಿ ಏನೇನು ಸಬೂಬು ಹೇಳಿ ಯೋಜನೆ ಕಾರ್ಯಗತ ಮಾಡುತ್ತಾರೆ. ಬಳಿಕ ಯಾರು ಈ ಬಗ್ಗೆ ಗಮನ ಹರಿಸುವುದಿಲ್ಲ. ಪುರಸಭೆ ಹಾಗೂ ಆಯಾಯ ಗ್ರಾಮ ಪಂಚಾಯ್ತಿ ಅವರವರ ಜಾಗದಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡಲಿ. ಎಲ್ಲೆಲ್ಲಿಯ ತ್ಯಾಜ್ಯಗಳನ್ನು ನಮ್ಮ ಗ್ರಾಮದಲ್ಲಿ ಸುರಿಯುವುದು ಬೇಡ ಎಂದು ಆಗ್ರಹಿಸಿದರು.
ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಕಾಪು ಪುರಸಭೆ ಮುಖ್ಯಾಧಿಕಾರಿ ಹೆಸರಿನಲ್ಲಿ ಎಲ್ಲೂರು ಗ್ರಾಮದಲ್ಲಿ 10 ಎಕರೆ ಸರಕಾರಿ ಜಾಗವನ್ನು ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಮುಖ್ಯಾಧಿಕಾರಿ ಹೆಸರಿನಲ್ಲಿ ಅದಕ್ಕೆ ಪಹಣಿ ಪತ್ರವು ಆಗಿದೆ. ಕಾಪು ಪುರಸಭೆ ತ್ಯಾಜ್ಯವನ್ನು ಇಲ್ಲಿ ಸಂಸ್ಕರಣೆ ಮಾಡಲಾಗುವುದು. ತ್ಯಾಜ್ಯ ಸಂಸ್ಕರಣೆ ಘಟಕ ಸ್ಥಾಪನೆಯ ವಿಸ್ಕøತ ಯೋಜನಾ ವರದಿ ವಿಳಂಬದಿಂದ ಯೋಜನೆ ಕಾರ್ಯಗತವಾಗಲು ತೊಡಕಾಗಿತ್ತು. ಇದೀಗ ಟೆಂಡರ್ ಪ್ರಕ್ರಿಯೆ ಮುಗಿದು ಲೋಕೋಪಯೋಗಿ ಇಲಾಖೆಗೆ ಕಾಮಗಾರಿಯನ್ನು ವಹಿಸಲಾಗಿದೆ. ಘಟಕ ನಿರ್ಮಾಣಕ್ಕೆ ರೂ. 5 ಕೋಟಿ ಹಣವು ಬಿಡುಗಡೆಯಾಗಿದೆ. ಕಾಮಗಾರಿಗೆ ಗ್ರಾಮ ಪಂಚಾಯ್ತಿ ವಿರೋಧ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಯವರ ನಿರ್ದೇಶನ ಬರುವರೆಗೆ ಕಾಮಗಾರಿ ಸ್ಥಗಿತ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು.
ಎಲ್ಲೂರಿನಲ್ಲಿ ಘನತ್ಯಾಜ್ಯ ಘಟಕ ಸ್ಥಾಪನೆ ಬಗ್ಗೆ ಹೇಳಿಕೆ ನೀಡುವ ಇವರು ಎಲ್ಲೂರಿಗೆ ಎಷ್ಟು ಅನುದಾನ ಈವರೆಗೆ ನೀಡಿದ್ದಾರೆ. ಪಕ್ಕದ ಬೆಳಪು ಗ್ರಾಮ ಪಂಚಾಯ್ತಿಗೆ ಅನುದಾನ ನೀಡುವ ಶಾಸಕರು ಅಲ್ಲಿಯೇ ಘಟಕ ನಿರ್ಮಾಣಕ್ಕೆ ಮುಂದಾಗಲಿ. ಬೆಳಪುವಿನಲ್ಲಿ 10 ಎಕರೆ ಸರಕಾರಿ ಜಮೀನನ್ನು ಘಟಕ ನಿರ್ಮಾಣಕ್ಕೆ ನೀಡುವುದಾಗಿ ಅಲ್ಲಿನ ಪಿಡಿಒ ತಿಳಿಸಿದ್ದಾರೆ.