ಭಾನುಪ್ರಕಾಶ್ ವಿರುದ್ಧ ದಲಿತರ ಪ್ರತಿಭಟನೆ

ಮದ್ದೂರು, ಸೆ.26: ಅಸ್ಪೃಶ್ಯತೆ ಆಚರಣೆ ಇರದಿದ್ದರೂ ಇದೆಯೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆಂದು ಭಾನುಪ್ರಕಾಶ್ ಎಂಬವರ ವಿರುದ್ಧ ತಾಲೂಕಿನ ವಳೆಗೆರೆಹಳ್ಳಿ ದಲಿತ ಸಮುದಾಯದವರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಭಾನುಪ್ರಕಾಶ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ, ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಗ್ರಾಪಂ ಸದಸ್ಯೆ ನೇತ್ರಾವತಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ದೊರಕುವ ಸೌಲಭ್ಯಗಳನ್ನು ಪಡೆಯುವ ದುರದುದ್ದೇಶದಿಂದ ಭಾನುಪ್ರಕಾಶ್ ಅಸ್ಪೃಶ್ಯತೆ ಆಚರಣೆ ನಡೆಸುತ್ತಿದ್ದಾರೆಂದು ದೂರಿದರು.
ಮತ್ತೊಬ್ಬ ಗ್ರಾಪಂ ಸದಸ್ಯೆ ರಾಜಕುಮಾರಿ ಮಾತನಾಡಿ, ಭಾನುಪ್ರಕಾಶ್ಗೆ ಈಗಾಗಲೇ ಎರಡು ಆಶ್ರಯ ಮನೆ, ಎರಡು ಶೌಚಾಲಯವನ್ನು ಗ್ರಾಮ ಪಂಚಾಯತ್ ನಿರ್ಮಿಸಿಕೊಟ್ಟಿದೆ. ತನ್ನ ಮನೆಯ ಎದುರಿನ ನಿವೇಶನ ಕಬಳಿಸಲು ಸಲ್ಲದ ಆರೋಪ ಮಾಡುತ್ತಿದ್ದು, ಕೂಡಲೇ ಜಿಲ್ಲಾಡಳಿತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಿ.ವಸಂತ, ಚಯಬೋರಮ್ಮ, ಸುಶೀಲಮ್ಮ, ಜಯಮ್ಮ, ರಾಮು, ಪರಮೇಶ್, ಶಂಕರ್, ರಾಮರಾಜು, ಚಾಮನಹಳ್ಳಿ ಕುಮಾರ್, ದೇವರಾಜು, ಮನೋಹರ್, ಪರಮೇಶ್, ಶಂಕರ್, ರಾಮರಾಜು, ಶಿಲ್ಪ, ಬಿಳಿಯಪ್ಪ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







