ಪ್ರಧಾನಿ ಮೋದಿ ದೇಶದ ಜನತೆಗೆ ಉತ್ತರ ನೀಡಬೇಕಿದೆ : ಆಸ್ಕರ್ ಫೆರ್ನಾಂಡಿಸ್
ಉದ್ಯಾವರ, ಸೆ.25: ನೋಟು ಅಮೌಲ್ಯೀಕರಣ ಮಾಡುವ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ಕ್ರಾಂತಿಕಾರಿ ಹೆಜ್ಜೆಯನ್ನು ತೆಗೆದುಕೊಂಡಿರುವುದು ದೇಶದ ಆರ್ಥಿಕ ಸುಸ್ಥಿರತೆಯನ್ನು ಕಾಪಾಡುವುದಕ್ಕೆ ಮತ್ತು ದೇಶದ ಅಭಿವೃದ್ಧಿಗಾಗಿ. ಆದುದರಿಂದ ದೇಶವಾಸಿಗಳೆಲ್ಲ 50 ದಿವಸ ನಿಮ್ಮ ಕಷ್ಟಗಳನ್ನು ಸಹಿಸಿಕೊಳ್ಳಿ ನಂತರ ಒಳ್ಳೆಯ ದಿನ ಬರಲಿದೆ ಎಂದು ಹೇಳಿದ್ದರು. ಆದರೆ ಇದೀಗ ನೋಟು ಅಮೌಲ್ಯೀಕರಣದ ಫಲಿತಾಂಶ ಸ್ಪಷ್ಟವಾಗಿ ಗೋಚರವಾಗಿದೆ. ಈ ಬಗ್ಗೆ ಅವರು ದೇಶದ ಜನತೆಗೆ ಉತ್ತರಿಸಬೇಕಿದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಇತ್ತೀಚೆಗೆ ಉದ್ಯಾವರದಲ್ಲಿ ನಡೆದ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ಸವಾಲು ಎಸೆದರು.
ವಿಶ್ವದಲ್ಲಿ ಗುರುತಿಸ್ಪಟ್ಟ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಮೊದಲೇ ಹೇಳಿದಂತೆ ದೇಶದ ಜಿಡಿಪಿ ಶೇ.2ಕ್ಕಿಂತಲೂ ಹೆಚ್ಚು ಕುಸಿದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ ಮತ್ತು ಜನ ಸಾಮಾನ್ಯರ ಬದುಕು ದುಸ್ಥರವಾಗುತ್ತಿದೆ. ಇದೀಗ ಪ್ರಧಾನ ಮಂತ್ರಿಗಳು ತಾನು ನೋಟು ಅವೌಲ್ಯೀಕರಣಗೊಳಿಸಿದ ನಿಜವಾದ ಉದ್ದೇಶ ಏನು ಎಂಬುದನ್ನು ದೇಶದ ಜನತೆಗೆ ಉತ್ತರಿಸಬೇಕಾಗಿದೆ ಎಂದರು.
ಇಂದು ಭಾರತ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷ. ಬಿಜೆಪಿಯದ್ದು ಕಾಂಗ್ರೆಸ್ ಮುಕ್ತ ಯೋಚನೆಯಾಗಿದ್ದರೆ ಕಾಂಗ್ರೆಸ್ನದ್ದು ಹಸಿವು ಮುಕ್ತ ಯೋಚನೆ ಎಂದರು. ಈ ಸಮಾಜದ ಸರ್ವ ಜನರ ಒಳಿತಿಗಾಗಿ ದುಡಿಯುವ ಪಕ್ಷ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಎಂಬುವುದು ಒಂದು ರಾಜಕೀಯ ಪಕ್ಷ ಮಾತ್ರವಲ್ಲ ಅದೊಂದು ಜನಾಂದೋಲನ ಎಂದವರು ನುಡಿದರು.
ಮಾಜಿಸಚಿವ ಹಾಗೂ ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಜನರ ನೋವು ನಲಿವುಗಳಿಗೆ ಸ್ಪಂದಿಸುವುದೇ ಕಾಂಗ್ರೆಸ್ ಪಕ್ಷದ ಮೂಲ ಸಿದ್ದಾಂತ. ಜಾತ್ಯಾತೀತ ನೆಲೆಯಲ್ಲಿ ಸರ್ವಧರ್ಮಗಳನ್ನು ಗೌರವಿಸುತ್ತಾ ದೇಶದ ಅಭಿವೃದ್ಧಿಯ ಚಿಂತನೆ ಮಾಡುವುದು ಪಕ್ಷದ ಮೂಲ ಉದ್ದೇಶ. ಬಿಜೆಪಿ ಪಕ್ಷ ಇಂದು ಯುವಕರನ್ನ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಆದರೆ ಕಾಂಗ್ರೆಸ್ ಯುವಕರ ಜವಾಬ್ದಾರಿಯನ್ನ ಅವರಿಗೆ ತಿಳಿ ಹೇಳಿ ಯುವ ಶಕ್ತಿಗಳು ದೇಶಾಭಿವೃದ್ಧಿಯಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿದೆ. ಹೀಗಾಗಿ ಬಿಜೆಪಿಯ ಸುಳ್ಳು ಮಾತಿಗೆ ಬಲಿ ಬೀಳದೆ ಯುವ ಸಮುದಾಯ ದೇಶಾಭಿವೃದ್ಧಿಯ ಯೋಜನೆುಲ್ಲಿ ತೊಡಗಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಹಿರಿಯಡ್ಕ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧೀರ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸಂಧ್ಯಾ ಶೆಟ್ಟಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಬ್ಲೋಸಂ ಫೆರ್ನಾಂಡಿಸ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಕೆಎಂಡಿಸಿ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಬಲ ಕುಂದರ್, ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹೆಲನ್ ಫೆರ್ನಾಂಡಿಸ್, ಎಸ್ಸಿ ಘಟಕದ ಅಧ್ಯಕ್ಷ ಗಿರೀಶ್ ಗುಡ್ಡೆಅಂಗಡಿ ಮುಂತಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ ಗಿರೀಶ್ ಕುಮಾರ್ ವಂದಿಸಿದರು. ಆಬಿದ್ ಅಲಿ ಕಾರ್ಯಕ್ರಮ ನಿರ್ವಹಿಸಿದರು.