ಕಾರ್ಕಳ: ಪ್ರಥಮ ಚಿಕಿತ್ಸೆ ತರಬೇತಿ, ಪ್ರಾತ್ಯಕ್ಷಿಕೆ

ಉಡುಪಿ, ಸೆ.26: ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ, ಯುವ ರೆಡ್ಕ್ರಾಸ್ ಘಟಕ ಮತ್ತು ರೋಟರ್ಯಾಕ್ಟ್ ಕ್ಲಬ್ನ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಕಾರ್ಕಳದ ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
ಕೊಡಗು ಇನ್ಸ್ಟಿಟ್ಯೂಟ್ ಆಪ್ ಮೆಡಿಕಲ್ ಸಾಯನ್ಸ್ನ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥರೂ, ಉಡುಪಿಯ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಖಜಾಂಚಿಯಾ ಆದ ಪ್ರೊ. ಡಾ.ರಾಮಚಂದ್ರ ಕಾಮತ್, ಪ್ರಥಮ ಚಿಕಿತ್ಸೆ ಬಗ್ಗೆ ಸಮಗ್ರ ಮಾಹಿತಿಯನ್ನು ವಿವಿಧ ರೀತಿಯ ಪ್ರಾತ್ಯಕ್ಷಿಕೆ ಹಾಗೂ ಉದಾಹರಣೆಗಳ ಸಹಿತ ನೀಡಿದರು.
ಯಾವುದೇ ವ್ಯಕ್ತಿ ಗಾಯಗೊಂಡಾಗ ಅಥವಾ ಅಸ್ವಸ್ಥರಾದಾಗ, ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ದೊರೆಯುವ ಮುಂಚಿನ ಅವಧಿಯು ಅತ್ಯಂತ ಪ್ರಾಮುಖ್ಯವಾಗಿದ್ದು, ಅಂತಹವರಿಗೆ ಪ್ರಥಮ ಚಿಕಿತ್ಸೆ ನೀಡುವುದರಿಂದ ಪ್ರಾಣಾಪಾಯವನ್ನು ತಡೆಯಬಹುದಲ್ಲದೇ ರೋಗಿ ಶೀಘ್ರ ಚೇತರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದವರು ವಿವರಿಸಿದರು.
ಪ್ರಥಮ ಚಿಕಿತ್ಸೆಯನ್ನು ಯಾರು ಬೇಕಾದರೂ ನೀಡಬಹುದು. ಪ್ರತಿ ಯೊಬ್ಬರೂ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ಬಗ್ಗೆ ತಿಳಿದುಕೊಂಡಿರ ಬೇಕಾದುದು ಇಂದಿನ ಅಗತ್ಯ ಎಂದ ಡಾ.ಕಾಮತ್, ವಿಷಜಂತು ಕಡಿತ, ಅಪಘಾತ, ವಿದ್ಯುದಾಘಾತ ಮುಂತಾದ ವಿವಿಧ ಸಂದರ್ಗಳಲ್ಲಿ ನೀಡಬೇಕಾದ ಪ್ರಥಮ ಚಿಕಿತ್ಸೆಯ ಬಗ್ಗೆ ಸವಿಸ್ತಾರವಾಗಿ ಹೇಳಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ಶ್ರೀವರ್ಮ ಅಜ್ರಿ ಎಂ. ವಹಿಸಿದ್ದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸದಸ್ಯರೂ, ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ಸಂಚಾಲಕರಾದ ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ತ್ರೈಮಾಸಿಕ ವಾರ್ತಾಸಂಚಿಕೆ ‘ವಿಂಧುಜಾ’ ವನ್ನು ಡಾ. ರಾಮಚಂದ್ರ ಕಾಮತ್ ಅನಾವರಣಗೊಳಿಸಿದರು. ಮ್ಯಾನೇಜ್ ಮೆಂಟ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ದಿವ್ಯಾ ಪ್ರಭು ಪಿ. ವಂದಿಸಿದರು. ರಕ್ಷಿತಾ ಹೆಚ್. ಆರ್. ನಿರೂಪಿಸಿದರು.







