ಮಡೆಸ್ನಾನ-ಬೆತ್ತಲೆ ಸೇವೆಗೆ ಅವಕಾಶವಿಲ್ಲ: ಟಿ.ಬಿ.ಜಯಚಂದ್ರ
ಮೌಢ್ಯ ಪ್ರತಿಬಂಧಕ ವಿಧೇಯಕಕ್ಕೆ ಸಂಪುಟ ಅನುಮೋದನೆ

ಬೆಂಗಳೂರು, ಸೆ.27: ರಾಜ್ಯದಲ್ಲಿ ಬಹು ಚರ್ಚಿತ ಹಾಗೂ ಪ್ರಗತಿಪರರ ವಲಯದಲ್ಲಿ ಬಹು ನಿರೀಕ್ಷಿತ ಮೌಢ್ಯ ಪ್ರತಿಬಂಧಕ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ವಿಧೇಯಕದಲ್ಲಿ ಬೇರೆಯವರು ಊಟ ಮಾಡಿದ ಎಂಜಲೆಲೆಯ ಮೇಲೆ ಉರುಳುವ ಅಮಾನವೀಯ ಸಂಪ್ರದಾಯ ಮಡೆ ಸ್ನಾನ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುವ ಅನಿಷ್ಟ ಪದ್ಧತಿ ಬೆತ್ತಲೆ ಸೇವೆಗೆ ಅವಕಾಶವಿಲ್ಲ. ಆದರೆ, ಪೂಜೆ-ಪುನಸ್ಕಾರಗಳಂತಹ ಧಾರ್ಮಿಕ ಆಚರಣೆಗಳು ಹಾಗೂ ವಾಸ್ತು-ಜ್ಯೋತಿಷ್ಯಗಳಂತಹ ಸಾಂಪ್ರದಾಯಿಕ ಪದ್ಧತಿಗಳಿಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.
‘ಅಮಾನವೀಯ ದುಷ್ಟ ಮತ್ತು ವಾಮಾಚಾರ ಪ್ರತಿಬಂಧಕ ಮತ್ತು ನಿರ್ಮೂಲನ ವಿಧೇಯಕ-2017’ ಎಂದು ಕರೆಯಲಾಗುವ ಈ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಿ, ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆ ನಡೆಸಿ ಒಪ್ಪಿಗೆ ಪಡೆದ ನಂತರ ನಿಯಮಾವಳಿಗಳನ್ನು ರೂಪಿಸಲಾುವುದು ಎಂದ ಅವರು, ಈ ವಿಧೇಯಕದಲ್ಲಿ ದೆವ್ವ ಬಿಡಿಸುವುದು ಎಂದು ಹೇಳಿ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಹಗ್ಗದಲ್ಲಿ ಅಥವಾ ಕಬ್ಬಿಣದ ಸರಳುಗಳಲ್ಲಿ ಕಟ್ಟಿ ಹಾಕಿ ಬೆತ್ತದಲ್ಲಿ ಅಥವಾ ಚಾಟಿಯಲ್ಲಿ ಹೊಡೆಯುವುದು, ಆ ವ್ಯಕ್ತಿಗೆ ಪಾದರಕ್ಷೆಯನ್ನು ಮುಳುಗಿಸಿದ ನೀರನ್ನು ಕುಡಿಸುವುದು, ಮೇಲ್ಛಾವಣಿಗೆ ನೇತು ಹಾಕಿ ಮೆಣಸಿನಕಾಯಿ ಹೊಗೆ ಹಾಕುವುದು, ಕಬ್ಬಿಣದ ಸಲಾಖೆಯನ್ನು ಕಾಯಿಸಿ ದೇಹದ ಅಂಗಾಂಗದ ಮೇಲೆ ಬರೆ ಎಳೆಯುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದರು.
ಬಲವಂತವಾಗಿ ಹಾಗೂ ಬಹಿರಂಗವಾಗಿ ಲೈಂಗಿಕ ಕ್ರಿಯೆ ನಡೆಸುವಂತೆ ಪ್ರಚೋದಿಸುವುದು ಮತ್ತು ಪ್ರೇರೇಪಿಸುವುದು, ಒತ್ತಾಯಪೂರ್ವಕವಾಗಿ ಮಲವನ್ನು ತಿನ್ನಿಸುವುದು ಅಥವಾ ಮೂತ್ರವನ್ನು ಕುಡಿಸುವಂತಹ ಅನಿಷ್ಟ ಹಾಗೂ ಕ್ರೂರ ಪದ್ಧತಿಗಳು ಅಪರಾಧಗಳಾಗು್ತವೆ ಎಂದು ತಿಳಿಸಿದರು.
ಋತುಮತಿಯಾದ ಯುವತಿಯನ್ನು ಅಥವಾ ಗರ್ಭವತಿಯಾದ ಮಹಿಳೆಯನ್ನು ಪ್ರತ್ಯೇಕಿಸುವುದೂ ಅಪರಾಧವೆ. ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಾಗಿ ಕೈ ಬೆರಳಿನಲ್ಲಿಯೇ ಚಿಕಿತ್ಸೆ ನಡೆಸುವುದಾಗಿ ತಿಳಿಸುವುದು ಅಥವಾ ಸ್ತ್ರೀ ಗರ್ಭದಲ್ಲಿರುವ ಭ್ರೂಣದ ಲಿಂಗ ಬದಲಾವಣೆ ಮಾಡುವುದಾಗಿ ವಂಚಿಸುವುದನ್ನು ಅಪರಾಧ ಎಂದೆ ಪರಿಗಣಿಸಲ್ಪಡುತ್ತವೆ ಎಂದು ವಿವರಣೆ ನೀಡಿದರು.
ನಾಯಿ, ಹಾವು ಅಥವಾ ಚೇಳು ಕಡಿತಕ್ಕೆ ಮಂತ್ರ-ತಂತ್ರ ಅಥವಾ ಯಂತ್ರಗಳನ್ನು ಹಾಕಿಸಿಕೊಳ್ಳುವಂತೆ ಸಲಹೆ ನೀಡುವುದೂ ಕೂಡಾ ಈ ವಿಧೇಯಕದಂತೆ ಅಪರಾಧವಾಗುತ್ತದೆ. ಆದರೆ, ಈ ವಿಧೇಯಕದಲ್ಲಿ ವಾಸ್ತು ಹಾಗೂ ಜ್ಯೋತಿಷ್ಯಗಳಂತಹ ಸಾಂಪ್ರದಾಯಿಕ ಪದ್ಧತಿಗಳಿಗೆ ಅಭ್ಯಂತರವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಅಂತೆಯೇ, ಕಿವಿ-ಮೂಗು ಚುಚ್ಚುವ, ಚೌಲ ಅಥವಾ ಕೇಶ ಮುಂಡನದಂತಹ ಧಾರ್ಮಿಕ ಆಚರಣೆಗಳಿಗೂ ಯಾವುದೇ ನಿರ್ಬಂಧಗಳಿಲ್ಲ. ಹಬ್ಬ-ಜಾತ್ರೆಗಳ ಸಂದರ್ಭಗಳಲ್ಲಿ ಸ್ವಯಂ ಪ್ರೇರಿತವಾಗಿ ಬೆಂಕಿ ಮೇಲೆ ನಡೆಯುವ ಅಥವಾ ಕೆಂಡ ಹಾಯುವ ಆಚರಣೆಗೂ ನಿಷೇಧವಿಲ್ಲ ಎಂದು ಹೇಳಿದರು.
ಮನೆಯಲ್ಲಿ, ದೇವಾಲಯ-ದೇಗುಲಗಳಲ್ಲಿ, ಮಸೀದಿ-ದರ್ಗಾಗಳಲ್ಲಿ, ಗುರುದ್ವಾರ-ಪಗೋಡಗಳಲ್ಲಿ, ಚರ್ಚ್ಗಳಲ್ಲಿ ಹೀಗೆ ಎಲ್ಲ ಧರ್ಮಗಳ ಧಾರ್ಮಿಕ ಆಚರಣೆಗಳಾದ ಪ್ರಾರ್ಥನೆ, ಉಪಾಸನೆ, ಹರಿಕಥೆ, ಕೀರ್ತನೆ, ಭಜನೆ, ಪ್ರವಚನಗಳು ಈ ವಿಧೇಯಕದಿಂದ ಅಬಾಧಿತವಾಗಿರುತ್ತವೆ ಎಂದು ತಿಳಿಸಿದರು.
ಹಲ್ಲೆ, ಹಿಂಸೆ, ಬಾನಾಮತಿ, ಮಾಯ, ಮಾಟ-ಮಂತ್ರಕ್ಕೆ ಕಡಿವಾಣ ಹಾಕಲಿರುವ ಈ ವಿಧೇಯಕವು ಒಟ್ಟಾರೆ ಕಾನೂನಾತ್ಮಕವಾಗಿ ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ. ಸದನವು ಒಪ್ಪಿಗೆ ನೀಡಿದರೆ ಹೊಸ ಅಂಶಗಳನ್ನು ಸೇರ್ಪಡೆ ಮಾಡಲು ಅಥವಾ ಇರುವ ಅಂಶಗಳನ್ನು ಕೈ ಬಿಡಲು ಮುಕ್ತ ಅವಕಾಶ ಕಲ್ಪಿಲಾಗಿದೆ ಎಂದರು.
ರಾಜ್ಯದಲ್ಲಿನ ಪ್ರಗತಿಪರ ಚಿಂತಕರು, ವಿಚಾರವಾದಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಕಾನೂನು ತಜ್ಞರು ನೀಡಿರುವ ಮನವಿಯನ್ನು ಆಧರಿಸಿ ಮಹಾರಾಷ್ಟ್ರ ಮಾದರಿಯಲ್ಲಿಯೆ ರಾಜ್ಯದಲ್ಲಿಯೂ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ಜಯಚಂದ್ರ ವಿವರಿಸಿದರು.







