ದ.ಕ. ಜಿಲ್ಲೆಗೆ ‘ಸ್ವಚ್ಛತಾ ದರ್ಪಣ್’ ಪ್ರಶಸ್ತಿ
ದೇಶದ ಪ್ರಥಮ ರ್ಯಾಂಕಿಂಗ್ ನ 46 ಜಿಲ್ಲೆಗಳಲ್ಲಿ ದ.ಕ.
ಮಂಗಳೂರು, ಸೆ.27: ಕೇಂದ್ರ ಸರಕಾರದಿಂದ ಸ್ವಚ್ಛತೆಗಾಗಿ ಇದೇ ಮೊದಲ ಬಾರಿಗೆ ನೀಡಲಾಗುತ್ತಿರುವ ‘ಸ್ವಚ್ಛತಾ ದರ್ಪಣ್’ ಪ್ರಶಸ್ತಿಗೆ ದ.ಕ. ಜಿಲ್ಲೆ ಆಯ್ಕೆಯಾಗಿದೆ. ದ.ಕ. ಜಿಲ್ಲಾ ಪಂಚಾಯತ್ನ ಮಿನಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ, ಈ ಪ್ರಶಸ್ತಿಗಾಗಿ ಪ್ರಥಮ ರ್ಯಾಂಕಿಂಗ್ನಲ್ಲಿರುವ ದೇಶದ ವಿವಿಧ ರಾಜ್ಯಗಳ 46 ಜಿಲ್ಲೆಗಳಲ್ಲಿ ದ.ಕ. ಹಾಗೂ ನೆರೆಯ ಉಡುಪಿ ಜಿಲ್ಲೆ ಕೂಡಾ ಸೇರಿರುವುದು ಹೆಮ್ಮೆಯ ಸಂಗತಿ ಎಂದರು.
ಅಕ್ಟೋಬರ್ 2ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ ಎಂದು ಅವರು ಹೇಳಿದರು.
►ಅಕ್ಟೋಬರ್ 15ರೊಳಗೆ ಬಾಕಿ ಇರುವ 3,230 ಕುಟುಂಬಗಳಿಗೆ ಶೌಚಾಲಯ
ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆ ಹಾಗೂ ಅಡ್ಡ ಪರಿಶೀಲನೆಯಿಂದ ದೊರಕಿರುವ ವರದಿಯಂತೆ ಬಾಕಿ ಇರುವ 3,230 ಕುಟುಂಬಗಳಿಗೆ ಅಕ್ಟೋಬರ್ 15ರೊಳಗೆ ವಿವಿಧ ಯೋಜನೆಗಳಡಿ ಶೌಚಾಲಯ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಕಳೆದ ವರ್ಷ ಅಕ್ಟೋಬರ್ 2ರಂದು ದ.ಕ. ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿತ್ತು. 2012ರಿಂದ 16ರವರೆಗಿನ ಬೇಸ್ ಲೈನ್ ಸರ್ವೇ ಪ್ರಕಾರ ಪಂಚತಂತ್ರದಲ್ಲಿ ದಾಖಲಾಗಿದ್ದ, 2,89,746 ಕುಟುಂಬಗಳ ಮಾಹಿತಿಯ ಆಧಾರದಲ್ಲಿ ಈ ಘೋಷಣೆ ನೀಡಲಾಗಿತ್ತು. ಬಳಿಕ ಪ್ರಸಕ್ತ ಸಾಲಿನ ಆಗಸ್ಟ್ 16ರಿಂದ ಸೆಪ್ಟಂಬರ್ 20ರವರೆಗೆ ಜಿಲ್ಲೆಯ 230 ಗ್ರಾಮ ಪಂಚಾಯತ್ಗಳ 366 ಗ್ರಾಮಗಳು ಬಯಲು ಬಹಿರ್ದೆಸೆಯಿಂದ ಮುಕ್ತವಾಗಿರುವ ಬಗ್ಗೆ ಸಾಮಾಜಿಕ ಪರಿಶೋಧನೆ ನಡೆಸಲಾಗಿತ್ತು. ಒಟ್ಟು 3,00,695 ಮನೆಗಳನ್ನು ಸಮೀಕ್ಷೆ ನಡೆಸಲಾಗಿದ್ದು, ಅದರನ್ವಯ 4,590 ಕುಟುಂಬಗಳಿಗೆ ಶೌಚಾಲಯವಿಲ್ಲವೆಂದು ವರದಿಯಾಗಿತ್ತು. ಕಳೆದ ಮಾರ್ಚ್ನಿಂದ ಈವರೆಗೆ ಈ ಅವಧಿಯಲ್ಲಿ 10,849 ಕುಟುಂಬಗಳು ಹೆಚ್ಚಳವಾಗಿವೆ. ಆದರೆ ಕಳೆದ ವರ್ಷ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲು ನಿಗದಿಪಡಿಸಿದ ಗುರಿಯನ್ನು ಮೀರಿ ಸಾಧನೆ ಆಗಿದೆ. ಹಾಗಿದ್ದರೂ ಸಾಮಾಜಿಕ ಪರಿಶೋಧನಾ ವರದಿ ಬಂದ ಬಳಿಕ ಸಂಬಂಧಪಟ್ಟ ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳಿಂದ ಪುನರ್ ಪರಿಶೀಲನೆ ನಡೆಸಿದಾಗ 3,937 ಕುಟುಂಬಗಳಿಗೆ ಶೌಚಾಲಯ ಇಲ್ಲದಿರುವುದು ದೃಢಪಟ್ಟಿದೆ. ಸಾಮಾಜಿಕ ಪರಿಶೋಧನಾ ವರದಿ ಹಾಗೂ ಪಿಡಿಒಗಳ ವರದಿಯಲ್ಲಿನ ವ್ಯತ್ಯಾಸದಂತೆ 653 ಮನೆಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಅವರು ವಿವರ ನೀಡಿದರು.
ಪ್ರಸ್ತುತ ದೊರಕಿರುವ ಮಾಹಿತಿಯಂತೆ 3,937 ಕುಟುಂಬಗಳಲ್ಲಿ 707 ಮನೆನಂಬ್ರ ರಹಿತ ಕುಟುಂಬಗಳಾಗಿದ್ದು, ಉಳಿದ 3,230 ಕುಟುಂಬಗಳಿಗೆ ಮಿಷನ್ ಅಂತ್ಯೋದಯ, ಗ್ರಾಮ ಪಂಚಾಯತ್ ನಿಧಿ, ನಿರ್ಮಲ ಗ್ರಾಮ ಪ್ರಶಸ್ತಿ ಮೊತ್ತದ ಬಡ್ಡಿ ಹಣದಲ್ಲಿ, ಸ್ವಸಹಾಯ ಸಂಘದ ಆಂತರಿಕ ಸಾಲ, ಸಹಕಾರಿ ಸೇವಾ ಸಂಘದಿಂದ ಬ್ಯಾಂಕ್ ಸಾಲ, ಫಲಾನುಭವಿಯ ಸ್ವಂತ ಹಣ, ದಾನಿಗಳ ಕೊಡುಗೆಯ ಮೂಲಕ ಶೌಚಾಲಯ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮನೆ ನಂಬ್ರ ಇಲ್ಲದ ಕುಟುಂಬಗಳಲ್ಲಿ 94 ಸಿಯಡಿ ಅರ್ಜಿ ಸಲ್ಲಿಸಿದವರಿಗೆ ಮುಂದಿನ ದಿನಗಳಲ್ಲಿ ಶೌಚಾಲಯ ಲಭ್ಯವಾಗಲಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲಿದೆ ಎಂದು ಸಿಇಒ ಡಾ.ಎಂ.ಆರ್. ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪ ಕಾರ್ಯದರ್ಶಿ ಉಮೇಶ್ ಉಪಸ್ಥಿತರಿದ್ದರು.