ಕಳವು ಪ್ರಕರಣ: ಪ್ರಮುಖ ಆರೋಪಿ ಬಂಧನ
ಪುತ್ತೂರು,ಸೆ.25: ಕಳೆದ ಮೂರು ತಿಂಗಳ ಹಿಂದೆ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯೊಬ್ಬನನ್ನು ಸೋಮವಾರ ಬಂಧಿಸಿರುವ ಪುತ್ತೂರು ನಗರ ಪೊಲೀಸರು ಆತನಿಂದ ಕೆಲವು ಚಿನ್ನಾಭರಣ ಮತ್ತಿತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿ ನಿವಾಸಿ ಮಹಮ್ಮದ್ ಆಶಿಕ್(26) ಬಂಧಿತ ಆರೋಪಿ. ಮಹಮ್ಮದ್ ಆಶಿಕ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.
ಆರೋಪಿ ಮಹಮ್ಮದ್ ಆಶಿಕ್ನಿಂದ ಸುಮಾರು 60 ಸಾವಿರ ಬೆಲೆಯ ಒಂದು ವಾಚ್ ಹಾಗೂ ಅಂದು ಕಳವು ನಡೆದ ಸಂದರ್ಭ ಆರೋಪಿಗಳು ಬಳಸಿದ್ದ ಡಸ್ಟರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಕಳ್ಳತನ ನಡೆಸಿದ್ದ ಚಿನ್ನಾಭರಣಗಳ ಪೈಕಿ ಭಾಗಶಃ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮಿಕ್ಕುಳಿದ ಚಿನ್ನಾಭರಣಗಳು ಇತರ ಆರೋಪಿಗಳ ಬಂಧನದೊಂದಿಗೆ ಸಿಗುವ ಸಂಭವವಿದೆ.
2017ರ ಜೂನ್ 26ರಂದು ಪುತ್ತೂರು ಪರ್ಲಡ್ಕ ಬೈಪಾಸ್ನಲ್ಲಿರುವ ಉಮ್ಮರ್ ಫಾರೂಕ್ ಎಂಬವರ ಮನೆಯಿಂದ ಸುಮಾರು 318 ಗ್ರಾಂ ಚಿನ್ನಾಭರಣ ಕಳವು ಮಾಡಲಾಗಿತ್ತು. ಮನೆಯ ಯಜಮಾನ ಉಮ್ಮರ್ ಫಾರೂಕ್ ವಿದೇಶದಲ್ಲಿದ್ದು, ಮನೆಯಲ್ಲಿರುವ ಪತ್ನಿ ಅಫ್ರಿನಾ ರಂಝಾನ್ ಸಂದರ್ಭದಲ್ಲಿ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಕಳ್ಳರು ಮನೆಯ ಹಿಂಭಾಗದ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಸಂಜೆ ಅಫ್ರಿನಾ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಅವರು ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಈ ಪ್ರಕರಣದ ಇತರ ಆರೋಪಿಗಳಾದ ಕಾಸರಗೋಡು ಜಿಲ್ಲೆಯ ಉಪ್ಪಳದ ಸಯ್ಯದ್ ಜಂಶಿದ್ ಮತ್ತು ಬಾಯಾರುಪದವಿನ ಇಬ್ರಾಹಿಂ ಮುಜಾಮಿಲ್ ಹಾಗೂ ಹಂಝ ಎಂಬವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯದಿಂದ ತಮ್ಮ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈತ ಬೇರಾವುದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಯತ್ತಿದೆ.
ಪುತ್ತೂರು ನಗರ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ನಡೆದಿದೆ. ಪ್ರೊಬೆಶನರಿ ಎಸ್ಐ ರವಿ, ಎಎಸ್ಐ ಚಿದಾನಂದ ರೈ, ಎಚ್ಸಿಗಳಾದ ದಾಮೋದರ್, ಕೃಷ್ಣಪ್ಪ, ಸ್ಕರಿಯ, ಪಿ.ಸಿ.ಗಳಾದ ಪ್ರಶಾಂತ್ ಶೆಟ್ಟಿ, ಪ್ರಶಾಂತ್ ರೈ, ಪ್ರಸನ್ನ ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.